ಬಂಡೀಪುರದಲ್ಲಿ ಹೆಚ್ಚಿದೆ ಮದ್ಯದ ಬಾಟಲಿ ಹಾವಳಿ: ಪ್ರಾಣಿಗಳ ಗೋಳು ಕೇಳೋರ್ಯಾರು?
ಚಾಮರಾಜನಗರ, ಜುಲೈ 12: ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ಕುಡಿದು, ಕಾಡಂಚಿನ ರಸ್ತೆ ಬದಿಗಳಲ್ಲೇ ಮದ್ಯದ ಬಾಟಲಿಗಳನ್ನು ಎಸೆದು ಪ್ರಾಣಿಗಳ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ. ಇದಕ್ಕೆ ಜೊತೆಯಾಗಿ ಪ್ಲಾಸ್ಟಿಕ್ ಕೂಡ ಸೇರಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಚಾಳಿ ಇನ್ನೂ ನಿಂತಂತೆ ಕಾಣುತ್ತಿಲ್ಲ.
ಬಂಡೀಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ, ಕಡವೆ, ಆನೆಗಳು ಹೆಚ್ಚಾಗಿವೆ. ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳಿಂದ ಅವುಗಳ ಸಂಚಾರಕ್ಕೆ ತೊಂದರೆಯಾಗಿದೆ. ರಾತ್ರಿ ಹೊತ್ತು ರಸ್ತೆ ಬದಿಯಲ್ಲಿಯೇ ಮದ್ಯ ಸೇವಿಸುವ ಕುಡುಕರು, ಪರಿಣಾಮದ ಕುರಿತು ಎಳ್ಳಷ್ಟೂ ಯೋಚಿಸದೆ ಬಾಟಲಿಗಳನ್ನು ಕಾಡಿನೊಳಗೆ ಎಸೆಯುತ್ತಿದ್ದಾರೆ.
ಬಂಡೀಪುರದಲ್ಲಿ ಸಫಾರಿ ರಸ್ತೆ ವಿಸ್ತರಣೆಗೆ ಮುಂದಾದ ಅರಣ್ಯ ಇಲಾಖೆ
ಕಾಡಿನೊಳಗೆ ಮದ್ಯ ಸೇವಿಸಿದವರ ಪ್ರವೇಶವನ್ನು ತಡೆಯುವುದು ಹಾಗೂ ರಸ್ತೆ ಬದಿ ಬಾಟಲಿಗಳನ್ನು ಬಿಸಾಡದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ. ಆದರೆ ಇಲಾಖೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಪರಿಣಾಮ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರಾಣಿಪ್ರಿಯರಾದ ರವಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಲಿಗೆ ಗಾಜು ಹೊಕ್ಕಿ, ಗಾಯ ಉಲ್ಬಣಗೊಂಡು ಪ್ರಾಣಿಗಳು ನೋವನ್ನನುಭವಿಸುತ್ತವೆ. ಕೆಲವು ಪ್ರಾಣಿಗಳು ಪ್ರಾಣವನ್ನೂ ಕಳೆದುಕೊಳ್ಳುತ್ತವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಾನೂನು ಕ್ರಮ ಜರುಗಿಸಬೇಕು. 'ಪ್ಲಾಸ್ಟಿಕ್ ನಿಷೇಧ' ಎಂದು ಬೋರ್ಡ್ ಹಾಕಿದ್ದರೂ ಸಫಾರಿಗೆ ತೆರಳುವ ವೇಳೆ ತಿಂಡಿ ತಿಂದು ಅಲ್ಲಲ್ಲೇ ಬಿಸಾಡುವುದು ತಪ್ಪಿಲ್ಲ. ಇದನ್ನೂ ತಡೆಯಬೇಕಿದೆ.