ಬಂಡೀಪುರದಲ್ಲಿ ಪ್ಲಾಸ್ಟಿಕ್ ಹಾವಳಿ ತಪ್ಪಿಸಲು ಹೊಸ ಯೋಜನೆ
ಚಾಮರಾಜನಗರ, ಜುಲೈ 5: ವನ್ಯಪ್ರಿಯರ ನೆಚ್ಚಿನ ತಾಣ ಬಂಡೀಪುರ. ಇಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಅದರೊಟ್ಟಿಗೆ ಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆಯೂ ಅವ್ಯಾಹತವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವನ್ಯಪ್ರಾಣಿಗಳ ಹಿತದೃಷ್ಟಿಯಿಂದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರುವ ಬಗ್ಗೆ ಅರಣ್ಯ ಇಲಾಖೆ ಗಂಭೀರವಾಗಿ ಯೋಚಿಸುತ್ತಿದೆ. ಹಾಗಾಗಿಯೇ ಪ್ರಾರಂಭಿಕವಾಗಿ ಬಂಡೀಪುರದ ಪ್ರವಾಸಿ ತಾಣಗಳಲ್ಲಿ ಹಾಗೂ ಚೆಕ್ಪೋಸ್ಟ್ಗಳಲ್ಲಿ ನೋ ಪ್ಲಾಸ್ಟಿಕ್ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಿದೆ.
ಇಲ್ಲಿಗೆ ಬರುವ ಪ್ರವಾಸಿಗರಿಗೆ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಸದಂತೆ ಇಲಾಖೆ ಸಿಬ್ಬಂದಿ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದಾರೆ. ಹಾಗಿದ್ದರೂ ಈ ಸಂರಕ್ಷಿತ ಪ್ರದೇಶದಲ್ಲಿ ಊಟಿ ಮತ್ತು ಕೇರಳದ ಕಡೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡುವ ಜಾಯಮಾನ ಮುಂದುವರೆಯುತ್ತಲೇ ಇದೆ.
ಇನ್ಮುಂದೆ ಕೈನಲ್ಲಿ ಪ್ಲಾಸ್ಟಿಕ್ ಹಿಡಿದಿದ್ದರೂ ಬೀಳುತ್ತೆ ದಂಡ
ಬಂಡೀಪುರ ಮಾತ್ರವಲ್ಲ, ಪಕ್ಕದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ನೀರಿನ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟಣವನ್ನು ಕಂಡಕಂಡಲ್ಲಿ ಎಸೆಯುತ್ತಿದ್ದಾರೆ. ಪ್ರಯಾಣದ ಅವಧಿಯಲ್ಲಿ ತಿಂಡಿಗಳನ್ನು ತಿಂದು, ದಾರಿಯಲ್ಲಿ ಸಿಗುವ ಪ್ರಾಣಿಗಳಿಗೂ ನೀಡಿ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ಕೆಲವರು ರಸ್ತೆ ಬದಿ ವಾಹನ ನಿಲ್ಲಿಸಿ ಮದ್ಯಪಾನ ಮಾಡಿ ಬಾಟಲಿಗಳನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ. ಇವುಗಳು ಪ್ರಾಣಿಗಳಿಗೆ ಕಂಟಕವಾಗುತ್ತಿವೆ. ಬಂಡೀಪುರ ಅರಣ್ಯ ವ್ಯಾಪ್ತಿಯೊಂದರಲ್ಲೇ ತಿಂಗಳಿಗೆ ಒಂದು ಟ್ರಾಕ್ಟರ್ನಷ್ಟು ಕಸ ಸಂಗ್ರಹವಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ ವರ್ಗ.
ಈಗಾಗಲೇ 10 ಜನರನ್ನು ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಎಸೆಯುವ ಪ್ರವಾಸಿಗರು ಹಾಗೂ ವಾಹನ ಸವಾರರ ಮೇಲೆ ನಿಗಾ ಇಡಲು ಮತ್ತು ಕಸ ಸಂಗ್ರಹಿಸಲು ನಿಯೋಜಿಸಿದ್ದು, ಇವರೆಲ್ಲರೂ ಕಾರ್ಯ ಪ್ರವೃತ್ತರಾಗಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ಕಾದಾಡಿ ಸತ್ತ ಹುಲಿ?
ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಾಲ್ವರು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದರೆ, ಇಬ್ಬರು ಸಿಬ್ಬಂದಿ ಕಸ ತೆಗೆಯುವ ಕೆಲಸದಲ್ಲಿ ನಿರತರಾಗುತ್ತಾರೆ. ಪ್ರಾಣಿಗಳು ಹಾಗೂ ಪರಿಸರಕ್ಕೆ ಕಂಟಕವಾಗುತ್ತಿರುವ ಪ್ಲಾಸ್ಟಿಕ್ ಅನ್ನು ಬಳಸದಂತೆ ಅನೇಕ ಬಾರಿ ದಂಡ ವಿಧಿಸಿದ್ದರೂ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಹಾಗಾಗಿ ಪ್ಲಾಸ್ಟಿಕ್ ಬೇಡ ಅಭಿಯಾನದ ಮೂಲಕ ಕನ್ನಡ, ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಸಂದೇಶ ಸಾರುವ ಕರಪತ್ರವನ್ನು ಮುದ್ರಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಹಂಚುವ ಯೋಜನೆಯನ್ನು ಅರಣ್ಯ ಇಲಾಖೆ ಮಾಡಲಿದೆ.