ರಾಜ್ಯ ಪ್ರವೇಶಿಸಿದ ಭಾರತ್ ಜೋಡೋ; ರಾಹುಲ್ ಗಾಂಧಿ ಸ್ವಾಗತಿಸಿದ ರಾಜ್ಯ ನಾಯಕರು
ಚಾಮರಾಜನಗರ, ಸೆಪ್ಟೆಂಬರ್ 30 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಂಡೀಪುರ ಅರಣ್ಯ ಪ್ರದೇಶದ ಮೂಲಕ ಶುಕ್ರವಾರ ರಾಜ್ಯ ಪ್ರವೇಶಿಸಿದೆ.
ಕಾಂಗ್ರೆಸ್ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯರನ್ನು ರಾಜ್ಯ ನಾಯಕರೇ ದಂಡೆ ಕೆಕ್ಕನಹಳ್ಳ ಚೆಕ್ ಪೋಸ್ಟ್ಗೆ ತೆರಳಿ ಸ್ವಾಗತಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಆರ್.ವಿ.ದೇಶಪಾಂಡೆ, ವೀರಪ್ಪ ಮೊಯಿಲಿ, ಕೆ.ಜೆ.ಜಾರ್ಜ್ ಸೇರಿದಂತೆ ಹತ್ತಾರು ನಾಯಕರುಗಳು ಭಾಗಿಯಾಗಿದ್ದಾರೆ.
2008 ರಲ್ಲಿ ಡಿಸ್ಕವರಿ ಇಂಡಿಯಾ, ಈಗ ಭಾರತ್ ಜೋಡೋ... ರಾಹುಲ್ ಗಾಂಧಿಯ 2 ಯಾತ್ರೆ ಗಡಿಜಿಲ್ಲೆಯಲ್ಲೇ ಆರಂಭ
ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದ ಎದುರು ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಇದಾದ ಬಳಿಕ, ಪಾದಯಾತ್ರೆ ಆರಂಭಿಸಲಿದ್ದಾರೆ. ನಂತರ ಸೋಲಿಗರು ಹಾಗೂ ಕಳೆದ ವರ್ಷ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಜೊತೆ ಸಂವಾದ ನಡೆಸಲಿದ್ದಾರೆ.
ವೇದಿಕೆ ಮೇಲೆ 240 ಮಂದಿ; ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬೃಹತ್ ಸಭೆ ನಡೆಯಲಿದ್ದು, ವೇದಿಕೆ ಮೇಲೆ 240 ಮಂದಿ ಆಸೀನರಾಗಲಿದ್ದಾರೆ. ಕರ್ನಾಟಕದಲ್ಲಿ ಆರಂಭವಾಗುವ ಭಾರತ್ ಜೋಡೋ ಯಾತ್ರೆಯಲ್ಲಿ ಸುಮಾರು 30 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜೊತೆಗೆ ಜೊತೆ ಹೆಜ್ಜೆ ಹಾಕಲಿದ್ದಾರೆ. ರಾಜ್ಯ ಮಟ್ಟದ ನಾಯಕರುಗಳು ವೇದಿಕೆಯಲ್ಲಿ ಇರಲಿದ್ದು ರಾಜ್ಯದ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರು ಪಾದಯಾತ್ರೆಗಳಲ್ಲಿ ಭಾಗಿಯಾಗಲಿದ್ದಾರೆ.
LIVE: Karnataka leg of the #BharatJodoYatra begins. https://t.co/dKa101DRo8
— Karnataka Congress (@INCKarnataka) September 30, 2022
ಭಾರತ್ ಜೋಡೊ ಯಾತ್ರೆ ಚಾಮರಾಜ ನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ 21 ದಿನ, 511 ಕಿ.ಮೀ ಕ್ರಮಿಸಲಿದೆ.