ವಿಷಪ್ರಸಾದ ಸೇವಿಸಿದ ಸಂತ್ರಸ್ತರ ಆಸ್ಪತ್ರೆ ಬಿಲ್ ಎಷ್ಟಾಗಿದೆ ಗೊತ್ತಾ?
ಚಾಮರಾಜನಗರ, ಫೆಬ್ರವರಿ 13: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚಗುತ್ತು ಮಾರಮ್ಮ ದೇಗುಲದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ ಸಂತ್ರಸ್ತರು ಗುಣಮುಖರಾಗಿ ಮನೆ ಸೇರಿದ್ದಾರೆ.
ಆದರೆ ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸದ ಕಾರಣದಿಂದಾಗಿ ಇದೀಗ ಸುಮಾರು 1.27 ಕೋಟಿ ರೂಪಾಯಿಗಳ ವೈದ್ಯಕೀಯ ಬಿಲ್ನ್ನು ಪಾವತಿಸುವಂತೆ ಮೈಸೂರಿನ 12 ಖಾಸಗಿ ಆಸ್ಪತ್ರೆಗಳು ಚಾಮರಾಜನಗರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.
ಸುಳ್ವಾಡಿ ಪ್ರಕರಣ : ಅವರ ಕಣ್ಣೀರು ಒರೆಸಲು ಯಾರಿಂದಲೂ ಸಾಧ್ಯವಿಲ್ಲ!
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ 2018 ರ ಡಿಸೆಂಬರ್ 14 ರಂದು ಆಡಳಿತ ಮಂಡಳಿಯ ಮನಸ್ತಾಪದಿಂದ ದೇವಾಲಯದ ರಾಜಗೋಪುರ ನಿರ್ಮಾಣದ ಪೂಜೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತ್ತರಿಗೆ ಪ್ರಸಾದದಲ್ಲಿ ವಿಷ ಹಾಕಿ, ಅದನ್ನು ಸೇವಿಸಿದ್ದ ಭಕ್ತರು ಅಸ್ವಸ್ಥರಾಗಿದ್ದರು.
ಈ ವೇಳೆ ಅವರನ್ನು ಕೂಡಲೇ ಮೈಸೂರಿನ ಜೆಎಸ್ ಎಸ್ ಆಸ್ಪತ್ರೆ, ನಾರಾಯಣ ಹೃದಯಾಲಯ, ಅಪೋಲೋ ಆಸ್ಪತ್ರೆ, ಗೋಪಲಾಗೌಡ ಆಸ್ಪತ್ರೆ, ಸುಯೋಗ್ ಆಸ್ಪತ್ರೆ, ಭಾನವಿ ಆಸ್ಪತ್ರೆ, ಬೃಂದಾವನ ಆಸ್ಪತ್ರೆ, ಕಾವೇರಿ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಸೇರಿದಂತೆ ಒಟ್ಟು12 ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಮುಂದೆ ಓದಿ...
ಜಿಲ್ಲಾಧಿಕಾರಿಗಳಿಗೆ ರವಾನೆ
ಅವತ್ತು ರಾಜ್ಯ ಸರ್ಕಾರವು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಕೊಡಲು ಸೂಚಿಸಿ, ವೈದ್ಯಕೀಯ ಬಿಲ್ನ್ನು ಸರ್ಕಾರವೇ ಪಾವತಿಸುವ ಬಗ್ಗೆ ತಿಳಿಸಿತ್ತು. ಅದರಂತೆ ಸುಳ್ವಾಡಿ ದುರಂತದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಇವರುಗಳಿಗೆ ಚಿಕಿತ್ಸೆ ನೀಡಿದ ಬಾಬ್ತು ಕೋಟಿಗೂ ಅಧಿಕ ಮೊತ್ತದ ಬಿಲ್ನ್ನು ಪಾವತಿಸುವಂತೆ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.
