ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ಸಫಾರಿಗೆ ಸಿದ್ಧತೆ ಆರಂಭ
ಚಾಮರಾಜನಗರ, ಮೇ.19: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸೂಚನೆಯ ಮೇರೆಗೆ ಜೂನ್ 2 ರಿಂದ ಸಫಾರಿಯನ್ನು ಮೇಲುಕಾಮನಹಳ್ಳಿ ಸಮೀಪ ಸ್ಥಳಾಂತರಿಸಲಾಗುತ್ತಿದ್ದು, ಈ ಸಂಬಂಧ ಅರಣ್ಯ ಇಲಾಖೆ ಸಿದ್ಧತೆಯನ್ನು ಕೈಗೊಂಡಿದೆ.
ಅರಣ್ಯ ಇಲಾಖೆಯು ನಿಗದಿತ ದಿನದಂದು ಕೇವಲ ಸ್ವಾಗತ ಕಚೇರಿಯನ್ನು ಮಾತ್ರ ಪ್ರಾರಂಭಿಸಲು ಉದ್ದೇಶಿಸಿದ್ದು, ಹುಲಿ ಯೋಜನೆಯ ನಿರ್ದೇಶಕರ ಕಚೇರಿ ಹಾಗೂ ವಸತಿಗೃಹಗಳು ಮಾತ್ರ ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಬಂಡೀಪುರದಲ್ಲಿ ಗಂಧದ ಮರ ಕಳ್ಳರ ಮೇಲೆ ಫೈರಿಂಗ್: ಮೂವರ ಬಂಧನ
ಇನ್ನು ದಿನೇ ದಿನೇ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳು, ಶನಿವಾರ ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ವಾಹನಗಳು ಹಾಗೂ ಸಫಾರಿ ವಾಹನಗಳಿಂದ ಬಂಡೀಪುರ ಕ್ಯಾಂಪಸ್ ಬಹುತೇಕ ಗಿಜಿಗುಡುತ್ತಿತ್ತು.
ಪರಿಸರ ಸೂಕ್ಷ್ಮ ಪ್ರದೇಶದ ಹುಲಿಸಂರಕ್ಷಿತಾರಣ್ಯದಲ್ಲಿ ನಡೆಯುತ್ತಿದ್ದ ಪ್ರವಾಸೋದ್ಯಮದಿಂದ ವನ್ಯಜೀವಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರವು ಕಳೆದ ಮೂರು ವರ್ಷದ ಹಿಂದೆಯೇ ಸಫಾರಿ ಕೌಂಟರ್ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರೂ ಕಾರ್ಯಗತವಾಗಿರಲಿಲ್ಲ. ಇದೀಗ ಅದು ಕಾರ್ಯಗತವಾಗುತ್ತಿದೆ. ಅದರಂತೆ ಸದ್ಯ ಸಫಾರಿ ಕೌಂಟರ್ ಮಾತ್ರ ಸ್ಥಳಾಂತರಿಸಲು ಅರಣ್ಯ ಸಂರಕ್ಷಣಾಧಿಕಾರಿಗಳು ಸಿದ್ಧತೆ ನಡೆಸಿದೆ.
