ಲಾಕ್ ಡೌನ್ ನಡುವೆ ಮಾಂಸಕ್ಕಾಗಿ ಚಾಮರಾಜನಗರದಲ್ಲಿ ಕಾಡಿಗೆ ಬೆಂಕಿ ಹಚ್ಚಿ ಕಳ್ಳಬೇಟೆ
ಚಾಮರಾಜನಗರ, ಏಪ್ರಿಲ್ 22: ಕಾಡಿಗೆ ಬೆಂಕಿ ಇಟ್ಟು ಅರಣ್ಯ ಇಲಾಖೆ ಅಧಿಕಾರಿಗಳ ಗಮನವನ್ನು ಬೇರೆಡೆ ಸೆಳೆದು ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಕಳ್ಳಬೇಟೆ ಜಾಲವನ್ನು ಕಂಡುಹಿಡಿದ ಪೊಲೀಸರು ಇವರನ್ನು ಬಂಧಿಸಿದ್ದಾರೆ.
Recommended Video
ಲಾಕ್ ಡೌನ್ ನಿಂದಾಗಿ ಗಡಿ ಜಿಲ್ಲೆಯಲ್ಲಿ ಕಳ್ಳ ಬೇಟೆಗಾರರ ಕರಾಮತ್ತು ಹೆಚ್ಚಾಗಿತ್ತು. ಕಾವೇರಿ ವನ್ಯಜೀವಿ ಧಾಮದಲ್ಲಿ ಪದೇ ಪದೇ ಬೆಂಕಿ ಬೀಳುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿತ್ತು. ಒಂದು ವಾರದಿಂದ ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಕಳ್ಳ ಬೇಟೆಗಾರರಿಂದ ಬೆಂಕಿಗೆ ಆಹುತಿಯಾಗಿತ್ತು. ಈ ಬೇಟೆಗಾರರು ಮಂಗಳವಾರವೂ ಕಳ್ಳಬೇಟೆಯಲ್ಲಿ ತೊಡಗಿಕೊಂಡಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕಾಡಿಗೆ ಬೆಂಕಿ ಇಟ್ಟು ಅರಣ್ಯ ಇಲಾಖೆ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ವನ್ಯ ಜೀವಿಗಳ ಬೇಟೆಯಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಜಿಂಕೆ, ಮೊಲ, ಕಡವೆ, ವಿವಿಧ ಜಾತಿ ಪಕ್ಷಿಗಳ ಬೇಟೆಯಾಡಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಯಾರಾಜ್, ಚಾರ್ಲಿಸ್, ಜ್ಞಾನ ಪ್ರಕಾಶ್ ಬಂಧಿತ ಬೇಟೆಗಾರರು.
ಬಂಧಿತರಿಂದ ನಾಡ ಬಂದೂಕು, ಡೈನಮೇಟ್, ಮದ್ದುಗುಂಡುಗಳು, ಚಾಕು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಪಕ್ಷಿಗಳ ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ ಅರಣ್ಯ ಇಲಾಖೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.