ಮಲೆ ಮಹದೇಶ್ವರ ಬೆಟ್ಟದಲ್ಲಿ ಧಾರ್ಮಿಕ ಸೇವೆಗಳ ಮಹಾಪೂರ
ಚಾಮರಾಜನಗರ, ನವೆಂಬರ್ 3: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸುತ್ತಿದ್ದಂತೆಯೇ, ಭಕ್ತರು ಮಾದಪ್ಪನ ದರ್ಶನಕ್ಕೆ ಹಾತೊರೆದು ಬರುತ್ತಿದ್ದು, ವಿವಿಧ ಸೇವೆಗಳನ್ನು ಮುಗಿಬಿದ್ದು ಮಾಡಿಸುತ್ತಿದ್ದಾರೆ.
ಸೋಮವಾರ ಒಂದೇ ದಿನದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ 67 ಚಿನ್ನದ ರಥ ಸೇವೆ, 471 ಹುಲಿ ವಾಹನ ಸೇವೆ, 50 ಬಸವ ವಾಹನ ಸೇವೆ, 27 ರುದ್ರಾಕ್ಷಿ ವಾಹನ ಸೇವೆ ಇದರ ಜೊತೆಗೆ 1467 ಮುಡಿ ಸೇವೆಯನ್ನು ಭಕ್ತರು ಮಲೆ ಮಹದೇಶ್ವನಿಗೆ ಸಮರ್ಪಣೆ ಮಾಡಿರುವುದಾಗಿ ಮಹದೇಶ್ವರ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.
ಮಲೆ ಮಹದೇಶ್ವರ ದೇವಾಲಯದ ಭಕ್ತರಿಗೆ ವಿಶೇಷ ಸೂಚನೆಗಳು
ನಿರ್ಬಂಧ ತೆರವುಗೊಳಿಸಿದ ಜಿಲ್ಲಾಧಿಕಾರಿ
ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಸಂದರ್ಭ ಮಲೆಮಹದೇಶ್ವರ ಬೆಟ್ಟದಲ್ಲಿ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ನಿರ್ಬಂಧ ತೆರವು ಗೊಳಿಸಲಾಗಿದ್ದು, ದೇವಾಲಯದ ಎಲ್ಲ ಸೇವೆಗಳು ಪುನರಾರಂಭಗೊಂಡಿವೆ. ಸದ್ಯ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಸೋಹ ಮತ್ತು ಜಾತ್ರೆಗಳನ್ನು ಹೊರತುಪಡಿಸಿ ಇಲ್ಲಿ ನಡೆಯುತ್ತಿದ್ದ ದೈನಂದಿನ ಸಾಂಪ್ರದಾಯಿಕ ಸೇವೆಗಳು ಹಾಗೂ ಪೂಜಾ ಕೈಂಕರ್ಯಗಳನ್ನು ನಡೆಸಲು ನಿಗದಿಪಡಿಸಿದ್ದ ಕಾಲಮಿತಿ, ಭಕ್ತಾಧಿಗಳ ವಾಸ್ಯವ್ಯ ಮತ್ತು ಮುಡಿಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ ಬೆನ್ನಲ್ಲೇ ಬೆಳಿಗ್ಗೆ 4ರ ಅಭಿಷೇಕ, ಸಂಜೆ 7ರ ಅಭಿಷೇಕ, ಎಲ್ಲ ಪೂಜಾ ಕೈಂಕರ್ಯಗಳು, ಉತ್ಸವಾದಿ ಸೇವೆಗಳನ್ನು ಭಕ್ತರು ಮಹದೇಶ್ವರನಿಗೆ ಮಾಡುತ್ತಿದ್ದಾರೆ.
