ಹಳ್ಳ ದಾಟಲು ಹಗ್ಗವನ್ನೇ ಆಸರೆ ಮಾಡಿಕೊಂಡ ಪುಟ್ಟೇಗೌಡನದೊಡ್ಡಿ ಜನರು
ಚಾಮರಾಜನಗರ, ಆಗಸ್ಟ್, 06: ಹನೂರು ತಾಲೂಕಿನ ಪುಟ್ಟೇಗೌಡನದೊಡ್ಡಿ ಹಳ್ಳ ಭಾರಿ ಮಳೆಯಾಗಿ ಉಕ್ಕಿ ಹರಿಯುತ್ತಿದ್ದು, ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮಳೆ ಬಂತೆಂದರೆ ಈ ಗ್ರಾಮದ ಜನರು ತಮ್ಮ ರಕ್ಷಣೆಗೆ ಹಗ್ಗ ಹುಡುಕುಡುತ್ತಾರೆ. ಮಕ್ಕಳಂತೂ ಪಾಲಕರ ಹೆಗಲೇರಿ ಭೋರ್ಗರೆಯುವ ನೀರು ಕಂಡು ಭಯಗೊಳ್ಳುತ್ತಾರೆ.
ಮಳೆ ಬಂದಾಗಲೆಲ್ಲಾ ಹನೂರು ತಾಲೂಕಿನ ಪುಟ್ಟೇಗೌಡನದೊಡ್ಡಿ ಗ್ರಾಮಸ್ಥರು ನೀರಿನಲ್ಲಿಯೇ ಜೀವನ ಕಳೆಯುವಂತಾಗಿದೆ. ಕಳೆದ 3 ದಶಕಗಳಿಂದ ಇವರು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಕೇಳಿದರೂ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ಬೇಡಿಕೆ ಈಡೇರದ ಕಾರಣ ಈಗಲೂ ಅಲ್ಲಿನ ಜನರು ಪ್ರಾಣಭಯದಲ್ಲೇ ಹಳ್ಳ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ.
ಪುಟ್ಟೇಗೌಡನದೊಡ್ಡಿಯಲ್ಲಿ ಮನೆಗಳ ಸಂಖ್ಯೆ:
ಹನೂರಿನ ಕಟ್ಟಕಡೆಯ ಗ್ರಾಮವಾದ ಮೀಣ್ಯಂ ಸಮೀಪದ ಹಳ್ಳದಾಚೆ ಇರುವ ಪುಟ್ಟೇಗೌಡನದೊಡ್ಡಿಯಲ್ಲಿ ಸುಮಾರು 100 ಮನೆಗಳಿದ್ದು, 600 ಎಕರೆಯಷ್ಟು ಕೃಷಿ ಭೂಮಿ ಇದೆ. ಶಾಲೆ, ಆಸ್ಪತ್ರೆ, ದಿನಸಿ ಏನೆ ಬೇಕಂದರೂ ಇಲ್ಲಿನ ಜನರು 100 ಅಡಿ ಉದ್ದದ ಹಳ್ಳ ದಾಟಿ ಮೀಣ್ಯಂಗೆ ಬರಲೇಬೇಕು. ಮಳೆ ಬಂದಂತಹ ಸಂದರ್ಭದಲ್ಲಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಹಳ್ಳ ದಾಟುತ್ತಾರೆ.
ಹಳ್ಳ ದಾಟಲು ಹರಸಾಹಸ:
ಕಳೆದ 5-6 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳ್ಳ ರಭಸದಿಂದ ಹರಿಯುತ್ತಿದ್ದು, ಮರಗಿಡಗಳನ್ನು ಹೊತ್ತು ತರುತ್ತಿದೆ. ಹಳ್ಳ ದಾಟಬೇಕಾದಾಗ ಮರ ಅಡ್ಡ ಬಂದರೇ ಅಲ್ಲಿದ್ದವರ ಕಥೆ ಅಧೋಗತಿ ಎಂಬಂತಾಗಿದೆ. ಹಳ್ಳದ ಎರಡು ಬದಿಯಲ್ಲಿ ಹಗ್ಗ ಹಿಡಿದು ಯುವಕರು ಹಳ್ಳ ದಾಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಹೆಗಲ ಮೇಲೆ ಹೊತ್ತು ಶಾಲೆಗಳಿಗೆ ತಲುಪಿಸಬೇಕಿದೆ. ಇನ್ನು ರೋಗಿಗಳು, ಮಹಿಳೆಯರನ್ನು ಹೆಗಲ ಮೇಲೆ ಹಗ್ಗ ಹಿಡಿದು ದಾಟಿಸುತ್ತಿದ್ದೇವೆ ಎಂದು ಗ್ರಾಮದ ಮಾದೇಶ್ ಪುಟ್ಟೇಗೌಡನದೊಡ್ಡಿ ಎಂಬುವರು ಅಳಲನ್ನು ತೋಡೊಕೊಂಡಿದ್ದಾರೆ.
ಇನ್ನಾದರೂ ಗ್ರಾಮಕ್ಕೆ ಸೇತುವೆ ನಿರ್ಮಿಸಿ. ಇಲ್ಲವೇ ತಾತ್ಕಾಲಿಕ ಪರಿಹಾರ ಒದಗಿಸಬಹುದಾದ ಕ್ರಮಗಳನ್ನು ಕೈಗೊಳ್ಳಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಆಗ್ರಹಿಸಿದರು. ಒಂದು ಮಳೆಗೆ ಇಷ್ಟು ಅವಾಂತರವಾದರೆ, ವಾರದ ಭವಿಷ್ಯದಲ್ಲಿ ಮಳೆ ಹೆಚ್ಚಾದಷ್ಟು ಅನಾಹುತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.