ಚಾಮರಾಜನಗರಕ್ಕೆ ಕಂಟಕವಾಗುತ್ತಾ ತಮಿಳರ ಅಕ್ರಮ ಪ್ರವೇಶ?
ಚಾಮರಾಜನಗರ, ಮೇ 23: ಕೊರೊನಾ ಸೋಂಕು ಜಿಲ್ಲೆಗೆ ಬಾರದಂತೆ ಚಾಮರಾಜನಗರ ಜಿಲ್ಲಾಡಳಿತ ಹಗಲು ರಾತ್ರಿ ಶ್ರಮಿಸುತ್ತಿದೆ. ಅಲ್ಲದೆ ಎವರ್ ಗ್ರೀನ್ ಚಾಮರಾಜನಗರ ಅಭಿಯಾನವನ್ನು ಈಗಾಗಲೇ ಆರಂಭಿಸಿ ಗ್ರಾಮೀಣ ಮಟ್ಟದಿಂದಲೇ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
Recommended Video
ಆದರೆ ಇದೀಗ ಚಾಮರಾಜನಗರಕ್ಕೆ ಪಕ್ಕದ ತಮಿಳುನಾಡಿನಿಂದ ಜನರು ಕಾಡು ಹಾದಿಯಲ್ಲಿ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿಂದ ಜನ ಪ್ರವೇಶಿಸುತ್ತಿರುವುದು ಜಿಲ್ಲಾಡಳಿತಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದು ಮುಂದುವರೆದರೆ ಹಸಿರು ವಲಯದಲ್ಲಿರುವ ಜಿಲ್ಲೆ ಕೆಂಪು ವಲಯವಾಗಿ ಪರಿವರ್ತಿತವಾಗಬಹುದೇನೋ ಎಂಬ ಭಯವೂ ಕಾಡತೊಡಗಿದೆ.
ಕೊರೊನಾ ದೂರವುಳಿಸಲು ಎವರ್ ಗ್ರೀನ್ ಚಾಮರಾಜನಗರ ಅಭಿಯಾನ ಆರಂಭ
ಕಾಡು ಹಾದಿ ಮೂಲಕ ಜಿಲ್ಲೆಗೆ ಪ್ರವೇಶ
ಸದ್ಯ ಕೊರೊನಾ ಹಾಟ್ ಸ್ಪಾಟ್ ಆಗಿರುವ ಪಕ್ಕದ ತಮಿಳುನಾಡಿನಿಂದ ಪ್ರತಿದಿನ ನೂರಕ್ಕೂ ಹೆಚ್ಚು ಅಕ್ರಮ ವಲಸಿಗರು ಮೆಟ್ಟೂರಿನಿಂದ ಬರಗೂರು ಅರಣ್ಯ ಪ್ರದೇಶ-ತೊರೆಕಾಯಿಮಡುಹಳ್ಳ ತಲುಪಿ ಅಲ್ಲಿಂದ ಕಾಡುದಾರಿಯಲ್ಲಿ ರಾಜ್ಯದ ಮಲೆ ಮಹದೇಶ್ವರ ಬೆಟ್ಟ, ಗೋಪಿನಾಥಂ ಮುಖ್ಯರಸ್ತೆ ಮಾರ್ಗವಾಗಿ ಚಾಮರಾಜನಗರದ ಜಿಲ್ಲೆಯೊಳಕ್ಕೆ ಬರುತ್ತಿದ್ದಾರೆ. ಇದು ಗೌಪ್ಯವಾಗಿ ನಡೆಯುತ್ತಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರ ತಮಿಳುನಾಡಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಆರಂಭಿಸದೆ ನಿರ್ಬಂಧವನ್ನು ಮುಂದುವರೆಸಿರುವ ಕಾರಣ ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಅಲ್ಲದೆ ಅಲ್ಲಿಗೆ ತೆರಳುವವರು ನಿಬಂಧನೆಗಳನ್ನು ಅನುಸರಿಸಬೇಕಾಗಿದೆ. ಹೀಗಾಗಿ ಕಾಡು ಹಾದಿಯನ್ನು ಕಂಡುಕೊಂಡಿರುವ ಕೆಲವರು ಆ ಮಾರ್ಗದ ಮೂಲಕವೇ ಚಾಮರಾಜನಗರ ಜಿಲ್ಲೆಯೊಳಗೆ ಬರುತ್ತಿದ್ದಾರೆ.ಮೊದಲಿನಿಂದಲೂ ತಮಿಳುನಾಡಿನೊಂದಿಗೆ ಒಡನಾಟ
