ಚಾಮರಾಜನಗರ ಗಡಿಯಲ್ಲಿ ನಕ್ಸಲ್ ಮೇಲೆ ಹದ್ದಿನ ಕಣ್ಣು
ಚಾಮರಾಜನಗರ, ಅಕ್ಟೋಬರ್ 30: ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಮೂವರು ನಕ್ಸಲರನ್ನು ಹತ್ಯೆಗೈದಿರುವ ಬೆನ್ನಲ್ಲೇ ಕರ್ನಾಟಕ ಗಡಿಭಾಗದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪೊಲೀಸರು ನಕ್ಸಲರ ಬೆನ್ನು ಹತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಸ್ಥಳವನ್ನು ಅರಸಿ ಕರ್ನಾಟಕದತ್ತ ನುಸುಳುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಕೇರಳ ಮತ್ತು ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
"ಹತ್ಯೆಯಾದ ನಕ್ಸಲೀಯರಾದ ಶ್ರೀಮತಿ, ಸುರೇಶ್ ಯಾರೂ ಕರ್ನಾಟಕದವರಲ್ಲ"
ಈ ನಡುವೆ ಕೇರಳದ ಪಾಲಕ್ಕಾಡ್ ಅರಣ್ಯದಲ್ಲಿ ಗುಂಡೇಟಿಗೆ ಬಲಿಯಾದ ನಕ್ಸಲರು ಕರ್ನಾಟಕದವರಲ್ಲ ಎಂಬುದು ಸ್ಪಷ್ಟವಾಗಿದ್ದು, ಈ ಕುರಿತಂತೆ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಎಚ್..ಡಿ.ಆನಂದಕುಮಾರ್ ಮಾಹಿತಿ ನೀಡಿದ್ದಾರೆ. ಪಾಲಕ್ಕಾಡ್ ಸಮೀಪದ ಮಂಜಿಕಟ್ಟೆ ಅರಣ್ಯ ಪ್ರದೇಶದಲ್ಲಿ ಥಂಡರ್ ಬೊಟ್ಟು ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ. ಮೃತಪಟ್ಟವರು ತಮಿಳುನಾಡಿನ ಮಣಿವಸಗಂ, ರೇಮ್, ಕಾರ್ತಿಕ್ ಮತ್ತು ಅರವಿಂದ ಎಂದು ತಿಳಿದುಬಂದಿದೆ. ಅಲ್ಲದೆ ಚಾಮರಾಜನಗರ ಜಿಲ್ಲೆಯಾದ್ಯಂತ ಯಾವುದೇ ರೀತಿಯ ನಕ್ಸಲ್ ಚಲನವಲನ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಕಾಡಂಚಿನ ಗ್ರಾಮದಲ್ಲಿ ಗಿರಿಜನರು ನಕ್ಸಲರೊಂದಿಗೆ ಯಾವುದೇ ಕಾರಣಕ್ಕೂ ಸಂಪರ್ಕ ಹೊಂದಬಾರದು. ಒಂದು ವೇಳೆ ಅವರಿಂದ ತೊಂದರೆ ಉಂಟಾದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ.
ಇನ್ನೊಂದೆಡೆ ಗುಂಡ್ಲುಪೇಟೆ ತಾಲೂಕಿನ ಗಡಿಗಳಲ್ಲಿ ನಕ್ಸಲ್ ನಿಗ್ರಹದಳದವರು ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಪ್ರಾರಂಭಿಸಿದ್ದು, ಕೆಕ್ಕನಹಳ್ಳ, ಮೇಲುಕಾಮನಹಳ್ಳಿ, ಮದ್ದೂರು ಹಾಗೂ ಮೂಲೆಹೊಳೆ ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಬರಗಿ ಸಮೀಪದ ನಕ್ಸಲ್ ನಿಗ್ರಹದಳ ಕ್ಯಾಂಪಿನಲ್ಲಿರುವ ಯೋಧರು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕೇರಳ ಗಡಿಯ ಮೂಲೆಹೊಳೆ, ಕಲ್ಕೆರೆ, ತಮಿಳುನಾಡು ಗಡಿಯ ಕೆಕ್ಕನಹಳ್ಳ ಅರಣ್ಯ ಪ್ರದೇಶದಲ್ಲಿ ಎರಡು ಪ್ರತ್ಯೇಕ ತಂಡಗಳಲ್ಲಿ ಕೂಂಬಿಂಗ್ ಪ್ರಾರಂಭಿಸಿದ್ದು ನಕ್ಸಲರು ಕರ್ನಾಟಕದತ್ತ ನುಸುಳದಂತೆ ಜಾಗ್ರತೆ ವಹಿಸಿದ್ದಾರೆ.