ಎರಡೂ ಕಡೆಗಳಲ್ಲಿ ವಾಹನ ಪ್ರವೇಶಕ್ಕೆ ವ್ಯವಸ್ಥೆ
ಮೇಲುಕಾಮನಹಳ್ಳಿ ಸಮೀಪದಲ್ಲಿರುವ ಹುಲಿಸಂರಕ್ಷಣಾ ವಿಶೇಷ ದಳದ(ಎಸ್ಟಿಪಿಎಫ್) ಕ್ವಾರ್ಟರ್ಸ್ ಬಳಿ 8 ಕೋಟಿ ವೆಚ್ಚದಲ್ಲಿ ನೂತನ ಕೌಂಟರ್, ಕಚೇರಿ, ಶೌಚಗೃಹ, ವಿಶ್ರಾಂತಿಗೃಹ, ಹೋಟೆಲ್, ಸಿಬ್ಬಂದಿಗಳ ಕೊಠಡಿ, ರಸ್ತೆ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟಿಕೆಟ್ ಕೌಂಟರ್ ಮಾತ್ರ ಪ್ರಾರಂಭಿಸಲಾಗುತ್ತಿದೆ. ವಿಶಾಲ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್ ಹಾಗೂ ಎರಡೂ ಕಡೆಗಳಲ್ಲಿ ವಾಹನ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
12 ಕೊಠಡಿಗಳು ನೂತನ ಸಫಾರಿ ಕೌಂಟರಿಗೆ ಬಳಕೆ
ಹಳೆಯ ಎಸ್ಟಿಪಿಎಫ್ ಸಿಬ್ಬಂದಿ ವಸತಿಗೃಹಗಳ ಆವರಣದಲ್ಲಿ ಇತ್ತೀಚೆಗೆ ನಿರ್ಮಿಸಿರುವ 12 ಕೊಠಡಿಗಳನ್ನು ನೂತನ ಸಫಾರಿ ಕೌಂಟರಿಗೆ ಬಳಕೆ ಮಾಡಲಾಗುವುದು. ಒಂದರಲ್ಲಿ ಟಿಕೆಟ್ ವಿತರಣೆ ಹಾಗೂ ಕಚೇರಿ ಇನ್ನೊಂದರಲ್ಲಿ ಪ್ರವಾಸಿಗರಿಗೆ ವಿಶ್ರಾಂತಿ ಕೊಠಡಿಯಾಗಿ ಬಳಸಿಕೊಳ್ಳಲು ಇಲಾಖೆ ಉದ್ದೇಶಿಸಿದೆ. ಉಳಿದ ಕೊಠಡಿಗಳನ್ನು ಸಫಾರಿ ವಾಹನಗಳ ಚಾಲಕರ ವಾಸ್ತವ್ಯಕ್ಕೆ ನೀಡಲು ಉದ್ದೇಶಿಸಿದೆ.
ರಜೆಯ ಮಜೆ ಕಳೆಯಲು ಬಂಡೀಪುರಕ್ಕೆ ಪ್ರವಾಸಿಗರ ಲಗ್ಗೆ
ಎರಡು ಶೌಚಾಲಯ ನಿರ್ಮಾಣ
ಸಫಾರಿಗೆ ಬರುವ ಪ್ರವಾಸಿಗರಿಗೆ ಸುಲಭ್ ಮಾದರಿಯಲ್ಲಿ ಎರಡು ಶೌಚಾಲಯ ನಿರ್ಮಿಸಲಾಗುವುದು. ಟಿಕೆಟ್ ಮುಂಗಡ ಬುಕಿಂಗ್ ಹಾಗೂ ಸ್ಥಳದಲ್ಲಿ ಟಿಕೆಟ್ ನೀಡಲು ಕಂಪ್ಯೂಟರ್ಗೆ ಅಗತ್ಯವಾದ ವಿದ್ಯುತ್ ಹಾಗೂ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳಲಾಗುತ್ತಿದೆ.
ಹೆಚ್ಚಿನ ಅರಣ್ಯ ಸಿಬ್ಬಂದಿ ನೇಮಕ
ನೂತನ ಕೌಂಟರಿನಿಂದ ಸಫಾರಿಗೆ ಹೋಗಿಬರಲು ಸುಮಾರು 6 ಕಿಲೋ ಮೀಟರ್ ಅಂತರ ಹೆಚ್ಚಾಗಲಿದ್ದು, ಈವರೆಗೆ ಇದ್ದ ಒಂದುಗಂಟೆ ಅವಧಿಯನ್ನು ಯಾವುದೇ ಶುಲ್ಕದ ಹೆಚ್ಚಳವಿಲ್ಲದೆ ಒಂದೂವರೆ ಗಂಟೆಗೆ ವಿಸ್ತರಿಸಲಾಗುವುದು. ವಸತಿಗೃಹಗಳಲ್ಲಿ ಉಳಿದಿರುವವರೂ ಕೂಡ ನೂತನ ಕೌಂಟರಿನಿಂದಲೇ ಸಫಾರಿಗೆ ತೆರಳಬೇಕಾಗಿದೆ. ಪ್ರವಾಸಿಗರ ಸುರಕ್ಷತೆಗೆ ಇನ್ನೂ ಹೆಚ್ಚಿನ ಅರಣ್ಯ ಸಿಬ್ಬಂದಿಯನ್ನು ನೇಮಕಮಾಡಲಾಗುತ್ತಿದೆ ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎಂ.ಎಸ್.ರವಿಕುಮಾರ್ ಮಾಹಿತಿ ನೀಡಿದ್ದಾರೆ.