ಹುಚ್ಚಯ್ಯನಕಟ್ಟೆಯ ಅಲ್ಪಾಯುಷಿ ಜಲಧಾರೆಯಲ್ಲೀಗ ಜನಜಾತ್ರೆ
ಚಾಮರಾಜನಗರ, ಜೂನ್ 6: ಬ್ರಿಟೀಷರ ಕಾಲದಲ್ಲಿ ಕೆರೆಯೊಂದಕ್ಕೆ ಕಟ್ಟಲಾಗಿದ್ದ ಹುಚ್ಚಯ್ಯನ ಕಟ್ಟೆ ಇದೀಗ ತಾತ್ಕಾಲಿಕ ಜಲಪಾತವಾಗಿ ಮಾರ್ಪಾಡುಗೊಂಡಿದೆ. ಜಲಧಾರೆಯಾಗಿ ಧುಮುಕುತ್ತಿರುವ ಹುಚ್ಚಯ್ಯನ ಕಟ್ಟೆಯಲ್ಲಿ ಆಡಿ ನಲಿಯಲು ಸಾವಿರಾರು ಮಂದಿ ದೌಡಾಯಿಸುತ್ತಿದ್ದಾರೆ.
ಚಾಮರಾಜನಗರ: ಹುಚ್ಚಪ್ಪನಕಟ್ಟೆಯಲ್ಲಿ ಹರಿದಿದೆ ಜಲಧಾರೆ
ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಹೋಬಳಿಯ ಲಕ್ಷ್ಮೀಪುರ ಸಮೀಪವಿರುವ ಹುಚ್ಚಯ್ಯನಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಈ ಜಲಧಾರೆಯ ಸೃಷ್ಟಿಯೇ ಆಕಸ್ಮಿಕ. ಮೂಲತಃ ಇದೊಂದು ಕಟ್ಟೆಯಷ್ಟೆ. ಹಿಂದೆ ಬ್ರಿಟೀಷರು ಕೆರೆಗೆ ಕಟ್ಟೆ ಕಟ್ಟಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆಗಿನ ಕಾಲದಲ್ಲಿ ಮಳೆ ಜಾಸ್ತಿಯಾಗಿ ಕೆರೆ ಕೋಡಿ ಬಿದ್ದಾಗ ಜಲಧಾರೆ ಸೃಷ್ಟಿಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಸಮರ್ಪಕವಾಗಿ ಸುರಿಯದ ಕಾರಣದಿಂದ ಹುಚ್ಚಯ್ಯನಕಟ್ಟೆ ತುಂಬಿರಲಿಲ್ಲ. ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಯೋಜನೆಯಂತೆ ಈ ಬಾರಿ ಹುಚ್ಚಯ್ಯನಕಟ್ಟೆಗೆ ನೀರು ತುಂಬಿಸಲಾಗಿದ್ದು, ಕಬಿನಿಯಿಂದ ನೀರು ಹರಿಸಲಾಗಿದೆ. ಈ ನೀರು ತುಂಬಿ ಕಟ್ಟೆಯ ಮೂಲಕ ಕೆಳಕ್ಕೆ ಧುಮ್ಮಿಕ್ಕುತ್ತಿರುವುದರಿಂದ ಜಲಧಾರೆ ಸೃಷ್ಟಿಯಾಗಿದೆ. ಈ ಬಗ್ಗೆ ತಿಳಿದ ಸುತ್ತಮುತ್ತಲಿನ ಜನ ಜಲಧಾರೆಯನ್ನು ನೋಡಲು ಓಡೋಡಿ ಬಂದು ಈ ಅಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಾಗೆ ಬಂದವರು ನೀರಿನಲ್ಲಿ ಆಟವಾಡಿ ಖುಷಿ ಪಡುತ್ತಿದ್ದಾರೆ.
ಜಿಲ್ಲೆಯ ಜನ ಜಲಧಾರೆ ನೋಡಲು ಬೇರೆ ಕಡೆಗಳಿಗೆ ತೆರಳುತ್ತಿದ್ದರು. ಈಗ ತಮ್ಮ ಊರಿನಲ್ಲಿಯೇ ಜಲಧಾರೆ ಸೃಷ್ಟಿಯಾಗಿರುವುದರಿಂದ ಖುಷಿಯಿಂದ ಇತ್ತ ಬರುತ್ತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಕೆರೆಗೆ ನೀರು ಹರಿದು ಬರುವುದು ನಿಲ್ಲಲಿದೆ. ಆದ್ದರಿಂದ ಅಲ್ಪಾಯುಷಿ ಜಲಧಾರೆ ಒಂದಷ್ಟು ಸುಂದರ ದೃಶ್ಯಗಳನ್ನು ಜನರಿಗೆ ತೋರಿ ಕೆಲವೇ ದಿನಗಳಲ್ಲಿ ಅದೃಶ್ಯವಾಗಲಿದೆ. ಈ ವಿಚಾರ ತಿಳಿದೇ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ನೂಕುನುಗ್ಗಲು ಹೆಚ್ಚಾಗಿದೆ.
ನಿಮಗೂ ಜಲಧಾರೆಯನ್ನು ನೋಡುವ ಬಯಕೆಯಿದ್ದರೆ ಈಗಲೇ ಅತ್ತ ಹೆಜ್ಜೆ ಹಾಕಿದರೆ ಒಳಿತು. ಅಂದಹಾಗೆ ಈ ಜಲಧಾರೆ ಚಾಮರಾಜನಗರಕ್ಕೆ 18 ಕಿ.ಮೀ. ದೂರದಲ್ಲಿದ್ದು, ಹರದನಹಳ್ಳಿ-ಅಮಚವಾಡಿ-ಹೊನ್ನಳ್ಳಿ ಮಾರ್ಗ ಮಧ್ಯೆಯಿದೆ.