ವೀರಪ್ಪನ್ ಹುಟ್ಟೂರಲ್ಲಿ ಲಸಿಕೆ ಭಯ; ಕೋವಿಡ್ ಪರೀಕ್ಷೆಗೂ ಒಪ್ಪದ ಜನ
ಚಾಮರಾಜನಗರ, ಮೇ 28; ಲಸಿಕೆ ಹಾಕಿಸಿಕೊಂಡರೆ ಸಾಯುತ್ತಾರೆ ಎಂದು ಕಿಡಿಗೇಡಿಗಳು ಹಬ್ಬಿಸಿರುವ ಸುದ್ದಿಯಿಂದಾಗಿ ಕಾಡುಗಳ್ಳ ದಿ. ವೀರಪ್ಪನ್ ಹುಟ್ಟೂರು ಗೋಪಿನಾಥಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಸಿಬ್ಬಂದಿ ಹೊರತುಪಡಿಸಿದರೆ ಕೇವಲ 3 ಮಂದಿ ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆ 5,137. ಇಡೀ ಗ್ರಾಮದಲ್ಲಿ ಈ ತನಕ ಲಸಿಕೆ ಹಾಕಿಸಿಕೊಂಡಿರುವವರ ಸಂಖ್ಯೆ ಕೇವಲ 11. ಇದಕ್ಕೆ ಕಾರಣವೇ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ವದಂತಿ.
ಕೋವಿಡ್ ಲಸಿಕೆ ಪಡೆಯಲು ಮೈಸೂರಿನ ಹಾಡಿಯ ಜನರ ಹಿಂದೇಟು
ಆಶ್ಚರ್ಯದ ಸಂಗತಿ ಎಂದರೆ ಸ್ವತಃ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಗಾಮಿ ಹಾಗೂ ಇತರ 10 ಮಂದಿ ಸದಸ್ಯರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ. ಪಂಚಾಯಿತಿ ಉಪಾಧ್ಯಕ್ಷ ನಾಗರಾಜರೆಡ್ಡಿ ಹಾಗೂ ಅವರ ಪುತ್ರ ಸತೀಶ್ ಹಾಗೂ ಇನ್ನೊಬ್ಬ ವ್ಯಕ್ತಿ ಸೋಮಾಲಿ ಎಂಬ ಮೂವರು ಮಾತ್ರ ಲಸಿಕೆ ಪಡೆದಿದ್ದಾರೆ.
ಚಾಮರಾಜನಗರ; ಕೊರೊನಾ ದೇವಿಯ ಪ್ರತಿಷ್ಠಾಪಿಸಿ ಪೂಜೆ!
ಬಹುತೇಕ ತಮಿಳರೇ ಇರುವ ಈ ಗ್ರಾಮಗಳ ಜನತೆ ತಮಿಳು ಸಿನಿಮಾಗಳ ಕಟ್ಟಾ ಅಭಿಮಾನಿಗಳಾಗಿದ್ದಾರೆ. ಇತ್ತೀಚೆಗೆ ತಮಿಳು ಹಾಸ್ಯನಟ ವಿವೇಕ್ ಕೋವಿಡ್ ಲಸಿಕೆ ಹಾಕಿಸಿಕೊಂಡ ಮರುದಿನ ಮೃತಪಟ್ಟಿದ್ದರು.
ಚಾಮರಾಜನಗರ; ಕಡಿಮೆಯಾಗದ ಕೊರೊನಾ, ಮುಂದುವರೆದ ಆತಂಕ
ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರಿಂದ ವಿವೇಕ್ ಸಾವನ್ನಪ್ಪಿದರು ಎಂಬ ಸುಳ್ಳು ಸುದ್ದಿ ಈ ಭಾಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದಲ್ಲದೆ ಕೊಳ್ಳೇಗಾಲ ತಾಲ್ಲೂಕು ಜಾಗೇರಿ ಗ್ರಾಮದಲ್ಲು ಹೀಗೆ ಒಬ್ಬರು ಮೃತಪಟ್ಟಿದ್ದಾರೆ ಎಂಬ ಮತ್ತೊಂದು ಸುಳ್ಳು ವದಂತಿ ಹಬ್ಬಿತು.
