ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ತನಿಖಾಧಿಕಾರಿ ಶಿವಯೋಗಿ ಕಳಸದ್
ಚಾಮರಾಜನಗರ, ಮೇ 4: ಆಮ್ಲಜನಕ ಕೊರತೆಯಿಂದ 24 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ದುರಂತದ ತನಿಖಾಧಿಕಾರಿಯಾಗಿರುವ ಶಿವಯೋಗಿ ಕಳಸದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳವಾರ ಜಿಲ್ಲಾ ಸರ್ಜನ್ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರಿಂದ ಮಾಹಿತಿ ಪಡೆದುಕೊಂಡ ಕಳಸದ್, ಆಕ್ಸಿಜನ್ ಪ್ಲಾಂಟ್ ಹಾಗೂ ಸಿಲಿಂಡರ್ ದಾಸ್ತಾನಿನ ಕೊಠಡಿಗೆ ತೆರಳಿ ವೀಕ್ಷಿಸಿದರು. ಬಳಿಕ ಹೊರರೋಗಿಗಳ ಚೀಟಿ ಪಡೆಯುತ್ತಿದ್ದ ರೋಗಿಗಳು, ಕೋವಿಡ್ ಟೆಸ್ಟ್ ಮಾಡಿಸಲು ಬಂದವರ ಜತೆ ಅವರ ಊರು, ಯಾವ ಕಾರಣಕ್ಕಾಗಿ ಬಂದಿರುವುದು, ಜಿಲ್ಲಾಸ್ಪತ್ರೆ ಸೇವೆ ಹೀಗೆ ಹಲವು ಮಾಹಿತಿ ಪಡೆದರು.
ಇಬ್ಬರು ಜಿಲ್ಲಾಧಿಕಾರಿಗಳನ್ನು ಅಮಾನತು ಮಾಡಿ: ಸಾ.ರಾ ಮಹೇಶ್ ಆಗ್ರಹ
ಇವರ ಭೇಟಿಯ ವೇಳೆ ಕನ್ನಡಪರ ಹೋರಾಟಗಾರ ಶಾ.ಮುರುಳಿ ಏಕಾಂಗಿ ಪ್ರತಿಭಟನೆ ನಡೆಸಿ, ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರೇ ಕಾರಣ ಎಂದು ಆರೋಪಿಸಿ ಅವರ ಅಮಾನತ್ತಿಗೆ ಒತ್ತಾಯಿಸಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಹಾಗೂ ತನಿಖಾಧಿಕಾರಿ ಕಳಸದ್ ಅವರು ಪ್ರತಿಭಟನಾಕಾರನ ಮನವೊಲಿಕೆ ಮಾಡಲು ಪ್ರಯತ್ನಿಸಿದರೂ ನಿಲ್ಲಿಸದ ಅವರು, ಡೀನ್ ಕೊಠಡಿಯ ಮುಂಭಾದ ಮೆಟ್ಟಿಲಿನ ಬಳಿಯೇ ಮಲಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಡಿಸಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಳಸದ್ ಅವರು, ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಪರಿಶೀಲಿಸಿದ್ದೇನೆ. ವೈದ್ಯರು, ಡಿಸಿ ಜತೆ ಸಭೆ ನಡೆಸಿದ್ದು, ಸದ್ಯ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದರು.
Recommended Video
ಜಿಲ್ಲಾಸ್ಪತ್ರೆಯ ಪರಿಶೀಲನೆ ಮತ್ತು ಸಭೆ ಬಳಿಕ ಮಾತನಾಡಿದ ಅವರು, ತನಿಖೆ ಪ್ರಾಥಮಿಕ ಹಂತದಲ್ಲಿದೆ. ಎಲ್ಲರ ಬಳಿ ಮಾಹಿತಿ ಪಡೆದಿದ್ದು, ವರದಿಯಲ್ಲಿ ಎಲ್ಲವೂ ತಿಳಿಸುತ್ತೇನೆಂದರು. ಮೇಲ್ನೋಟಕ್ಕೆ ಯಾರ ಲೋಪ ಕಂಡು ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿ, ವರದಿ ಸಲ್ಲಿಸಲು ಮೂರು ದಿನಗಳ ಅವಕಾಶವಿದೆ. ಮೈಸೂರಿನ ಆಕ್ಸಿಜನ್ ಪ್ಲಾಂಟ್ಗೂ ಕೂಡ ಭೇಟಿ ನೀಡುತ್ತೇನೆ. ಸವಿವರವಾದ ವರದಿ ಸಲ್ಲಿಸುತ್ತೇನೆ ಎಂದರು.