ಕೊಳ್ಳೇಗಾಲದಲ್ಲಿ ಹತ್ಯಾಕಾಂಡ ನಡೆಸಿದ್ದ ಖೈದಿ ಬೆಳಗಾವಿ ಜೈಲ್ನಿಂದ ಪರಾರಿ!
ಚಾಮರಾಜನಗರ, ಏಪ್ರಿಲ್ 25:ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ರಾತ್ರಿ ಮಲಗಿದ್ದ ಐವರನ್ನು ಬರ್ಬರವಾಗಿ ಹತ್ಯೆಗೈದು ಗಲ್ಲು ಶಿಕ್ಷೆಗೊಳಗಾಗಿದ್ದ ಖೈದಿ ಮುರುಗೇಶ್ ಎಂಬಾತ ಬೆಳಗಾವಿಯ ಜೈಲ್ನಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
2015 ಮೇ 11 ರಂದು ಮಧ್ಯರಾತ್ರಿ ಹಂತಕ ಮುರುಗೇಶ್ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ಗ್ರಾಮದ ಶಿವಣ್ಣ ಎನ್ನುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದ ತಮಿಳುನಾಡಿನವರ ರಾಜೇಂದ್ರನ್ (37) ಅವರ ಪತ್ನಿ ರಾಜಮ್ಮ (35), ಪುತ್ರಿ ರೂಪ (8) ಮತ್ತು ಕಾಶಿ ಅಲಿಯಾಸ್ ಶಿವಕುಮಾರ ಆತನ ಪತ್ನಿ ಶಿವಮ್ಮ ಎಂಬುವರನ್ನು ಕತ್ತಿಯಿಂದ ಕಡಿದು ಕೊಲೆಗೈದು ಪರಾರಿಯಾಗಿದ್ದನು.
ಅಮಾನವೀಯ: ಮುಸ್ಲಿಂ ಖೈದಿಗೆ ಓಂ ಚಿಹ್ನೆ ಬರೆ ಹಾಕಿದ ಜೈಲು ಅಧಿಕಾರಿ
ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರಲ್ಲದೆ ಘಟನೆ ನಡೆದ ಎರಡೇ ದಿನದಲ್ಲಿ ಹನೂರು ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದ ಮುರುಗೇಶ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಹಿಳೆಯರಿಬ್ಬರೊಂದಿಗೆ ದೈಹಿಕ ಸಂಪರ್ಕಕ್ಕೆ ಮುಂದಾಗಿದ್ದು, ಅವರು ಅದನ್ನು ಪ್ರತಿಭಟಿಸಿದ್ದರು ಇದರಿಂದ ಆಕ್ರೋಶಗೊಂಡು ಇಡೀ ಕುಟುಂಬವನ್ನೇ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದನು. ಅದರಂತೆ ಪೊಲೀಸರು ಆತನ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಗಲ್ಲು ಶಿಕ್ಷೆ ವಿಧಿಸಿ ಆದೇಶ
ಈ ಸಂಬಂಧ ವಿಚಾರಣೆ ನಡೆಸಿದ್ದ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಮುರುಗೇಶ್ ಕೊಲೆ ಮಾಡಿರುವುದು ಸಾಕ್ಷಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಕೊಲೆ ಆರೋಪಿಗೆ 2017 ರಲ್ಲಿ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.
ಹೈಕೋರ್ಟ್ಗೆ ಮನವಿ
ಇದಾದ ಬಳಿಕ ಆರೋಪಿ ಮುರುಗೇಶ್ ತನಗೆ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸುವಂತೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದನು. ಆದರೆ ಹೈ ಕೋರ್ಟ್ ಕೂಡ ಮುರುಗೇಶನ್ಗೆ ಗಲ್ಲು ಶಿಕ್ಷೆಯನ್ನು ಖಾಯಂ ಗೊಳಿಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು.
ಉಡುಪಿ ಸಬ್ ಜೈಲ್ ನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ
ಆರೋಪಿ ಬೆಳಗಾವಿಯ ಜೈಲ್ ನಲ್ಲಿದ್ದ
ಆ ನಂತರ 2018 ರಲ್ಲಿ ಹೈಕೋರ್ಟ್ನಲ್ಲಿ ತನಗೆ ನ್ಯಾಯ ಸಿಗಲಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಮುರುಗೇಶನ್ ಪರ ವಕೀಲರು ಮನವಿ ಸಲ್ಲಿಸಿ ಗಲ್ಲು ಶಿಕ್ಷೆಯನ್ನು ತಡೆ ಹಿಡಿಯುವಂತೆ ವಕಾಲತು ಸಲ್ಲಿಸಿದ್ದರು. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುರುಗೇಶನ್ ಪರ ವಕೀಲರು ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತ್ತು. ಆರೋಪಿ ಮುರುಗೇಶ್ ನನ್ನು ಬೆಳಗಾವಿಯ ಜೈಲ್ ನಲ್ಲಿಡಲಾಗಿತ್ತು.
ಚಳ್ಳೆಹಣ್ಣು ತಿನ್ನಿಸಿ ಪರಾರಿ
ಇದೆಲ್ಲದರ ನಡುವೆ ಖೈದಿ ಮುರುಗೇಶ್ ಏ .22 ರಂದು ಬೆಳಗಾವಿಯ ಜೈಲ್ನಿಂದ ಸಿಬ್ಬಂದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದು, ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈತನನ್ನು ಹಿಡಿದು ಕೊಟ್ಟಲ್ಲಿ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ ಅಲ್ಲದೆ ಸುಳಿವು ಸಿಕ್ಕಲ್ಲಿ 08226-222335, 222398ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದೆ. ಐದು ಮಂದಿಯನ್ನು ನಿರ್ದಯಿಯಾಗಿ ಕೊಂದು ಇದೀಗ ಜೈಲ್ನಿಂದ ತಪ್ಪಿಸಿಕೊಂಡಿರುವ ಮುರುಗೇಶ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.