ಮಾತುಕತೆಗೆ ಮುಂದಾಗಿರುವ ಜಿಲ್ಲಾಡಳಿತ
ಖಾಸಗಿ ಆಸ್ಪತ್ರೆಯಿಂದ ಬಿಲ್ನ ಪ್ರತಿಗಳನ್ನು ಚಾಮರಾಜನಗರ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದು, ಆರೋಗ್ಯ ಇಲಾಖೆಯ ಸಮನ್ವಯದಲ್ಲಿ ಬಿಲ್ಗಳನ್ನು ಕಳುಹಿಸಲಾಗಿದೆ. ಜತೆಗೆ ಬಿಲ್ ಮೊತ್ತ ಕಡಿಮೆ ಮಾಡಿಸಲು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದು, 1.27 ಕೋಟಿ ಬಿಲ್ ಪಾವತಿಸಲು ಕಷ್ಟಸಾಧ್ಯವಾದ್ದರಿಂದ ಬಿಲ್ ಮೊತ್ತ ಕಡಿಮೆ ಮಾಡಿಸುವಂತೆ ಹೇಳಿರುವ ಹಿರಿಯಅಧಿಕಾರಿಗಳು, ಇದೀಗ ಆಸ್ಪತ್ರೆಗಳೊಂದಿಗೆ ಚಾಮರಾಜನಗರ ಜಿಲ್ಲಾಡಳಿತ ಮಾತುಕತೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.
ವಿಷ ಪ್ರಸಾದ ಸೇವನೆ: ಡಿಸ್ಚಾರ್ಜ್ ಆದವರ ಮನೆಗೆ ತೆರಳಿ ವೈದ್ಯರ ಚಿಕಿತ್ಸೆ
ಅಂಚೆ ಮೂಲಕ ಕಳುಹಿಸಿದ ವಕೀಲರು
ಇನ್ನೊಂದೆಡೆ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕೀಲರು ತಮ್ಮ ವಾದವನ್ನು ಲಿಖಿತವಾಗಿ ಅಂಚೆ ಮೂಲಕ ಕಳುಹಿಸಿದ್ದಾರೆ. ಇಮ್ಮಡಿ ಮಹದೇವಸ್ವಾಮಿ ಪರವಾಗಿ ವಾದ ಮಂಡಿಸಬೇಕಾಗಿರುವ ವಕೀಲರು ಖುದ್ದಾಗಿ ಹಾಜರಾಗದೆ ಇರುವುದು ಗಮನಿಸಿದರೆ, ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆ ಇರುವುದನ್ನು ಮನವರಿಕೆ ಮಾಡಿಕೊಂಡ ವಕೀಲರು ಲಿಖಿತ ವಾದವನ್ನು ಪೋಸ್ಟ್ ಮೂಲಕ ಕಳುಹಿಸಿರುವುದು ಸ್ಪಷ್ಟವಾಗಿದೆ.
ಫೆ.26ಕ್ಕೆ ವಿಚಾರಣೆ ಮುಂದೂಡಿಕೆ
ಈ ಬಗ್ಗೆ ಸರ್ಕಾರಿ ಅಭಿಯೋಜಕರಿಗೆ ವಿಷಯ ತಿಳಿದಿದ್ದು, ಪ್ರಕರಣದ ವಿಚಾರಣೆಯ ಸಂಬಂಧ ತಮ್ಮ ವಾದವನ್ನು ಬುಧವಾರ ಮಂಡಿಸಲಿದ್ದಾರೆ. ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಾದ ಅಂಬಿಕಾ, ಮಾದೇಶ್, ದೊಡ್ಡಯ್ಯ ಪರ ಯಾವುದೇ ವಕೀಲರು ವಕಾಲತು ವಹಿಸದೆ ಇರುವುದು ಗಮನಿಸಿದರೆ ಜಾಮೀನು ಪಡೆಯಲು ಆರೋಪಿಗಳಿಗೆ ಇಚ್ಛಾಶಕ್ತಿ ಇಲ್ಲದಂತಾಗಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ನ್ಯಾಯಾಧೀಶರು, ಫೆ.26ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.