ಆಕ್ಸಿಜನ್ ದುರಂತ; ನ್ಯಾಯಾಂಗ ಆಯೋಗದ ವಿಚಾರಣೆ ಮೈಸೂರಲ್ಲಿ!
ಚಾಮರಾಜನಗರ, ಜೂನ್ 11; ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2ರ ರಾತ್ರಿ ಆಕ್ಸಿಜನ್ ಕೊರತೆಯಿಂದ ಸಂಭವಿಸಿದ ದುರಂತ ಪ್ರಕರಣದ ತನಿಖೆಗಾಗಿ ಸರ್ಕಾರ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಎ. ಪಾಟೀಲ ನೇತೃತ್ವದ ಸಮಿತಿ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆಯಲಾಗಿದೆ.
ದುರಂತ ನಡೆದಿರುವುದು ಚಾಮರಾಜನಗರದಲ್ಲಿ ಕಚೇರಿ ಮೈಸೂರಿನಲ್ಲಿ ಏಕೆ? ಎಂದು ಸಂತ್ರಸ್ತರ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಕಚೇರಿ ತೆರೆದಿರುವುದು ಎಷ್ಟು ಸರಿ? ಎಂದು ಜನರು ಪ್ರಶ್ನಿಸಿದ್ದಾರೆ. ಚಾಮರಾಜನಗರದಲ್ಲೇ ಕಚೇರಿ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರ; ಪಾರ್ವತಿಬೆಟ್ಟದಲ್ಲಿ ನಡೆದಿದ್ದು ಪೂಜೆನಾ, ಮದುವೆನಾ?
ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಟ್ಟಡದಲ್ಲಿ ಆಯೋಗದ ಕಚೇರಿ ಕೆಲವು ದಿನಗಳ ಹಿಂದೆ ಕಾರ್ಯಾರಂಭ ಮಾಡಿದೆ. ಮೂರು ದಿನಗಳ ಹಿಂದೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಆಯೋಗದ ಕಾರ್ಯದರ್ಶಿಗಳು ಪ್ರಕರಣದಲ್ಲಿ ಮರಣಹೊಂದಿರುವ ರೋಗಿಗಳ ವಾರಸುದಾರರು, ಹಿತಾಸಕ್ತಿವುಳ್ಳವರು ಹಾಗೂ ಸಂಸ್ಥೆಗಳು ತಮ್ಮಲ್ಲಿರುವ ದಾಖಲೆಗಳನ್ನು ಪ್ರಮಾಣಪತ್ರದ ಜೊತೆಗೆ ಸಾರ್ವಜನಿಕ ಪ್ರಕಟಣೆ ಪ್ರಕಟವಾದ 15 ದಿನಗಳ ಒಳಗಾಗಿ, ವಿಚಾರಣಾ ಆಯೋಗಕ್ಕೆ ಕಚೇರಿ ಸಮಯದಲ್ಲಿ ಸಲ್ಲಿಸಬಹುದು.
ಚಾಮರಾಜನಗರ; ಕೊರೊನಾದಿಂದ 270 ಗ್ರಾಮಗಳು ಮುಕ್ತ
ರಿಜಿಸ್ಟರ್ ಪೋಸ್ಟ್ ಮೂಲಕ ದೃಢೀಕೃತ ಪ್ರಮಾಣಪತ್ರದೊಂದಿಗೆ ಸಲ್ಲಿಸಲೂ ಅವಕಾಶವಿದೆ. ಮುಂದೆ ನಿಗದಿಪಡಿಸಿದ ದಿನಾಂಕದಂದು ವಿಚಾರಣೆಗೆ ವ್ಯಕ್ತಿಗತವಾಗಿ ಹಾಜರಾಗಬೇಕು ಎಂದು ಹೇಳಿದ್ದಾರೆ. ದುರಂತದಲ್ಲಿ ಮೃತಪಟ್ಟ 36 ಮಂದಿಯಲ್ಲಿ ಬಹುತೇಕರು ಗ್ರಾಮೀಣ ಭಾಗದ ಜನರು. ಅವರು ವಿಚಾರಣೆಗಾಗಿ ಚಾಮರಾಜನರದಿಂದ ಮೈಸೂರಿಗೆ ಆಗಮಿಸಬೇಕು.
