ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ
Recommended Video
ಚಾಮರಾಜನಗರ, ಡಿಸೆಂಬರ್ 19: ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿ 15 ಜನರ ಸಾವಿಗೆ ಕಾರಣರಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ನೀಡಿದ್ದು, ಪ್ರಕರಣದ ತನಿಖೆ ನಡೆದ ಹಾದಿ, ಆರೋಪಿಗಳನ್ನು ಹಿಡಿದ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಡಿಸೆಂಬರ್ 14 ರಂದು ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಇದರಿಂದ ಈ ವರೆಗೆ 15 ಜನ ಅಸುನೀಗಿದ್ದರು. ಘಟನೆ ನಡೆದ ಐದು ದಿನಗಳಲ್ಲಿ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
ವಿಷ ಪ್ರಸಾದ ಸೇವಿಸಿದ 15 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಘಟನೆ ನಡೆದ ದಿನದಿಂದ ಪೊಲೀಸ ತನಿಖೆ ನಡೆಸಿದ ಹಾದಿ, ವಿಚಾರಣೆ, ಸಾಕ್ಷ್ಯಗಳು ಎಲ್ಲದರ ಬಗ್ಗೆ ದಕ್ಷಿಣ ವಲಯ ಪೊಲೀಸ್ ಐಜಿಪಿ ಶರತ್ ಚಂದ್ರ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡರು, ಅದರ ಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ದೇವಾಲಯದ ಇತಿಹಾಸ, ಆಡಳಿತದ ಮಾಹಿತಿ
ಏಕೆ ವಿಷ ಬೆರೆಸಿದರು ಎಂಬುದು ಗೊತ್ತಾದರೆ ಯಾರು ವಿಷ ಬೆರೆಸಿದರು ಎಂಬುದು ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಕಾರಣ ಹುಡುಕುವ ಕಾರ್ಯವನ್ನು ಪೊಲೀಸರು ಮೊದಲಿಗೆ ಮಾಡಿದರು. ದೇವಾಲಯದ ಇತಿಹಾಸ, ಟ್ರಸ್ಟ್ನ ವಿವಾದಗಳು, ಸೋಲೂರು ಮಠಕ್ಕೂ ದೇವಾಲಯಕ್ಕೂ ಇದ್ದ ಭಿನ್ನಾಬಿಪ್ರಾಯ. ಬ್ರಹ್ಮೇಶ್ವರ ದೇವಾಲಯಕ್ಕೂ ಮಾರಮ್ಮ ದೇವಾಲಯಕ್ಕೂ ಇದ್ದ ಭಿನ್ನಾಭಿಪ್ರಾಯ ಎಲ್ಲದರ ಬಗ್ಗೆ ಮಾಹಿತಿ ಕಲೆಹಾಕಿದರು ಪೊಲೀಸರು, ಅನುಮಾನ ಪಡಬಹುದಾದ ವ್ಯಕ್ತಿಗಳ ಗುರುತು ಸಹ ಹಾಕಿಕೊಂಡರು.
ಎಫ್ಐಆರ್ ನಲ್ಲಿನ ಎಲ್ಲರ ಮೇಲೂ ನಿಗಾ
ಘಟನೆ ನಡೆದ ನಂತರ ಮೊದಲಿಗೆ ಪ್ರಾಥಮಿಕ ತನಿಖಾ ವರದಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ಟ್ರಸ್ಟಿ ಚಿನ್ನಪ್ಪ, ಅಡುಗೆಯವರು, ವ್ಯವಸ್ಥಾಪಕ ಮಾದೇಶ, ಪ್ರಧಾನ ಅರ್ಚಕ ಎಲ್ಲರನ್ನೂ ಆರೋಪಿಗಳನ್ನಾಗಿಸಲಾಗಿತ್ತು. ಎಫ್ಐಆರ್ ನಲ್ಲಿ ನಮೂದಾಗಿದ್ದ ಎಲ್ಲ ಆರೋಪಿಗಳನ್ನು ಸತತ ವಿಚಾರಣೆ ಮಾಡಿದ್ದರು ಪೊಲೀಸರು, ಅಲ್ಲದೆ ಅವರಿಗೆ ಗೊತ್ತಿಲ್ಲೆ ಅವರ ಹಿನ್ನೆಲೆ ಕಲೆ ಹಾಕಿದ್ದರು.
ಮಾದೇಶನ ಹಿನ್ನೆಲೆ ಬಗ್ಗೆ ಅನುಮಾನ
ಮಾರಮ್ಮ ದೇವಾಲಯದ ವ್ಯವಸ್ಥಾಪಕ ಮಾದೇಶನ ಹಿನ್ನೆಲೆಯನ್ನೂ ಕಲೆ ಹಾಕಿದಾಗ ಆತ ಹೆಂಡತಿ ಅಂಬಿಕ ಹಾಗೂ ಸೋಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಒಂದೇ ಊರಿನವರು ಎಂಬುದು ತಿಳಿಯಿತು. ಅವರಿಬ್ಬರಿಗೂ ಇದ್ದ ಒಳಸ್ನೇಹದ ಬಗ್ಗೆಯೂ ಮಾಹಿತಿ ಕಲೆಹಾಕಿ ಆತನ ಮೇಲೆ ಹೆಚ್ಚು ಅನುಮಾನ ಪಟ್ಟು ವಿಚಾರಣೆ ನಡೆಸಿದ್ದಾರೆ.
ಸುಳಿವು ಸಿಕ್ಕಿದ್ದು ಇಲ್ಲೇ
ಮಾದೇಶನ ವಿಚಾರಣೆ ನಂತರ ಅಂಬಿಕ ವಿಚಾರಣೆಯನ್ನೂ ನಡೆಸಲಾಗಿದೆ ಆದರೆ ಇಬ್ಬರೂ ಸಹ ಮೊದಲಿಗೆ ಪ್ರಕರಣಕ್ಕೆ ತಮಗೆ ಸಂಬಂಧವಿಲ್ಲವೆಂದಿದ್ದಾರೆ. ಆದರೆ ಇತರೆ ಸಾರ್ವಜನಿಕರನ್ನು ವಿಚಾರಿಸಿದಾಗ ಅಂಬಿಕಾ ಮನೆಗೆ ಹನೂರಿನ ಕೃಷಿ ಅಧಿಕಾರಿ ಒಬ್ಬರು ಬಂದು ಹೋಗುತ್ತಿದ್ದರು ಎಂಬುದು ಗೊತ್ತಾಗಿದೆ.
ಕ್ರಿಮಿನಾಶಕ ತಂದು ಕೊಟ್ಟ ಅಧಿಕಾರಿ
ಹನೂರಿನ ಕೃಷಿ ಅಧಿಕಾರಿಯನ್ನು ಹಿಡಿದು ಕೇಳಿದಾಗ, ಅಂಬಿಕಾ, ತನ್ನ ಮನೆಯ ಬಳಿ ಹಾಕಿರುವ ಗಿಡಗಳಿಗೆ ಹೊಡೆಯಹಲು ಕ್ರಿಮಿನಾಶಕ ಬೇಕೆಂದು ಕೇಳಿದ್ದಾಗಿ, ಅಧಿಕಾರಿಯು ಕ್ರಿಮಿನಾಶಕ ಬಾಟಲಿ ಕೊಟ್ಟಿದ್ದಾಗಿ ಹೇಳಿದ್ದಾನೆ. ಬಾಟಲಿ ಕೊಡುವ ಸಮಯದಲ್ಲಿ ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಮನೆಯಲ್ಲಿದ್ದುದಾಗಿ ಹೇಳಿದ್ದಾರೆ.
ಸಿಡಿಆರ್ ನಿಂದ ಪೂರ್ಣ ಮಾಹಿತಿ
ಆ ನಂತರ ಅಂಬಿಕಾ, ಮಾದೇಶ ಅವರ ಕರೆ ಮಾಹಿತಿ (ಸಿಡಿಆರ್) ತೆಗೆಸಿ ನೋಡಿದಾಗ ಇವರ ಕೃತ್ಯ ಬಯಲಾಗಿದೆ. ಸ್ವಾಮೀಜಿ, ಅಂಬಿಕ, ಮಾದೇಶ ಪರಸ್ಪರ ಸಂಪರ್ಕದಲ್ಲಿದ್ದುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲಿಂದ ತನಿಖೆ ಸುಲಭವಾಗಿದೆ.
ತಪ್ಪೊಪ್ಪಿಕೊಂಡ ಆರೋಪಿಗಳು
ಸಾಕ್ಷ್ಯಗಳನ್ನು ಕಲೆಹಾಕಿ ಅಂಬಿಕಾ ಮತ್ತು ಮಾದೇಶನನ್ನು ಮತ್ತೆ ವಿಚಾರಣೆಗೆ ಒಳಪಡಿಸಿದಾಗ ಬೇರೆ ದಾರಿಯಿಲ್ಲದೆ ಅವರು ಪೂರ್ಣ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವಿಷ ಬೆರೆಸಿದ್ದು ದೊಡ್ಡಯ್ಯ ಮತ್ತು ಮಾದೇಶ, ವಿಷ ಬೆರೆಸಲು ಹೇಳಿದ್ದು ಇಮ್ಮಡಿ ಸ್ವಾಮೀಜಿ, ವಿಷ ಬೆರೆಸುವ ಕೃತ್ಯವನ್ನು ಕಾರ್ಯಗತ ಮಾಡಲು ನಿರ್ದೇಶನ ನೀಡಿದ್ದು ಅಂಬಿಕಾ.
ಇಮ್ಮಡಿ ಮಹದೇವಸ್ವಾಮಿ ಬಂಧನ
ತಪ್ಪೊಪ್ಪಿಗೆ ನಂತರ ಇಮ್ಮಡಿ ಮಹದೇವಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದರು. ಆ ನಂತರ ಸ್ವಾಮೀಜಿ ವಿಚಾರಣೆಯಲ್ಲಿ ಘಟನೆ ನಡೆಯಲು ಉದ್ದೇಶ ಏನೆಂಬುದು ಪೊಲೀಸರಿಗೆ ಮನದಟ್ಟಾಯಿತು. ಪ್ರಾಥಮಿಕ ತನಿಖೆ ಒಂದು ಹಂತಕ್ಕೆ ಬಂದು ತಲುಪುದಂತಾಯಿತು.
ಪೊಲೀಸರಿಗೆ ಬಹುಮಾನ ಘೋಷಣೆ
ಇಂದು (ಡಿಸೆಂಬರ್ 19) ರಂದು ಎಲ್ಲ ಆರೋಪಿಗಳನ್ನು ಚಾಮರಾಜನಗರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಅಲ್ಲದೆ ಈ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಇಲಾಖೆ ವತಿಯಿಂದ ಬಹುಮಾನ ಸಹ ಘೋಷಿಸಲಾಗಿದೆ.