ಕರ್ನಾಟಕ ಅರಣ್ಯ ಅಧಿಕಾರಿ ಕೈಗೊಂಡ ಕ್ರಮಕ್ಕೆ ಸಲ್ಯೂಟ್ ಎಂದ ನಟ!
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗೆ ಗುಂಡು ಹಾರಿಸಿ, ಅದನ್ನ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಇಬ್ಬರು ಅರಣ್ಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಅರಣ್ಯ ಇಲಾಖೆಯ ತಾತ್ಕಾಲಿಕ ಸಿಬ್ಬಂದಿ ರಹೀಂ ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇನ್ನೂ ವಿಚಾರಣೆ ಬಳಿಕ ಅರಣ್ಯ ಇಲಾಖೆಯ ಖಾಯಂ ಸಿಬ್ಬಂದಿ ಉಮೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಂಡೀಪುರ ಹುಲಿ ರಕ್ಷಿತಾರಣ್ಯದ ಫೀಲ್ಡ್ ಡೈರೆಕ್ಟರ್ ಟಿ.ಬಾಲಚಂದ್ರನ್ ತಿಳಿಸಿದ್ದಾರೆ.
ವಿಡಿಯೋ; ಬಂಡೀಪುರದಲ್ಲಿ ಆನೆಗೆ ಸುಖಾಸುಮ್ಮನೆ ಗುಂಡು ಹೊಡೆದ ಸಿಬ್ಬಂದಿ
ಅಮಾನವೀಯ ವರ್ತನೆ ತೋರಿದ ಅರಣ್ಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡ ಟಿ.ಬಾಲಚಂದ್ರನ್ ಗೆ ಬಾಲಿವುಡ್ ನಟ, ಪ್ರಾಣಿ ಪ್ರಿಯ ರಣ್ದೀಪ್ ಹೂಡಾ ಟ್ವಿಟ್ಟರ್ ನಲ್ಲಿ ಸೆಲ್ಯೂಟ್ ಹೊಡೆದಿದ್ದಾರೆ.
|
ಟ್ವೀಟ್ ಮಾಡಿದ ರಣ್ದೀಪ್ ಹೂಡಾ
''ವಿಕೃತಿ ಮೆರೆದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಂಡೀಪುರ ಹುಲಿ ರಕ್ಷಿತಾರಣ್ಯದ ಫೀಲ್ಡ್ ಡೈರೆಕ್ಟರ್ ಟಿ.ಬಾಲಚಂದ್ರನ್ (ಐ.ಎಫ್.ಎಸ್) ಅವರನ್ನು ನಾನು ಅಭಿನಂದಿಸುತ್ತೇನೆ. ವನ್ಯಜೀವಿಗಳ ವಿರುದ್ಧ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಇದು ಸ್ಪಷ್ಟವಾಗಿ ರವಾನಿಸುತ್ತದೆ'' ಎಂದು ನಟ ರಣ್ದೀಪ್ ಹೂಡಾ ಟ್ವೀಟ್ ಮಾಡಿದ್ದಾರೆ.
ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದ ರಣ್ದೀಪ್
ಅಸಲಿಗೆ, ಈ ಹಿಂದೆ ಅರಣ್ಯ ಇಲಾಖೆಯ ಉಮೇಶ್ ಮತ್ತು ರಹೀಂ ಆನೆಗೆ ಗುಂಡು ಹಾರಿಸಿದ್ದ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ನಟ ರಣ್ದೀಪ್ ಹೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ವಿಕೃತಿ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಣ್ದೀಪ್ ಹೂಡ ಒತ್ತಾಯಿಸಿದ್ದರು.
ಪ್ರಾಣಿ ಪ್ರಿಯ
ಅಂದ್ಹಾಗೆ, ನಟ ರಣ್ದೀಪ್ ಹೂಡಾ ಪ್ರಾಣಿ ಪ್ರೇಮಿ. ದಾರಿತಪ್ಪಿದ ಶ್ವಾನಕ್ಕೆ 'ಕ್ಯಾಂಡಿ' ಅಂತ ನಾಮಕರಣ ಮಾಡಿ ಸಾಕುತ್ತಿರುವ ರಣ್ದೀಪ್ ಹೂಡಾ ವನ್ಯಜೀವಿಗಳ ಕುರಿತು ಅಪಾರ ಕಾಳಜಿ ಹೊಂದಿದ್ದಾರೆ.
ಬಾಲಿವುಡ್ ನಟ
ಹರ್ಯಾಣ ಮೂಲದ 43 ವರ್ಷದ ರಣ್ದೀಪ್ ಹೂಡಾ, 'ಹೀರೋಯಿನ್', 'ಮರ್ಡರ್ 3', 'ಹೈವೇ', 'ಕಿಕ್', ಸರ್ಬ್ಜಿತ್', 'ಲವ್ ಆಜ್ ಕಲ್ 2' ಮುಂತಾದ ಚಿತ್ರಗಳಲ್ಲಿ ರಣ್ದೀಪ್ ಹೂಡಾ ಅಭಿನಯಿಸಿದ್ದಾರೆ.