ಗುಂಡ್ಲುಪೇಟೆ ಹಿರೀಕಾಟಿ ಜನ ಚುನಾವಣೆ ಬಹಿಷ್ಕರಿಸುತ್ತಾರಂತೆ!
ಚಾಮರಾಜನಗರ, ಏಪ್ರಿಲ್ 5: ಕಳೆದ ವಿಧಾನಸಭಾ ಉಪ ಚುನಾವಣೆ ವೇಳೆ ನೀಡಿದ ಭರವಸೆಗಳು ಗಂಡ್ಲುಪೇಟೆ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಭರವಸೆಯಾಗಿಯೇ ಉಳಿದಿದ್ದು, ಜನತೆಯ ಬಹುಬೇಡಿಕೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದ ಜನಪ್ರತಿನಿಧಿಗಳ ವಿರುದ್ಧ ತಾಲೂಕಿನ ಹಿರೀಕಾಟಿ ಗ್ರಾಮಸ್ಥರು ಹರಿಹಾಯ್ದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಗ್ರಾಮದಲ್ಲಿ ಕುಡಿಯಲು ಸೂಕ್ತ ನೀರಿಲ್ಲ, ಚರಂಡಿ ಸೌಲಭ್ಯವಿಲ್ಲ, ಸ್ಮಶಾನ ಸೌಲಭ್ಯವಿಲ್ಲ, ಸೂಕ್ತ ರಸ್ತೆಯಿಲ್ಲ ಹೀಗೆ ಸಮಸ್ಯೆಗಳ ಪಟ್ಟಿಯನ್ನೇ ಮುಂದಿಡುತ್ತಿರುವ ಗ್ರಾಮಸ್ಥರು ತಮ್ಮ ಊರಿಗೆ ಸೂಕ್ತ ಸೌಲಭ್ಯ ಕಲ್ಪಿಸದ ಕಾರಣದಿಂದ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತಂತೆ ಚುನಾವಣಾ ಅಧಿಕಾರಿಗಳಿಗೂ ಪತ್ರ ಬರೆದು ಚುನಾವಣೆಯನ್ನು ಬಹಿಷ್ಕರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಉಡುಪಿ: ಚುನಾವಣಾ ಬಹಿಷ್ಕಾರ ಕ್ಕೆ ಮುಂದಾದ ಬಡಾ ಗ್ರಾಮಸ್ಥರು
ಹಾಗೆ ನೋಡಿದರೆ ಗುಂಡ್ಲುಪೇಟೆಯ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಕಳೆದ ಉಪಚುನಾವಣೆಯ ಸಂದರ್ಭ ಮತ ಕೇಳಲು ಹೋದ ಸಂದರ್ಭದಲ್ಲೆಲ್ಲ ಪಕ್ಷಗಳ ನಾಯಕರಿಗೆ ಖಾಲಿ ಕೊಡಗಳ ಪ್ರದರ್ಶನ ಮಾಡಿದ್ದರು. 'ಗೆದ್ದರೆ ನೀರಿನ ಸಮಸ್ಯೆ ಬಗೆಹರಿಸುವ' ವಾಗ್ದಾನವನ್ನೂ ರಾಜಕಾರಣಿಗಳು ಮಾಡಿದ್ದರು. ಆದರೆ ಗೆದ್ದು ಆಯಿತು. ಸಚಿವರಾಗಿದ್ದಾಯಿತು. ಆದರೆ ನೀರಿನ ಸಮಸ್ಯೆ ಮಾತ್ರ ಕೆಲವು ಗ್ರಾಮಗಳಲ್ಲಿ ಹಾಗೆಯೇ ಇದ್ದು ಇದರಿಂದ ಆಕ್ರೋಶಗೊಂಡ ಹಿರೀಕಾಟಿ ಗ್ರಾಮಸ್ಥರು ಈಗ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಕಳೆದ ಎರಡು ತಿಂಗಳಿನಿಂದ ಮಿನಿಟ್ಯಾಂಕ್ ಗಳಿಗೆ ನೀರನ್ನೇ ಬಿಡುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಇನ್ನು ಗ್ರಾಮಕ್ಕೊಂದು ಸುತ್ತು ಹೊಡೆದರೆ ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಚರಂಡಿ ನೀರು ಅಲ್ಲಿಯೇ ನಿಂತು ಗಬ್ಬೆದ್ದು ನಾರುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇಷ್ಟೇ ಅಲ್ಲದೆ ಸತ್ತವರಿಗೆ ಅಂತ್ಯಸಂಸ್ಕಾರ ಮಾಡಲು ಸ್ಮಶಾನವೂ ಇಲ್ಲದಂತಾಗಿದೆ.
ಗ್ರಾಮದ ಹೆಚ್ಚಿನ ಮಂದಿ ಬಿಳಿಕಲ್ಲು ಕ್ವಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ನೀರಿಗಾಗಿ ತೊಂಬೆಗಳನ್ನು ನಿರ್ಮಿಸಿದರೂ ನೀರು ಮಾತ್ರ ತುಂಬಿದ ಉದಾಹರಣೆಗಳಿಲ್ಲ..
ಗ್ರಾಮದ ಮೂಲಕ ಭಾರದ ಕಲ್ಲನ್ನು ಹೊತ್ತು ಪ್ರತಿನಿತ್ಯ ಲಾರಿಗಳು ಸಾಗುವುದರಿಂದ ರಸ್ತೆಗಳೆಲ್ಲ ಗುಂಡಿಬಿದ್ದು ಹಾಳಾಗಿವೆ. ಧೂಳು ಹರಡುವುದರಿಂದ ರೋಗಗಳು ಉದ್ಭವವಾಗುತ್ತಿವೆ. ಒಟ್ಟಾರೆ ಸಮಸ್ಯೆಗಳನ್ನೇ ಹೊದ್ದು ಕುಳಿತಿರುವ ಗ್ರಾಮಕ್ಕೆ ಸಮಸ್ಯೆಯಿಂದ ಮುಕ್ತಿ ತೋರಿಸಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. ಜನಪ್ರತಿನಿಧಿಗಳು ಗಮನಹರಿಸದ ಕಾರಣದಿಂದ ಈಗ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಚುನಾವಣೆ ಬರುತ್ತಿದ್ದಂತೆಯೇ ಗ್ರಾಮಸ್ಥರು ತೆಗೆದುಕೊಳ್ಳುತ್ತಿರುವ ನಿರ್ಧಾರ ಜನಪ್ರತಿನಿಧಿಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.