ಚಾಮರಾಜನಗರದಲ್ಲಿ ಪೊಲೀಸ್ ಪೇದೆ ಪತ್ನಿ ನೇಣಿಗೆ ಶರಣು!
ಚಾಮರಾಜನಗರ, ಮೇ 17: ಪೊಲೀಸ್ ಪೇದೆಯ ಪತ್ನಿಯೊಬ್ಬರು ಪೊಲೀಸ್ ಇಲಾಖೆಯ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ನಗರ ಪೊಲೀಸ್ ಠಾಣೆಯ ಪೇದೆ ಪರಶುರಾಮ್ ಅವರ ಪತ್ನಿ ನಾಗರತ್ನ (19) ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪರಶುರಾಮ್ ರಾಯಚೂರು ಮೂಲದವರಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಚಾಮರಾಜನಗರದಲ್ಲಿ ತೋಳ ಪತ್ತೆಯಾಗಿರುವುದಲ್ಲಿ ವಿಶೇಷ ಏನಿದೆ?
ರಾಯಚೂರು ಜಿಲ್ಲೆಯ ತನ್ನ ಸಂಬಂಧಿಕರಾದ ನಾಗರತ್ನ ಅವರನ್ನು ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿ ಇಲ್ಲಿನ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.
ಪೇದೆ ಪರುಶುರಾಮ್ ಅವರು ಶನಿವಾರ ಎಂದಿನಂತೆ ಕರ್ತವ್ಯಕ್ಕೆ ತೆರಳಿ ಮನೆಗೆ ಹಿಂತಿರುಗಿದ್ದಾರೆ. ಮನೆಯ ಬಾಗಿಲು ತೆರೆಯದಿರುವುದನ್ನು ಕಂಡು ಗಾಬರಿಯಾಗಿ ಬಾಗಿಲು ಒಡೆದು ನೋಡಿದಾಗ, ನಾಗರತ್ನ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಬಳಿಕ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ತಂದಿರಿಸಿದ್ದಾರೆ. ನಾಗರತ್ನ ಪೋಷಕರು ರಾಯಚೂರು ಜಿಲ್ಲೆಯಿಂದ ಆಗಮಿಸಿದ ಬಳಿಕ ದೂರು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೊಳ್ಳೇಗಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.