ವಿಷಪ್ರಸಾದ ಸೇವನೆ: ಆಸ್ಪತ್ರೆಯಿಂದ ರೋಗಿಗಳ ಬಲವಂತ ಡಿಸ್ಚಾರ್ಜ್?
ಚಾಮರಾಜನಗರ, ಡಿಸೆಂಬರ್ 21: ಸುಳ್ವಾಡಿ ಮಾರಮ್ಮ ದುರಂತ ಪ್ರಕರಣದಲ್ಲಿ ಅಸ್ವಸ್ತರಾಗಿದ್ದ ರೋಗಿಗಳನ್ನು ಖಾಸಗಿ ಆಸ್ಪತ್ರೆಯಿಂದ ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 15 ಜನರು ಸಾವನ್ನಪ್ಪಿ 100 ಕ್ಕೂ ಜನರು ಅಸ್ವಸ್ಥರಾಗಿದ್ದ ದುರ್ಘಟನೆ ನಡೆದಿತ್ತು.
ಆದರೆ ಘಟನೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ರೋಗಿಗಳನ್ನು ಮೈಸೂರಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಆದರಂತೆ ದೊರೆಸ್ವಾಮಿ ಮೇಡು ಗ್ರಾಮದ ಆರ್ಯೆ(55) ಎಂಬುವರು ಇದೀಗ ಸಂಪೂರ್ಣವಾಗಿ ಗುಣಮುಖರಾಗದಿದ್ದರೂ ಅವರನ್ನು ಖಾಸಗಿ ಆಸ್ಪತ್ರೆಯೊಂದು ಬಲವಂತವಾಗಿ ಡಿಸ್ಚಾರ್ಜ್ ಮಾಡಿದೆ ಎಂದು ಹೇಳಲಾಗಿದೆ.
ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ
ಡಿಸ್ಚಾರ್ಜ್ ಆಗಿರುವ ಆರ್ಯೆ ಇನ್ನೂ ಗುಣಮುಖವಾಗಿಲ್ಲ. ಆಕೆ ಸುಸ್ತು ಹಾಗೂ ಹೊಟ್ಟೆನೋವು ಇದೆ ಎಂದರೂ ಕೂಡ ಆಸ್ಪತ್ರೆ ಸಿಬ್ಬಂದಿ ಬಲವಂತವಾಗಿ ಡಿಸ್ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಗ್ರಾಮಕ್ಕೆ ಹಿಂತಿರುಗಿರುವ ಮಹಿಳೆ ತೀವ್ರ ಅಸ್ವಸ್ಥಳಾಗಿದ್ದು, ಕುಟುಂಬದವರು ಆತಂಕಗೊಂಡು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.