ಇದನ್ನು ಬಲವಾಗಿ ನಂಬಿದ ಜನ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಭಯಪಡುತ್ತಿದ್ದಾರೆ. 15 ದಿನಗಳಿಂದ ಗೋಪಿನಾಥಂ ಗ್ರಾಮ ಪಂಚಾಯಿತಿಗೆ ಒಳಪಡುವ ಗೋಪಿನಾಥಂ, ಪುದೂರು, ಹೊಗೆನಕಲ್, ಕೋಟೆಯೂರು, ಆಲಂಬಾಡಿ ಸೇರಿದಂತೆ 7 ಗ್ರಾಮಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಹಿರಿಯರಷ್ಟೇ ಅಲ್ಲದೇ ಯುವಕರು ಸೋಂಕಿಗೆ ತುತ್ತಾಗಿದ್ದಾರೆ.
ಏಪ್ರಿಲ್ 30ರಂದು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ಈ ಭಾಗದ ಜನರಿಗೆ ಕೋವಿಡ್ ಲಸಿಕೆ ಹಾಕುವ ಸಲುವಾಗಿ ಕ್ಯಾಂಪ್ ಹಾಕಿ ಇಡೀ ದಿನ ಕಾದರೂ ಯಾರೋಬ್ಬರು ಇತ್ತ ಸುಳಿಯಲಿಲ್ಲ.
ಪಿಡಿಒ ಕಿರಣ್ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಅರಣ್ಯ ಸಿಬ್ಬಂದಿ ಹಾಗೂ ಶಿಕ್ಷಕರ ತಂಡ ಮನೆಮನೆಗೂ ಭೇಟಿ ನೀಡಿ ಕೋವಿಡ್ ಲಸಿಕೆ ಬಗ್ಗೆ ಹಬ್ಬಿರುವ ವದಂತಿ ಸುಳ್ಳು. ಕೋವಿಡ್ನಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಆಶ್ಚರ್ಯದ ಸಂಗತಿ ಎಂದರೆ ಲಸಿಕೆ ತೆಗೆದುಕೊಂಡರೆ ನಮಗೆ ಏನೂ ಆಗುವುದಿಲ್ಲ ಎಂದು ಪತ್ರ ಬರೆದುಕೊಡಿ ಎಂದು ಜನ ಕೇಳುತ್ತಿದ್ದಾರೆ. ಕೇವಲ ಲಸಿಕೆ ಅಷ್ಟೇ ಅಲ್ಲ, ಕೊರೊನಾ ಸೋಂಕು ಇರುವ ಶಂಕಿತರು ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಲು ಸಹ ನಿರಾಕರಿಸುತ್ತಿದ್ದಾರೆ.
ಈ ಗ್ರಾಮಗಳಲ್ಲಿ ಇದುವರೆಗೆ 64 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದವರಲ್ಲಿ ಕೆಲವರು ಹೋಂ ಐಸೋಲೇಷನ್, ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
Recommended Video
ಆಸ್ಪತ್ರೆ ಹಾಗೂ ಕೇರ್ ಸೆಂಟರ್ಗಳ ಬಗ್ಗೆಯೂ ಕೆಲವು ವದಂತಿ ಹಬ್ಬಿದೆ. ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾದರೆ ವರದಿ ಪಾಸಿಟಿವ್ ಬಂದರೆ ಕೇರ್ ಸೆಂಟರ್ ಅಥವ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ ಎಂದು ಹೆದರಿ ಪರೀಕ್ಷೆಯನ್ನು ಮಾಡಿಸಲು ಜನರು ಮುಂದೆ ಬರುತ್ತಿಲ್ಲ.