ಅಭಿಷೇಕ, ಪೂಜೆ, ಸೇವೆಗಳಿಗೆ ಅವಕಾಶ
ಈ ಹಿಂದೆ ದೇವರ ದರ್ಶನ ವ್ಯವಸ್ಥೆ ಮಾತ್ರ ಇತ್ತು, ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳುವಂತಿರಲಿಲ್ಲ. ಇದೀಗ ನಿರ್ಬಂಧ ತೆಗೆದು ಹಾಕಲಾಗಿದ್ದು, ಭಕ್ತರು ಎಂದಿನಂತೆ ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಮಾಡಿಸಬಹುದಾಗಿದೆ. ಆದರೆ 12 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಹಾಗೂ 65 ವರ್ಷಕ್ಕಿಂತ ಹೆಚ್ಚು ಇರುವ ವ್ಯಕ್ತಿಗಳಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶವಿಲ್ಲ. ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಇದ್ದ ದರ್ಶನ ಹಾಗೂ ಎಲ್ಲ ಸೇವೆಗಳನ್ನು ಬೆಳಿಗ್ಗೆ 4 ರಿಂದ ರಾತ್ರಿ 10 ರವರೆಗೆ ವಿಸ್ತರಿಸಲಾಗಿದೆ. ದಾಸೋಹದಲ್ಲಿ ಹಾಲಿ ಇರುವ ತಿಂಡಿ, ಪ್ರಸಾದ ಸೇವೆ ಮಾತ್ರ ಇರಲಿದೆ. ಊಟದ ವ್ಯವಸ್ಥೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾಟೇಜು, ಡಾರ್ಮಿಟರಿಗಳನ್ನೂ ಸಹ ನೀಡಲಾಗುವುದು
ಭಕ್ತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಮುಡಿಸೇವೆಯನ್ನು ಮತ್ತೆ ಆರಂಭಿಸಲಾಗಿದೆ. ಅಲ್ಲದೆ ರಾತ್ರಿ ದೇವಾಲಯದ ವಸತಿ ಗೃಹಗಳಲ್ಲಿ ತಂಗುವ ವ್ಯವಸ್ಥೆ ಪ್ರಾರಂಭವಾಗಿದೆ. ಕಾಟೇಜು, ಡಾರ್ಮಿಟರಿಗಳನ್ನೂ ಸಹ ನೀಡಲಾಗುವುದು. ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗಿದೆ. ಯಾವುದೇ ಕೊಠಡಿ, ಕಾಟೇಜು ಅಥವಾ ಡಾರ್ಮಿಟರಿ ಖಾಲಿ ಆದಾಗ ಅವುಗಳನ್ನು ತಕ್ಷಣ ಶುದ್ಧೀಕರಿಸಲು, ವಿಶೇಷವಾಗಿ ಸ್ಯಾನಿಟೈಸ್ ಮಾಡಿಸಿ ಎಲ್ಲ ವಸ್ತ್ರಗಳನ್ನು ಬದಲಿಸಲಾಗುವುದು. ಇದಕ್ಕಾಗಿ ನೂರು ರೂಪಾಯಿ ಶುಲ್ಕವನ್ನು ಹೆಚ್ಚುವರಿಯಾಗಿ ಪ್ರತಿ ಕೊಠಡಿಗೆ ವಿಧಿಸಲಾಗುವುದು.
Recommended Video
ಭಕ್ತರಿಗೆ ವಾಸ್ತವ್ಯಕ್ಕೂ ಅವಕಾಶ
ರಾತ್ರಿ ವಸತಿ ಗೃಹಗಳು ಹಾಗೂ ಕಾಟೇಜು, ಡಾರ್ಮಿಟರಿ ಹೊರತುಪಡಿಸಿ, ರಂಗಮಂದಿರ, ದೇವಾಲಯದ ಮುಂದೆ ಅಥವಾ ಇನ್ಯಾವುದೇ ಜಾಗದಲ್ಲಿ ರಾತ್ರಿ ಭಕ್ತಾದಿಗಳು ತಂಗುವುದನ್ನು ನಿಷೇಧಿಸಿದೆ. ಭಕ್ತಾದಿಗಳು ಕೊರೊನಾ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು, ಸಾಮಾಜಿಕ ಅಂತರ ಕಾಪಾಡಬೇಕಾಗಿದೆ ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.