ತಮಿಳುನಾಡಿಗೆ ಹೊಂದಿಕೊಂಡಂತೆ ಜಿಲ್ಲೆ ಇರುವುದರಿಂದ ಎಲ್ಲ ರೀತಿಯ ಒಡನಾಟವನ್ನು ಇಲ್ಲಿಯ ಜನ ತಮಿಳುನಾಡಿನೊಂದಿಗೆ ಹೊಂದಿದ್ದಾರೆ. ಕೆಲವರಿಗೆ ಅಲ್ಲಿಗೆ ಹೋಗುವುದು, ಇನ್ನು ಕೆಲವರಿಗೆ ಅಲ್ಲಿಂದ ಬರುವುದು ಅನಿವಾರ್ಯವಾಗಿದೆ. ಹೀಗಾಗಿ ಅವರು ಅಕ್ರಮ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಆದರೆ ಅದು ಎಷ್ಟೊಂದು ಅಪಾಯ ಎನ್ನುವುದು ಅವರ ಅರಿವಿಗೆ ಬಂದಿಲ್ಲ. ಆದರೆ ಇವರಿಂದ ಸ್ಥಳೀಯರು ಜನ ಭಯಪಡುವಂತಾಗಿದೆ.
ಬರಗೂರು ಅರಣ್ಯ ಪ್ರದೇಶದಿಂದ ಪ್ರವೇಶ
ತಮಿಳುನಾಡಿನ ಬರಗೂರು ಅರಣ್ಯ ಪ್ರದೇಶ ಕಾಡು ದಾರಿಯಲ್ಲಿ ಮಕ್ಕಳು, ಮನೆ ಸಾಮಗ್ರಿಗಳನ್ನು ಹೊತ್ತು ಹಲವರು ನಡೆದು ಬರುತ್ತಿದ್ದರೆ, ಮತ್ತೆ ಕೆಲವರು ಬೈಕ್ ಗಳಲ್ಲಿ ಜನರನ್ನು ತಮಿಳುನಾಡಿನಿಂದ ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮದ ಮಾರ್ಗವಾಗಿ ಮಲೆ ಮಹದೇಶ್ವರ, ಗೋಪಿನಾಥಂ ಮುಖ್ಯರಸ್ತೆಗೆ ಕರೆತಂದು ಬಿಟ್ಟು ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ.
ಇತಿಶ್ರೀ ಹಾಡಲು ಜಿಲ್ಲಾಡಳಿತಕ್ಕೆ ಮನವಿ
ಈ ಹಾದಿಯ ಮೂಲಕ ಜಿಲ್ಲೆಯನ್ನು ಪ್ರವೇಶಿಸಿ ಬಳಿಕ ರಾಜ್ಯದ ಬೇರೆ ಜಿಲ್ಲೆಗಳಿಗೆ ತೆರಳಬಹುದೆಂಬ ಸಂಶಯ ವ್ಯಕ್ತಪಡಿಸುವ ಸ್ಥಳೀಯರು ಕೂಡಲೇ ಇದಕ್ಕೊಂದು ಇತಿಶ್ರೀ ಹಾಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ತಮಿಳುನಾಡಿನಿಂದ ಕಾಡಿನ ಮಾರ್ಗವಾಗಿ ಜಿಲ್ಲೆಗೆ ಬರುತ್ತಿರುವುದು ಇದುವರೆಗೆ ಜಿಲ್ಲಾಡಳಿತಕ್ಕೆ ಗಮನಕ್ಕೆ ಬಂದಿರಲಿಲ್ಲ. ಅಕ್ರಮ ವಲಸೆ ತಪ್ಪಿಸಲು ಜಿಲ್ಲಾ ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಸೂಚನೆ ನೀಡಿ ನುಸುಳುವಿಕೆ ತಪ್ಪಿಸಲಾಗುವುದು. ಜತೆಗೆ ಪಕ್ಕದ ತಮಿಳುನಾಡಿನಿಂದ ಬಂದಿರುವವರನ್ನು ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಗ್ರಾಮ ಕಾರ್ಯಪಡೆ, ಕೊರೊನಾ ಸೇನಾನಿಗಳು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಒಳಪಡಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.