ಹರಕುಮುರುಕು ಗುಡಿಸಲೇ ಗತಿಯೇ ಮದ್ದೂರು ಕಾಲೋನಿ ಮಂದಿಗೆ?
ಚಾಮರಾಜನಗರ, ನವೆಂಬರ್ 12: ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವ ಜನಪ್ರತಿನಿಧಿಗಳ ಭರವಸೆಗಳು ಚುನಾವಣೆ ಸಂದರ್ಭ ಮಾತ್ರ ಕೇಳಿಸಿ ನಂತರ ಮಾಯವಾಗೇ ಬಿಡುತ್ತವೆ. ಇದೇ ಕಾರಣಕ್ಕೆ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ಜನ ಹರಕುಮುರುಕು ಗುಡಿಸಲಲ್ಲೇ ದಿನ ಕಳೆಯುತ್ತಿದ್ದಾರೆ.
ಇದಕ್ಕೆ ಕರ್ನಾಟಕ ಕೇರಳ ರಾಜ್ಯಗಳ ಗಡಿಯಂತಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯೇ ಸಾಕ್ಷಿ. ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ ಮೂಲ ಸೌಕರ್ಯವಿಲ್ಲದೆ, ಸರಿಯಾದ ಸೂರಿಲ್ಲದೇ, ಮುರುಕಲು ಗುಡಿಸಲಲ್ಲಿ ಜೀವನ ಸಾಗಿಸುವ ಕಾಡುಕುರುಬ ಜನಾಂಗ ಕಾಣಸಿಗುತ್ತಾರೆ. ಇನ್ನೂ ಆದಿ ಮಾನವರಂತೆ ಜೀವನ ಸಾಗಿಸುತ್ತಿರುವ ಇವರನ್ನು ಕಂಡರೆ ಬೇಸರವಾಗದೇ ಇರಲು ಸಾಧ್ಯವೇ ಇಲ್ಲವೇನೋ.
ಸಂತ್ರಸ್ತೆಗೆ ಬೆಳಿಗ್ಗೆ ಪರಿಹಾರದ ಚೆಕ್ ನೀಡಿ, ಸಂಜೆ ವಾಪಸ್ ಪಡೆದರು...!
ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ತಲತಲಾಂತರದಿಂದಲೂ ಅರಣ್ಯದಲ್ಲಿ ದೊರಕುವ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಾ ಬರುತ್ತಿದ್ದಾರೆ. ಇವರ ಪೈಕಿ ಕೆಲವರು ಕೂಲಿ ಕೆಲಸ ಮಾಡಿಯೂ ಬದುಕು ಕಂಡುಕೊಂಡಿದ್ದಾರೆ. ಆದರೆ ಹಿಂದಿನಿಂದಲೂ ಗುಡಿಸಲಲ್ಲೇ ವಾಸ ಮಾಡುತ್ತಾ ಬಂದಿರುವ ಇವರ ಹಣೆಬರಹ ಇಂದಿಗೂ ಬದಲಾಗಿಲ್ಲ.
ಹಾಗೆ ನೋಡಿದರೆ ಮದ್ದೂರು ಕಾಲೊನಿಯು ಬೇರಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಆದರೆ ಈ ಜನರಿಗೆ ಸರ್ಕಾರದಿಂದ ಸಿಗಬೇಕಾದ ಸೌಕರ್ಯಗಳೇ ಸಿಕ್ಕಿಲ್ಲ. ಸದ್ಯ ಪಂಚಾಯಿತಿ ವತಿಯಿಂದ ವಸತಿ ಯೋಜನೆಯಡಿ ಇಲ್ಲಿಗೆ 10 ಮನೆಗಳು ಮಂಜೂರಾಗಿದ್ದು, ಅನುದಾನದ ಕೊರತೆಯಿಂದ ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿವೆ.
ತಹಶೀಲ್ದಾರ್ ಶ್ರಮದಿಂದ ನಿರ್ಗತಿಕ ಕುಟುಂಬಕ್ಕೆ ಸಿಕ್ಕಿತು 'ಬೆಳಕು'
ಈ ಹಿಂದೆ ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಹರೀಶ್ಕುಮಾರ್ ಅವರು ಈ ಕಾಲೋನಿಯಲ್ಲಿ ವಾಸ್ತವ್ಯ ಹೂಡಿ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದ್ದರು. ಅವರು ವರ್ಗಾವಣೆಯಾಗಿದ್ದರಿಂದ ಎಲ್ಲವೂ ನಿಂತಲ್ಲೇ ನಿಂತಿವೆ.
ಇಲ್ಲಿ ಅವಿದ್ಯಾವಂತರು, ಬಡವರೇ ಹೆಚ್ಚಿರುವುದರಿಂದ ಅವರನ್ನು ಕೇವಲ ಮತಕ್ಕಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳು ಬಳಿಕ ಮರೆತು ಬಿಡುತ್ತಿದ್ದಾರೆ. ಇದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ನಾಯಕರು ಬರುತ್ತಾರೆ, ಬಳಿಕ ಮರೆತು ಬಿಡುತ್ತಾರೆ. ಇದರಿಂದ ನಾವು ಗುಡಿಸಲಲ್ಲೇ ಕಾಲ ಕಳೆಯುವಂತಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹತ್ತು ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು, ಅವು ಇಂತಹ ಗ್ರಾಮಗಳ ಜನರಿಗೆ ತಲುಪದಿರುವುದು ನಿಜಕ್ಕೂ ನಮ್ಮ ವ್ಯವಸ್ಥೆಯನ್ನು ಅಣಕಿಸುವಂತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ಕಾಲೋನಿಯನ್ನು ಗುಡಿಸಲು ರಹಿತವನ್ನಾಗಿ ಮಾಡಬೇಕಿದೆ.