ಚಾಮರಾಜನಗರ: ಸೋಲಿಗರ ಈ ಮೂರು ಗ್ರಾಮಗಳು ಕೋವಿಡ್ ಮುಕ್ತ
ಈ ಕುರಿತು ಮಾತನಾಡಿದ ರೈತ ಮುಖಂಡ ಶಿವಲಿಂಗಯ್ಯ, "ಜಿಲ್ಲೆಯ ಹನೂರು ಭಾಗದಿಂದ ಚಾಮರಾಜನಗರಕ್ಕೆ ಬರುವುದಕ್ಕೇ 100 ಕಿ. ಮೀ. ಇದೆ. ಮೈಸೂರಿಗೆ ಮತ್ತೆ 60 ಕಿ. ಮೀ. ಪ್ರಯಾಣಿಸಬೇಕು. ಮೈಸೂರಿಗೆ ಹೋಗಬೇಕಲ್ಲ ಎಂದುಕೊಂಡು ಪ್ರಕರಣದ ಬಗ್ಗೆ ಮಾಹಿತಿ ಇರುವವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ದಾಖಲೆಗಳನ್ನು ಸಲ್ಲಿಸಲು ಹಾಗೂ ವಿಚಾರಣೆಗೆ ಹೋಗದೆ ಇರುವ ಸಾಧ್ಯತೆಯೂ ಇದೆ. ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದಿದ್ದರೆ ಚಾಮರಾಜನಗರದಲ್ಲೇ ಆಯೋಗದ ಕಚೇರಿ ಇರಬೇಕು" ಎಂದು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, "ಈ ದುರಂತಕ್ಕೆ ಸರ್ಕಾರವೇ ನೇರ ಕಾರಣ. ಅದು ತಪ್ಪಿತಸ್ಥ ಪರ ನಿಂತಿದೆ, ಪ್ರಭಾವಿಗಳಿಂದಲೂ ಅವರಿಗೆ ರಕ್ಷಣೆ ಸಿಗುತ್ತಿದೆ , ಸರ್ಕಾರವು ಕೂಡಲೇ ಸಂತ್ರಸ್ಥ ಕುಟುಂಬಗಳ ಅನುಕೂಲಕ್ಕಾಗಿ ಚಾಮರಾಜನಗರದಲ್ಲೇ ಕಚೇರಿ ತೆರೆಯುವಂತೆ ಆದೇಶಿಸಬೇಕು" ಎಂದು ಒತ್ತಾಯಿಸಿದರು.
"ಎಲ್ಲಾ ಸಂತ್ರಸ್ಥ ಕುಟುಂಬಗಳೂ ಕೂಡ ಚಾಮರಾಜನಗರದ ಗ್ರಾಮಾಂತರ ಪ್ರದೇಶದಲ್ಲಿದ್ದು ಇಂದು ಲಾಕ್ಡೌನ್ನಿಂದಾಗಿ ಊಟಕ್ಕೂ ಪರದಾಡುತ್ತಿವೆ. ಇನ್ನು ಹಳ್ಳಿಗಳಿಂದ ಬಸ್ಗೆ ಹಣ ಹೊಂದಿಸಿ ಮೈಸೂರಿಗೆ ಬಂದು ವಿಚಾರಣೆಗೆ ಹಾಜರಾಗಿ ಹೋಟೆಲ್ನಲ್ಲಿ ಊಟ ಮಾಡಿ ಮನೆಗೆ ಹಿಂತಿರುಗಲು ಅಪಾರ ಹಣ ಬೇಕು. ಕೂಲಿಯೇ ಇಲ್ಲದೆ ಬಸ್ ಚಾರ್ಜ್ಗೆ ಹಣ ಎಲ್ಲಿಂದ ತರೋದು?" ಎಂದು ಮೃತ ಆಟೋ ಚಾಲಕ ಪುಟ್ಟರಾಜು ಎಂಬುವವರ ತಾಯಿ ಪ್ರಶ್ನಿಸಿದ್ದಾರೆ.
Recommended Video
ಮೃತರೆಲ್ಲರೂ ಬಡ ರೈತರು ಮತ್ತು ಕೂಲಿ ಕಾರ್ಮಿಕ ಕುಟುಂಬಗಳು. ಬಹುತೇಕ ಕುಟುಂಬಗಳು ದುಡಿಯುವ ವ್ಯಕ್ತಿಗಳನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಇನ್ನು ಪರಿಹಾರ ಪಡೆಯಲು ಹಣ ಖರ್ಚು ಮಾಡಿಕೊಂಡು ಮೈಸೂರಿಗೆ ಬರಬೇಕಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ.