ಭರವಸೆ ಈಡೇರಿಸದ ಸರ್ಕಾರ. ಗುಂಡ್ಲುಪೇಟೆಯಲ್ಲಿ ನೀರಿಗೆ ಪರದಾಟ!
ಚಾಮರಾಜನಗರ, ಜುಲೈ 05 : ಇತ್ತೀಚೆಗೆ ನಡೆದ ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ವೇಳೆ ಗ್ರಾಮಾಂತರ ಪ್ರದೇಶಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ವಾಗ್ದಾನವನ್ನು ಸರ್ಕಾರ ನೀಡಿತ್ತು. ಆದರೆ ಅದು ಚುನಾವಣಾ ಭರವಸೆ ಅಷ್ಟೆ ಎಂಬುದು ಇದೀಗ ಗೊತ್ತಾಗುತ್ತಿದೆ.
ಗುಂಡ್ಲುಪೇಟೆ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದರೆ ಕುಡಿಯುವ ನೀರಿಗಾಗಿ ಗ್ರಾಮೀಣ ಪ್ರದೇಶದ ಜನ ಪಡುತ್ತಿರುವ ಕಷ್ಟ ಕಣ್ಣಿಗೆ ರಾಚುತ್ತಿದೆ. ಎಲ್ಲಿ ನೋಡಿದರೂ ಖಾಲಿ ಬಿಂದಿಗೆ ಹಿಡಿದು ಓಡಾಡುವವರು, ನೀರಿನ ಟ್ಯಾಂಕ್ ಮುಂದೆ ಕಾಯುತ್ತಾ ನಿಂತವರು ಕಾಣಲು ಸಿಗುತ್ತಾರೆ.
ಬೇಸಿಗೆಯ ಕೊನೆಯಲ್ಲಿ ಈ ವ್ಯಾಪ್ತಿಯಲ್ಲಿ ಮಳೆ ಸುರಿದ ಕಾರಣ ಸ್ವಲ್ಪ ಮಟ್ಟಿಗೆ ನೀರಿನ ಬವಣೆ ಕಡಿಮೆಯಾಗಿತ್ತು. ಆ ನಂತರ ಮಳೆ ಬಾರದ ಕಾರಣ ಮತ್ತೆ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ.
ಕಳೆದ ಎರಡು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗಿರಲಿಲ್ಲ. ಈ ಬಾರಿ ಮಳೆ ಬಿದ್ದಿದ್ದರಿಂದ ರೈತರು ಸೇರಿದಂತೆ ಜನಸಾಮಾನ್ಯರು ಸಂತಸಪಟ್ಟಿದ್ದರು.
ಆದರೆ, ಇದೀಗ ಮಳೆ ಕೈಕೊಟ್ಟಿರುವುದು ಆತಂಕ ತಂದೊಡ್ಡಿದೆ. ಮನೆ ಬಳಕೆಗೆ, ಜನ ಜಾನುವಾರುಗಳಿಗೆ ನೀರು ಒದಗಿಸುವುದು ಕಷ್ಟವಾಗುತ್ತಿದೆ.
ಈಗಾಗಲೇ ಗುಂಡ್ಲುಪೇಟೆ ತಾಲೂಕಿನ ಶಿಂಡನಪುರ, ಕಗ್ಗಳ, ಚಿಕ್ಕತುಪ್ಪೂರು, ಮಲ್ಲಯ್ಯನಪುರ, ಕೂತನೂರು, ಭೀಮನಬೀಡು, ಬನ್ನೀತಾಳಪುರ, ಕೊಡಸೋಗೆ, ಬೊಮ್ಮಲಾಪುರ, ಶೆಟ್ಟಹಳ್ಳಿ, ಸೋಮನಪುರ, ಸೋಮಹಳ್ಳಿ, ಚಿಕ್ಕಾಟಿ, ತೊಂಡವಾಡಿ ಮುಂತಾದ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದರಿಂದ ನೀರು ದೊರೆಯದೆ ನೀರು ಸಿಗುವ ಕಡೆ ಹೋಗಿ ತರುವಂತಾಗಿದೆ.
ಪ್ರತಿದಿನ ಬೆಳಗ್ಗೆ ಎದ್ದು ಪುರುಷರು, ಮಹಿಳೆಯರೆನ್ನದೆ ಎಲ್ಲರೂ ನೀರನ್ನರಸಿಕೊಂಡು ಸೈಕಲ್, ಬೈಕ್ ಗಳಲ್ಲಿ ತೆರಳಿ ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ತಾಲೂಕಿನಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದು ಸರ್ಕಾರ ಹೇಳಿದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಸದ್ಯಕ್ಕೆ ಅನುಷ್ಠಾನಗೊಳ್ಳುವ ಸೂಚನೆ ಕಂಡು ಬಾರದ ಕಾರಣದಿಂದಾಗಿ ಸಮಸ್ಯೆ ಹಾಗೆಯೇ ಮುಂದುವರೆಯುತ್ತಿದೆ.