ಗುಂಡ್ಲುಪೇಟೆಯಿಂದ ಕೇರಳಕ್ಕೆ ಗುಳೆ ಹೊರಟ ಕಾರ್ಮಿಕರು!
ಚಾಮರಾಜನಗರ, ಜನವರಿ 31 : ಕಳೆದ ಕೆಲವು ವರ್ಷಗಳಿಂದ ಗುಂಡ್ಲುಪೇಟೆಯ ಕಾಡಂಚಿನ ಗ್ರಾಮಗಳು ಸೇರಿದಂತೆ ಹಲವೆಡೆ ಮಳೆಯಿಲ್ಲದೆ ಬಡ ರೈತರು ಯಾವುದೇ ಬೆಳೆಬೆಳೆಯಲು ಸಾಧ್ಯವಾಗದೆ ಬೇಸಿಗೆ ಬಂತೆಂದರೆ ಕೆಲಸ ಹುಡುಕಿಕೊಂಡು ಬೇರೆಡೆಗಳಿಗೆ ಗುಳೆ ಹೋಗುವುದು ಮಾಮೂಲಿಯಾಗಿದೆ.
ಹೆಚ್ಚಿನ ಬಡ ರೈತರು, ಕೂಲಿ ಕಾರ್ಮಿಕರು ಇತ್ತೀಚೆಗಿನ ವರ್ಷಗಳಲ್ಲಿ ಕೇರಳದತ್ತ ಜನವರಿ ತಿಂಗಳಲ್ಲಿ ಕುಟುಂಬ ಸಹಿತ ತೆರಳುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣವೂ ಇದೆ. ಕೇರಳದ ಕೆಲವು ಕಡೆಗಳಲ್ಲಿರುವ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಸಮಸ್ಯೆಯಿರುವುದರಿಂದ ಕಾಫಿ ಕೊಯ್ಲಿಗೆ ಹೆಚ್ಚಿನ ಬೇಡಿಕೆಯಿದ್ದು, ಇಲ್ಲಿನ ಕಾರ್ಮಿಕರಿಗೆ ಅಲ್ಲಿ ಕೈತುಂಬಾ ಕೆಲಸ ಮತ್ತು ಹಣ ದೊರೆಯುತ್ತದೆ ಎಂಬ ಕಾರಣಕ್ಕೆ ಈ ಸಮಯದಲ್ಲಿ ಕೇರಳದತ್ತ ಪ್ರಯಾಣ ಬೆಳೆಸುತ್ತಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ.
ಇಲ್ಲಿಗಿಂತ ಹೆಚ್ಚಿನ ಕೂಲಿ ಕೇರಳದಲ್ಲಿ ಸಿಗುವುದರಿಂದ ಒಂದಷ್ಟು ದಿನಗಳ ಕಾಲ ಅಲ್ಲಿ ಕೆಲಸ ಮಾಡಿ, ಕಾಫಿ ಕೊಯ್ಲು ಮುಗಿಯುತ್ತಿದ್ದಂತಯೇ ತಮ್ಮ ಹಣದೊಂದಿಗೆ ಊರುಗಳಿಗೆ ಮರಳುತ್ತಾರೆ. ಕುಟುಂಬ ಸಹಿತ ಕೇರಳಕ್ಕೆ ಹೋಗುವುದರಿಂದ ಒಂದಷ್ಟು ಸಂಪಾದನೆ ಮಾಡಿಕೊಂಡು ಬರಲು ಸಾಧ್ಯವಾಗುತ್ತಿದೆ.
ಕಾಫಿ ಕೊಯ್ಲಿನಲ್ಲಿ ಕೆಜಿ ಲೆಕ್ಕದಲ್ಲಿ ಕೂಲಿ ನೀಡುವುದರಿಂದ ಎಲ್ಲರೂ ಕೊಯ್ಲು ಮಾಡಬಹುದಾಗಿದೆ. ಕುಟುಂಬದವರೆಲ್ಲ ಸೇರಿ ಕಾಫಿ ಕೊಯ್ಲು ಮಾಡಿದರೆ ಸಂಜೆ ವೇಳೆಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದಾಗಿದೆ. ಇದರಿಂದಾಗಿಯೇ ಗಡಿ ವ್ಯಾಪ್ತಿಯಲ್ಲಿರುವ ಹೆಚ್ಚಿನ ಕುಟುಂಬಗಳು ಕೇರಳದತ್ತ ಮುಖ ಮಾಡಿರುವುದರಿಂದ ಕೆಲವು ಮನೆಗಳಿಗೆ ಬೀಗ ಹಾಕಿದ್ದರೆ, ಮತ್ತೆ ಕೆಲವರ ಮನೆಯಲ್ಲಿ ವಯಸ್ಸಾದವರು ಮಾತ್ರ ಇರುವುದು ಕಂಡು ಬರುತ್ತಿದೆ.
ಇದರ ನಡುವೆ ಪೋಷಕರು ಶಾಲೆಗೆ ಹೋಗುವ ಮಕ್ಕಳನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಇದೆ.
ಈಗಾಗಲೇ ಗುಂಡ್ಲುಪೇಟೆ ತಾಲೂಕಿನ ಕೂತನೂರು, ಮಲ್ಲಯ್ಯನಪುರ, ಭೀಮನಬೀಡು, ಅಣ್ಣೂರುಕೇರಿ, ಅಣ್ಣೂರು, ಕೊಡಹಳ್ಳಿ, ಬೊಮ್ಮಲಾಪುರ, ಬನ್ನಿತಾಳಪುರ ಸೇರಿದಂತೆ ಹಲವು ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೇರಳದÀ ಸುಲ್ತಾನ್ ಬತ್ತೇರಿ, ಕಲ್ಪೆಟ, ಮೀನಾಂಗಡಿ, ಕಲ್ಲಿಕೋಟೆ ಮೊದಲಾದ ಕಡೆಗಳಿಗೆ ಕಾಫಿ ಕೊಯ್ಲು ಮಾಡಲು ತೆರಳಿದ್ದಾರೆ ಎನ್ನಲಾಗುತ್ತಿದೆ.
ಕೇರಳಕ್ಕೆ ವರ್ಷದ ಮೊದಲ ತಿಂಗಳಲ್ಲಿ ತೆರಳಿ ಒಂದಷ್ಟು ಅಲ್ಲಿದ್ದು, ಕಾಫಿ ಕೊಯ್ಲು ಮುಗಿಯುತ್ತಿದ್ದಂತೆಯೇ ಸ್ವಗ್ರಾಮಕ್ಕೆ ಮರಳುವುದರಿಂದ ಕೈತುಂಬ ಹಣ ಸಿಗುವುದಲ್ಲದೆ, ಮಾಡಿದ ಸಾಲ ತೀರಿಸಲು ಸಾಧ್ಯವಾಗುತ್ತದೆ ಎಂದು ಬಡ ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿರುವುದು ಸುಳ್ಳಲ್ಲ. ಇನ್ನಾದರೂ ಇತ್ತ ಸಂಬಂಧಿಸಿದವರು ಗಮನಹರಿಸಬೇಕಾದ ಅಗತ್ಯವಿದೆ.