ಬೇಸಿಗೆಯಲ್ಲಿ ನೀರು ಆಹಾರವನ್ನಿಟ್ಟು ಪ್ರಾಣಿ-ಪಕ್ಷಿಗಳ ರಕ್ಷಿಸೋಣ
ಚಾಮರಾಜನಗರ, ಮಾರ್ಚ್ 22: ಬೇಸಿಗೆಯಲ್ಲಿನ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದೆ. ಪರಿಣಾಮ ನೀರಿನ ಸೆಲೆಗಳು ಬತ್ತಲಾರಂಭಿಸಿವೆ. ಹೀಗಾಗಿ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಬಂಡೀಪುರ ಅರಣ್ಯದಲ್ಲಿ ತೊರೆ, ನದಿ ಮತ್ತು ಕೆರೆಗಳು ಬತ್ತಿ ಹೋಗಿ, ಪ್ರಾಣಿಗಳು ಕುಡಿಯುವ ನೀರಿಗಾಗಿ ಹುಡುಕಾಡುವ ಸ್ಥಿತಿ ಬಂದೊದಗಿತ್ತು. ಈ ವೇಳೆ ಬೋರ್ ವೆಲ್ ಕೊರೆಯಿಸಿ ಸೋಲಾರ್ ಮೋಟಾರ್ ಮೂಲಕ ನೀರನ್ನು ಕೆರೆಗೆ ಹಾಯಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಬೇಸಿಗೆ ಆರಂಭದಲ್ಲಿಯೇ ಕಬಿನಿಯಲ್ಲಿ ನೀರಿನ ಮಟ್ಟ ಕುಸಿತ
ಮರಗಳು ಎಲೆಗಳನ್ನು ಉದುರಿಸಿ ಚಿಗುರಲು ಆರಂಭಿಸಿವೆ
ಕಳೆದ ಮೂರು ವರ್ಷಗಳಿಂದ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಬಂಡೀಪುರದಲ್ಲಿರುವ ಕೊಳ, ಕೆರೆಗಳು ತುಂಬಿದ ಕಾರಣ ನೀರಿನ ಸಮಸ್ಯೆ ಆಗಿರಲಿಲ್ಲ. ಈ ಬಾರಿ ಇಲ್ಲಿವರೆಗೆ ಅಂತಹ ಸಮಸ್ಯೆ ಕಂಡು ಬಾರದಿದ್ದರೂ, ಮುಂದಿನ ದಿನಗಳಲ್ಲಿ ಕೆಲವು ಕೆರೆಗಳು ಬತ್ತಿದರೂ ಅಚ್ಚರಿಪಡಬೇಕಾಗಿಲ್ಲ. ಒಂದು ವೇಳೆ ಯುಗಾದಿ ಹೊತ್ತಿಗೆ ಮಳೆ ಬಂದರೆ ನೀರಿಗೆ ಕೊರತೆಯಾಗಲಾರದೇನೋ?
ಈಗ ಕಾಡಿನಲ್ಲಿರುವ ಮರಗಳು ಎಲೆಗಳನ್ನು ಉದುರಿಸಿ ಚಿಗುರಲು ಆರಂಭಿಸಿವೆ. ಇನ್ನೊಂದೆಡೆ ಕುರುಚಲು ಕಾಡುಗಳು ಒಣಗಿದ್ದು, ಬೋಳು ಬೋಳಾಗಿವೆ. ಇದರಿಂದ ಸಸ್ಯಹಾರಿ ಪ್ರಾಣಿಗಳು ಮತ್ತು ಪಕ್ಷಿಗಳು ಆಹಾರಕ್ಕಾಗಿ ಹುಡುಕಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದ್ದು, ಆಹಾರ ಅರಸಿ ರೈತರ ಜಮೀನಿನತ್ತ ಬರುವ ಸಾಧ್ಯತೆ ಹೆಚ್ಚಾಗಿದೆ.
