ನೀರು ತುಂಬಿಸಲು ಆಗ್ರಹಿಸಿ ಕೆರೆಗೆ ಹಾರಿದ ರೈತರ ರಕ್ಷಣೆ
ಚಾಮರಾಜನಗರ, ಜೂನ್ 19: ನದಿ ಮೂಲದಿಂದ ಕೆರೆಗೆ ನೀರು ಹರಿಸಲು ಮೀನಾಮೇಷ ಎಣಿಸುತ್ತಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರ ಕ್ರಮವನ್ನು ಖಂಡಿಸಿದ ಇಬ್ಬರು ರೈತರು ಉತ್ತೂರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆ ಭರ್ತಿಯಾಗಿ ಕೆಲವು ತಿಂಗಳು ಕಳೆದಿವೆ. ಇಲ್ಲಿಂದ ಪಕ್ಕದ ವಡ್ಡಗೆರೆ ಕೆರೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಾಯೋಗಿಕವಾಗಿ ನೀರು ಹರಿಸಿ ಯಶಸ್ವಿಯಾಗಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿರವರ ನಿರಾಸಕ್ತಿಯಿಂದಾಗಿ ವಡ್ಡಗೆರೆ ಕೆರೆಗೆ ಹರಿಯಬೇಕಾಗಿದ್ದ ನೀರನ್ನು ಕಿಲಗೆರೆ, ಅಮಚವಾಡಿ ಕೆರೆಗಳಿಗೆ ಹರಿಸುವ ಮೂಲಕ ನಿರ್ದಿಷ್ಟ ಯೋಜನೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಸಮುದ್ರ ನಗರಿ ಚೆನ್ನೈನಲ್ಲಿ ನೀರಿಗೆ ಹಾಹಾಕಾರ, ದುಪ್ಪಟ್ಟು ಹಣ ಕೊಡ್ತೀವಂದ್ರೂ ಸಿಗ್ತಿಲ್ಲ ನೀರು
ವಡ್ಡಗೆರೆ ಕೆರೆಗೆ ನೀರು ಹರಿಯುವ ತನಕ ಹೋರಾಟ ಮುಂದುವರೆಸಿರುವ ರೈತರು, ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಆಗಮಿಸದಿದ್ದರಿಂದ ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಇಬ್ಬರು ರೈತರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಕೆರೆಗೆ ಹಾರಿದ್ದ ಪ್ರವೀಣ್ ಗುಡಿಮನೆ ಯರಿಯೂರು, ಮುರುಗೇಶ್ ವಡ್ಡನ ಹೊಸಳ್ಳಿ ಗ್ರಾಮದ ಯುವಕರನ್ನು ರಕ್ಷಿಸಿದರು.
ಉತ್ತೂರು ಕೆರೆಯಲ್ಲಿ ಪರಿಸ್ಥಿತಿ ಮಿತಿ ಮೀರುತ್ತಿದ್ದು, ರೈತರು ಬುಧವಾರದಿಂದ ಮಹಿಳೆಯರು, ಮಕ್ಕಳು ಮತ್ತು ಸಾಕುಪ್ರಾಣಿಗಳೊಂದಿಗೆ ಮುಷ್ಕರ ಹೂಡಲು ನಿರ್ಧಾರ ಕೈಗೊಂಡಿದ್ದಾರೆ. ಈ ನಡುವೆ ಅಹೋರಾತ್ರಿ ಧರಣಿ ಮುಷ್ಕರದಿಂದ ಅಸ್ವಸ್ಥರಾದ ವೃಷಬೇಂದ್ರಪ್ಪರವರಿಗೆ ಉತ್ತೂರು ಕೆರೆಯ ಬಳಿಯೇ ಆರೋಗ್ಯ ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದರು.