ರಾಹುಲ್ ಗಾಂಧಿ ಜೊತೆ 240 ಮಂದಿ ವೇದಿಕೆ ಹಂಚಿಕೆ, ಜೋಡೋ ಯಾತ್ರೆಗೆ ಖಾಕಿ ಅಲರ್ಟ್!
ಚಾಮರಾಜನಗರ, ಸೆಪ್ಟೆಂಬರ್ 30: ರಾಹುಲ್ ಗಾಂಧಿ ಅವರ ಜೋಡೋ ಯಾತ್ರೆ ಶುಕ್ರವಾರ ಗುಂಡ್ಲುಪೇಟೆ ಮೂಲಕ ಕರ್ನಾಟಕವನ್ನು ಪ್ರವೇಶ ಸಿಗಲಿರುವ ಹಿನ್ನೆಲೆಯಲ್ಲಿ ಪೊಲೀಸ್ ಪಡೆ ಹೈ ಅಲರ್ಟ್ ಆಗಿದ್ದು, ಗುಂಡ್ಲುಪೇಟೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಕೋಮು ಸಾಮರಸ್ಯ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತ ಸಂಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ 'ಭಾರತ್ ಜೋಡೊ ಯಾತ್ರೆ' ಶುಕ್ರವಾರ ರಾಜ್ಯವನ್ನು ಪ್ರವೇಶಿಸಲಿದೆ. ಯಾತ್ರೆ ಕೇರಳದಿಂದ ರಾಜ್ಯದ ಗಡಿಭಾಗವಾದ ಗುಂಡ್ಲುಪೇಟೆಗೆ ಬೆಳಗ್ಗೆ 9 ಗಂಟೆಗೆ ಪ್ರವೇಶಿಸಲಿದ್ದು, ಅದ್ದೂರಿ ಸ್ವಾಗತ ನೀಡಲು ರಾಜ್ಯದ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಡಿಕೆ ಶಿವಕುಮಾರ್ ಭೇಟಿ; ಪೊಲೀಸರಿಗೆ ವಾರ್ನಿಂಗ್
ಕರ್ನಾಟಕದಲ್ಲಿ ಶುಕ್ರವಾರದಿಂದ ಆರಂಭಾಗಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕುವ ನಿರೀಕ್ಷೆಯಿದ್ದು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಮೂವರು ಎಸ್ಪಿ, ಎಂಟು ಜನ ಡಿವೈಎಸ್ಪಿ, 25 ಇನ್ಸ್ಪೆಕ್ಟರ್, 50 ಜನ ಸಬ್ ಇನ್ಸ್ಪೆಕ್ಟರ್, ಒಂದು ಸಾವಿರಕ್ಕೂ ಅಧಿಕ ಮಂದಿ ಪೇದೆ, ಕೆಎಸ್ಆರ್ಪಿ, 10ಕ್ಕೂ ಅಧಿಕ ಡಿಆರ್ ಸಿಬ್ಬಂದಿ ನಿಯೋಜಿಸಲಾಗಿದೆ. ಕಾನೂನು ಬಾಹಿರ ಕೃತ್ಯಕ್ಕೆ ಯಾರೇ ಮುಂದಾದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು, ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ವೇದಿಕೆ ಮೇಲೆ 240 ಮಂದಿ: ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಬೃಹತ್ ಸಭೆ ನಡೆಯಲಿದ್ದು ವೇದಿಕೆ ಮೇಲೆ 240 ಮಂದಿ ಆಸೀನರಾಗಲಿದ್ದಾರೆ. ರಾಹುಲ್ ಜೊತೆ ಹೆಜ್ಜೆ ಹಾಕುವ ಪಾದಯಾತ್ರಿಗಳು, ರಾಜ್ಯ ಮಟ್ಟದ ನಾಯಕರುಗಳು ವೇದಿಕೆಯಲ್ಲಿ ಇರಲಿದ್ದು, ರಾಜ್ಯದ ಎಲ್ಲಾ ನಾಯಕರುಗಳು ಹೆಜ್ಜೆ ಹಾಕಲಿದ್ದಾರೆ.
ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ನಡಿಗೆ ಆರಂಭಿಸಲಿರುವ ರಾಹುಲ್ ಗುಂಡ್ಲುಪೇಟೆ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಶನೇಶ್ವರ ದೇವಾಲಯದ ಬಳಿ ಸೋಲಿಗರು, ಜೇನುಕುರುಬರು ಸೇರಿದಂತೆ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಚಾಮರಾಜನಗರದಲ್ಲಿ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಜೊತೆಗೂ ಮಾತುಕತೆ ನಡೆಸಲಿದ್ದಾರೆ. ರಾತ್ರಿ 7.30ಕ್ಕೆ ಯಾತ್ರೆ ಬೇಗೂರು ತಲುಪಲಿದ್ದು, ಅಲ್ಲೇ ಮೊದಲ ದಿನ ರಾಹುಲ್ ಮತ್ತು ಇತರರು ವಾಸ್ತವ್ಯ ಹೂಡಲಿದ್ದಾರೆ.