ಚಾಮರಾಜನಗರ: ಬಂಡೀಪುರ ಕಾಳ್ಗಿಚ್ಚು ತಡೆಗೆ ಬೆಂಕಿ ರೇಖೆ ನಿರ್ಮಾಣ
ಚಾಮರಾಜನಗರ, ಜನವರಿ 05: ಬೇಸಿಗೆ ಬರುತ್ತಿದ್ದಂತೆಯೇ ಬಂಡೀಪುರ ಅಭಯಾರಣ್ಯದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗುವುದು ಮಾಮೂಲಿಯಾಗಿದ್ದು, ಅದರ ತಡೆಗೆ ಅರಣ್ಯ ಇಲಾಖೆ ಈಗಿನಿಂದಲೇ ಹಲವು ಕ್ರಮಗಳನ್ನು ಕೈಗೊಂಡಿದೆ.
ಬಂಡೀಪುರದಲ್ಲಿ ಹಾದು ಹೋಗಿರುವ ರಸ್ತೆಯ ಎರಡು ಬದಿಯಲ್ಲೂ ಒಣ ಎಲೆಗಳನ್ನು ತೆರವುಗೊಳಿಸಿ ಬೆಂಕಿ ರೇಖೆಗಳನ್ನು ನಿರ್ಮಿಸಲಾಗುತ್ತಿದೆ.
ಬಂಡೀಪುರದಲ್ಲಿ ಬೇಸಿಗೆ ಕಾಳ್ಗಿಚ್ಚು ತಡೆಗೆ ಈಗಿನಿಂದಲೇ ತಯಾರಿ
ಬೆಂಕಿ ಬಿದ್ದಾಗ ತೆಗೆದುಕೊಳ್ಳುವ ಕ್ರಮಗಳ ಮಾಹಿತಿ ಪಡೆದು ಬೆಂಕಿ ನಂದಿಸಲು ಬಳಸುವ ಉಪಕರಣಗಳ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಜತೆಗೆ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಸಿಬ್ಬಂದಿಗಳು ಸ್ಪ್ರೇಯರ್ ಮೂಲಕ ಬೆಂಕಿ ನಂದಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ಮಾಡುತ್ತಿದ್ದಾರೆ. ಈ ಬಾರಿ ಲಂಟಾನ ಎಂಬ ಸಸ್ಯ ಒಣಗಿ ನಿಂತಿರುವ ಕಾರಣ ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತಿದೆ.
ಈಗಾಗಲೇ ಪಿಸಿಸಿಎಫ್ ಪುನತಿ ಶ್ರೀಧರ್ ಅವರು ಭೇಟಿ ನೀಡಿ ಒಣಗಿ ನಿಂತಿರುವ ಹುಲ್ಲಿಗೆ ಬೆಂಕಿ ಬಿದ್ದು ಆಗುವ ಅನಾಹುತ ತಪ್ಪಿಸಲು ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಸುವ ವಿಧಾನವನ್ನು ಪ್ರಾಯೋಗಿಕ ಪರೀಕ್ಷೆಯನ್ನು ವೀಕ್ಷಿಸಿದರು.
ನಂತರ ಮಾತನಾಡಿ ಬಂಡೀಪುರದ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ಲಂಟಾನ ಹಾಗೂ ಹುಲ್ಲು ಒಣಗಿ ನಿಂತಿದೆ. ಅರಣ್ಯ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಕಿಯಿಂದ ಅರಣ್ಯ ಸಂರಕ್ಷಿಸಲು ಬೆಂಕಿ ರೇಖೆ ನಿರ್ಮಾಣ ಮಾಡಲಾಗುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಅರಣ್ಯದೊಳಗೆ ಬಿಸಾಡದಂತೆ ಅರಿವು ಮೂಡಿಸಲು ತಿಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
10 ದಿನದಲ್ಲಿ 4 ಕಡೆ ಕಾಳ್ಗಿಚ್ಚು, ನೂರಾರು ಎಕರೆ ಭಸ್ಮ, ಆದರೆ ಕಾರಣ ಗೊತ್ತಿಲ್ಲ
ಈ ಸಂದರ್ಭದಲ್ಲಿ ಬಂಡೀಪುರ ಸಿಎಫ್ ಓ ಅಂಬಾಡಿ ಮಾಧವ್, ಎಸಿಎಫ್ ರವಿಕುಮಾರ್, ಪರಮೇಶ್, ಆರ್ಎಫ್ಓ ನವೀನಕುಮಾರ್, ಪುಟ್ಟಸ್ವಾಮಿ, ಶೈಲೇಂದ್ರಕುಮಾರ್, ಸಂದೀಪ್, ಸುನೀಲಕುಮಾರ್, ಸಿಬ್ಬಂದಿ ಇದ್ದರು.