ಬಂಡೀಪುರದಲ್ಲಿ ಗಂಧದ ಮರ ಕಳ್ಳರ ಮೇಲೆ ಫೈರಿಂಗ್: ಮೂವರ ಬಂಧನ
ಚಾಮರಾಜನಗರ, ಮೇ 19: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಕಳ್ಳರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಒಬ್ಬನ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಕೃತ್ಯದಲ್ಲಿ ತೊಡಗಿದ್ದ ಮೂವರು ಕಳ್ಳರನ್ನು ಬಂಧಿಸಲಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಕಾಡುಪ್ರಾಣಿ ಬೇಟೆ, ಮರಕಳ್ಳತನ ನಡೆಯುತ್ತಲೇ ಇದೆ. ಸಿಬ್ಬಂದಿಗಳ ಕಣ್ತಪ್ಪಿಸಿ ಅರಣ್ಯಕ್ಕೆ ನುಸುಳುವ ದುಷ್ಕರ್ಮಿಗಳು ತಮ್ಮ ಕೃತ್ಯವನ್ನು ಮುಂದುವರೆಸುತ್ತಿದ್ದಾರೆ.
ರೈಲಿನಲ್ಲಿ ನಗದು, ಚಿನ್ನ ಎಗರಿಸುತ್ತಿದ್ದ ಖದೀಮ ಅಂತೂ ಸೆರೆ
ಇದೀಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಬೇರಂಬಾಡಿ ಬೀಟ್ನಲ್ಲಿ ಶ್ರೀಗಂಧ ಮರಗಳ್ಳನ ಕಾಲಿಗೆ ಗುಂಡು ಹಾರಿಸಿ, ಮೂವರನ್ನು ಬಂಧಿಸುವ ಮೂಲಕ ಕಾಡುಗಳ್ಳರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಿಸಿ ಮುಟ್ಟಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಲಚ್ಚೀಪುರ ಕಾಲೋನಿಯ ನಿವಾಸಿಗಳಾದ ಅಜಿತ್, ಸುರೇಶ್ ಹಾಗೂ ಬೆಳ್ಳ ಬಂಧಿತ ಆರೋಪಿಗಳಾಗಿದ್ದಾರೆ.
ಅರಣ್ಯದಲ್ಲಿ ಮರ ಕತ್ತರಿಸುವ ಶಬ್ದದ ಜಾಡು ಹಿಡಿದು ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಶ್ರೀಗಂಧ ಮರ ಕಡಿಯುತ್ತಿದ್ದ ಅಜಿತ್, ಸುರೇಶ್, ಬೆಳ್ಳ ತಮ್ಮ ಬಳಿಯಿದ್ದ ಮಚ್ಚು, ಕೊಡಲಿಗಳಿಂದ ದಾಳಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಅಜಿತ್ ಎಂಬಾತನ ಕಾಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಟ್ಟಿದ್ದಾರೆ.
ಅಲ್ಲದೇ ತಕ್ಷಣ ಮೂವರನ್ನು ಬಂಧಿಸಿದ್ದಾರೆ. ಗುಂಡೇಟು ತಿಂದ ಅಜಿತ್ಗೆ ಕೂಡಲೇ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದ ಸುರೇಶ್ ಮತ್ತು ಬೆಳ್ಳ ಎಂಬಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರಿಂದ ಮರ ಕತ್ತರಿಸಲು ಬಳಸಿದ್ದ ಮಚ್ಚು, ಕೊಡಲಿಗಳು, 8 ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.