ಪಕ್ಷಿಗಳು ಕುಡಿಯುವ ನೀರನ್ನು ಹುಡುಕಿಕೊಂಡು ಓಡಾಡುತ್ತಿವೆ
ಇನ್ನು ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ಅಷ್ಟೊಂದಾಗಿ ಆಹಾರದ ಕೊರತೆಯಾಗದಿದ್ದರೂ, ಪಟ್ಟಣ ಪ್ರದೇಶಗಳ ಮರ, ಕಟ್ಟಡಗಳಲ್ಲಿ ವಾಸವಿರುವ ಪಾರಿವಾಳ, ಗುಬ್ಬಚ್ಚಿ, ಕಾಗೆ, ಗಿಡುಗ, ಅಳಿಲು ಮೊದಲಾದವುಗಳು ನೀರು ಆಹಾರಕ್ಕಾಗಿ ಹಾತೊರೆಯುವ ಸ್ಥಿತಿ ಇದ್ದೇ ಇದೆ. ಇದನ್ನರಿತ ಕೆಲವು ಸಂಘ ಸಂಸ್ಥೆಗಳು ಅಲ್ಲಲ್ಲಿ ನೀರು ಮತ್ತು ಆಹಾರದ ವ್ಯವಸ್ಥೆಗಳನ್ನು ಮಾಡುತ್ತಾ ಬರುತ್ತಿರುವುದು ಕಂಡು ಬರುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ಬಿಸಿಲಿನ ತಾಪ ಹೆಚ್ಚಾಗಿದ್ದು, ನೀರಿಗೆ ಹಾಹಾಕಾರ ಆರಂಭವಾಗಿದೆ. ಅದರಲ್ಲೂ ರಸ್ತೆ ಬದಿಯ ಗಿಡ-ಮರಗಳಲ್ಲಿ ಆಶ್ರಯ ಪಡೆದಿರುವ ಸಣ್ಣಪುಟ್ಟ ಪ್ರಾಣಿ ಮತ್ತು ಪಕ್ಷಿಗಳು ಕುಡಿಯುವ ನೀರನ್ನು ಹುಡುಕಿಕೊಂಡು ಓಡಾಡುತ್ತಿವೆ. ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ವಾಹನಗಳಿಗೆ ಚಕ್ರಕ್ಕೆ ಸಿಲುಕಿ ಸಾಯುವುದು ಅಲ್ಲಲ್ಲಿ ಕಂಡು ಬರುತ್ತದೆ.
ಮೈಸೂರು ಮೃಗಾಲಯದಲ್ಲಿ ಈಗ ಪ್ರಾಣಿಗಳಿಗೂ ಷವರ್ ಸ್ನಾನ; ಜನರಿಂದ ಮೆಚ್ಚುಗೆ
ನೀರು ತುಂಬಿ ಮರದ ಕೊಂಬೆಗಳಿಗೆ ಕಟ್ಟುವುದು
ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನಿಡುವ ಕಾಯಕವನ್ನು ಪ್ರತಿವರ್ಷವೂ ಮಾಡಲಾಗುತ್ತಿದ್ದು, ಚಾಮರಾಜನಗರ ಜಿಲ್ಲೆಯ ಪಿ.ಜಿ ಪಾಳ್ಯದ ಪರಿಸರ ಸಂಸ್ಥೆಯ ಅಧ್ಯಕ್ಷ ಹಾಗೂ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವ ಕೃಷ್ಣ ಅವರು ತಮ್ಮ ಸಂಸ್ಥೆಯ ಪದಾಧಿಕಾರಿಗಳು ಮತ್ತು ಪರಿಸರ ಪ್ರೇಮಿಗಳನ್ನು ಒಗ್ಗೂಡಿಸಿ ರಸ್ತೆ ಬದಿ ಬಿಸಾಡಿದ ಪ್ಲಾಸ್ಟಿಕ್ ನೀರು ಬಾಟಲಿಗಳನ್ನು ಸಂಗ್ರಹಿಸಿ ಅದಕ್ಕೆ ನೀರು ತುಂಬಿ ಮರದ ಕೊಂಬೆಗಳಿಗೆ ಕಟ್ಟುವ ಮೂಲಕ ಪಕ್ಷಿಗಳಿಗೆ ಜೀವಜಲ ನೀಡಲು ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Recommended Video
ಸಣ್ಣ ಪುಟ್ಟ ಪ್ರಾಣಿ-ಪಕ್ಷಿಗಳ ಜೀವ ಉಳಿಸಿ
ಇವರ ಕಾರ್ಯ ಪಕ್ಷಿ ಹಾಗೂ ಪ್ರಾಣಿಪ್ರಿಯರಿಗೆ ಖುಷಿಯನ್ನುಂಟು ಮಾಡಿದೆ. ಎಲ್ಲರೂ ತಮ್ಮ ಸುತ್ತಮುತ್ತ ಇರುವ ಮರಗಳಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗೆ ಒಂದಷ್ಟ ನೀರು ಮತ್ತು ಆಹಾರವನ್ನಿಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಬೇಸಿಗೆಯಲ್ಲಿ ಸಣ್ಣ ಪುಟ್ಟ ಪ್ರಾಣಿ-ಪಕ್ಷಿಗಳ ಜೀವ ಉಳಿಸಿ ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಬಹುದೇನೋ?