ಚಾಮರಾಜನಗರ: ಪ್ರವಾಹದ ಸಂದರ್ಭದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ ಬೇಕಿತ್ತಾ?; ಆರ್. ಅಶೋಕ್
ಚಾಮರಾಜನಗರ, ಆಗಸ್ಟ್, 05: ಬಿಜೆಪಿ ಸರ್ಕಾರ ಬಂದ ಬಳಿಕ ಸತತ ಮಳೆಯಾಗುತ್ತಿದೆ, ಬೇಸಿಗೆಯಲ್ಲೂ ಕೆರೆಗಳು ತುಂಬುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಕೊಳ್ಳೆಗಾಲದ ದಾಸನಪುರ ಗ್ರಾಮದ ಸುತ್ತಮುತ್ತಲೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ನಿರಂತರ ಮಳೆಯಿಂದಾಗಿ ತಮಿಳುನಾಡಿನವರ ಶನಿಕಾಟ ಕಳೆದ 3 ವರ್ಷದಿಂದ ತಪ್ಪಿದೆ ಎಂದರು.
ತಮಿಳುನಾಡಿಗೆ ನೀರು ಕೊಡಲು ಆಗಲ ಎಂಬ ಪರಿಸ್ಥಿತಿ ಉದ್ಭವಿಸಿಲ್ಲ. ಮೇಕೆದಾಟು ಯೋಜನೆಯ ಬಗ್ಗೆಯೂ ಅವರ ತಕರಾರು ಸಂಬಂಧ ಸಿಎಂ ಬೊಮ್ಮಾಯಿ ಕೇಂದ್ರದಲ್ಲಿ ಮಾತನಾಡುತ್ತಿದ್ದು, ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಭರಸವೆ ನೀಡಿದರು.
ಸೂತಕದ ವೇಳೆ ಸಿಹಿ ತಿನ್ನಬೇಕಿತ್ತಾ?:
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ ಅವರು, ಮಳೆ ಬಂದು ಪ್ರವಾಹ ಎದುರಿಸುತ್ತಿದ್ದೇವೆ. ಹಲವರು ಜೀವ ಕಳೆದುಕೊಂಡಿದ್ದಾರೆ. ಈ ಸೂತಕದ ಸಂದರ್ಭದಲ್ಲಿ ಕಾಂಗ್ರೆಸ್ನವರು ಮೈಸೂರು ಪಾಕ್ ತಿನ್ನಬೇಕಿತ್ತ? ಯಾವ ಕಾಂಗ್ರೆಸ್ ಮುಖಂಡರೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವತಃ ಸಿದ್ದರಾಮಯ್ಯ ಅವರೇ ತಮಗೆ ಹುಟ್ಟಿದ ದಿನಾಂಕ ಗೊತ್ತಿಲ್ಲ ಎನ್ನುವಾಗ, ಬೇರೊಂದು ದಿನ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬಹುದಿತ್ತು. ನಾವು ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಆಚರಣೆಯನ್ನು ರದ್ದು ಮಾಡಿದ್ದೇವೆ. ಕಾಂಗ್ರೆಸ್ನವರು ಸಿದ್ದರಾನಯ್ಯ ಅವರ ಹುಟ್ಟುಹಬ್ಬ ಕಾರ್ಯಕ್ರಮವನ್ನು ರದ್ದು ಮಾಡಲಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮೋತ್ಸವದ ರೀತಿ ಪಕ್ಷೋತ್ಸವ ಮಾಡುತ್ತೇವೆಂವ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಮೋದಿ ಯುಗ- ಬಿಜೆಪಿ ಯುಗ, ಈ ರೀತಿ 100 ಕಾಂಗ್ರೆಸ್ ಬಂದರೂ ಎದುರಿಸುವ ಶಕ್ತಿ ಬಿಜೆಪಿಗಿದೆ. ಜನರು ಈಗಾಗಲೇ ಕಾಂಗ್ರೆಸ್ ಅನ್ನು ದೂರ ಇಟ್ಟಿದ್ದಾರೆ. ಗೋವಾ, ಮಹಾರಾಷ್ಟ್ರ, ಯುಪಿಯಲ್ಲಿ ಏನಾಯಿತು ಎಂದು ಗೊತ್ತಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು.
ಪಾಕ್ ಬೆಂಬಲಿತ ಸಂಸ್ಥೆಗೆ ಕಡಿವಾಣ:
ಪಿಎಫ್ಐ ಸೇರಿದಂತೆ ಪಾಕ್ ಬೆಂಬಲಿಸುವ ಸಂಸ್ಥೆಗಳನ್ನು ನಿಷೇಧಿಸಬೇಕು ಎಂಬುವವರಲ್ಲಿ ನಾನು ಒಬ್ಬ. ಕೇಂದ್ರ ಸರ್ಕಾರವೂ ಇದೇ ನಿಲುವು ಹೊಂದಿದೆ. ಆದರೆ ಒಂದು ಸಂಸ್ಥೆ ಬ್ಯಾನ್ ಮಾಡಿದರೇ ಮತ್ತೊಂದು ಹೆಸರಲ್ಲಿ ಬರುತ್ತಾರೆ. ಆದ್ದರಿಂದ ಅವರ ಲೀಡರ್ಗಳ ಮಾಹಿತಿ ಪಡೆದು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಬ್ಯಾನ್ ಮಾಡಲಾಗುವುದು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆ ಸಂಘಟನೆ ಕಾರ್ಯಕರ್ತರ ವಿರುದ್ಧ 200ಕ್ಕೂ ಹೆಚ್ಚು ಕೇಸ್ಗಳನ್ನು ಹಾಕಲಾಗಿತ್ತು. ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಲ್ಲಾ ಕೇಸ್ಗಳನ್ನು ಹಿಂತೆಗೆದುಕೊಂಡಿತ್ತು. ಅದರ ಪ್ರತಿಫಲ ಈಗ ಅನುಭವಿಸುತ್ತಿದ್ದೇವೆ ಎಂದು ಕಿಡಿಕಾರಿದರು. ಫಾಸಿಲ್ ಹತ್ಯೆ ಬಗ್ಗೆ ನಿಖರ ಕಾರಣ ತಿಳಿದಿಲ್ಲ ಎಂಬ ಕಾರಣಕ್ಕೆ ಪರಿಹಾರ ಕೊಟ್ಟಿಲ್ಲ. ನಿಖರ ಮಾಹಿತಿ ಬಂದ ಬಳಿಕ ಪರಿಶೀಲನೆ ನಡೆಸುತ್ತೇವೆ ಎಂದರು.