ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್
ಚಾಮರಾಜನಗರ, ಫೆಬ್ರವರಿ 22: ಶಿಥಿಲಾವಸ್ಥೆಯಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಯಾವಾಗ ಬೇಕಾದರೂ ಕುಸಿದು ಧರೆಗೆ ಬೀಳುವ ಹಂತಕ್ಕೆ ತಲುಪಿದ್ದರೂ ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಗ್ರಾಮಕ್ಕೆ ಸಂಬಂಧಿಸಿದ ವಡ್ಡಗೆರೆ ಗ್ರಾಮಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇದರತ್ತ ಗಮನ ಹರಿಸದೆ ಮೌನಕ್ಕೆ ಶರಣಾಗಿದ್ದಾರೆ.
ಚಿರಕನಹಳ್ಳಿ ಗ್ರಾಮದಲ್ಲಿ ನೀರಿನ ಓವರ್ ಹೆಡ್ ಟ್ಯಾಂಕನ್ನು 1997-98ರಲ್ಲಿ ನಿರ್ಮಿಸಲಾಗಿದ್ದು, ಇದರ ಸಿಮೆಂಟ್ ಪ್ಲಾಸ್ಟರ್ ಸಂಪೂರ್ಣವಾಗಿ ಕಳಚಿ ಬೀಳುತ್ತಿದೆ. ಕಬ್ಬಿಣದ ಸರಳುಗಳು ಕಾಣಿಸುತ್ತಿವೆ. ಇಷ್ಟೆಲ್ಲ ಆದರೂ ಇಡೀ ಗ್ರಾಮಕ್ಕೆ ಇದೇ ಟ್ಯಾಂಕ್ ಮೂಲಕವೇ ನೀರನ್ನು ಪೂರೈಸಲಾಗುತ್ತಿದೆ.
ಒನ್ ಇಂಡಿಯಾ ವರದಿ ಇಂಪ್ಯಾಕ್ಟ್; ಹಿರಿಯೂರಿನಲ್ಲಿ ರಿಪೇರಿಯಾಯ್ತು ಕುಡಿಯುವ ನೀರಿನ ಘಟಕ
ಶಿಥಿಲಗೊಂಡ ಟ್ಯಾಂಕ್ ನ ಸಮೀಪದಲ್ಲೇ ಅಂಗನವಾಡಿ ಕೇಂದ್ರ ಮತ್ತು ಶಾಲೆಯಿದ್ದು, ನೂರಾರು ಮಕ್ಕಳು ಟ್ಯಾಂಕ್ನ ಪಕ್ಕದಲ್ಲಿ ಆಟವಾಡುತ್ತಿರುತ್ತಾರೆ. ಒಂದು ವೇಳೆ ಟ್ಯಾಂಕ್ ಕುಸಿದು ಬಿದ್ದರೆ ಭಾರಿ ಅನಾಹುತ ಸಂಭವಿಸಬಹುದು ಎಂಬ ಭಯ ಇಲ್ಲಿನವರದ್ದು.
ಚಿರಕನಹಳ್ಳಿ ಗ್ರಾಮದಲ್ಲಿ ಸರಿ ಸುಮಾರು ಮುನ್ನೂರು ಮನೆಗಳಿದ್ದು, ಈ ಎಲ್ಲ ಮನೆಗಳಿಗೂ ಇದೇ ಟ್ಯಾಂಕ್ ನಿಂದ ನೀರು ಸರಬರಾಜಾಗುತ್ತಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಅಲ್ಲಲ್ಲಿ ಚಿಕ್ಕ ತೊಂಬೆಗಳಿದ್ದರೂ ಅವು ಉಪಯೋಗಕ್ಕೆ ಬರುತ್ತಿಲ್ಲ. ತೊಂಬೆಯ ನಲ್ಲಿಗಳು ನಿಷ್ಕ್ರಿಯವಾಗಿದ್ದು, ಯಾವುದೇ ಪ್ರಯೋಜನವಾಗುತ್ತಿಲ್ಲ.ಇನ್ನು ಶಿಥಿಲಾವಸ್ಥೆಗೆ ತಲುಪಿರುವ ನೀರಿನ ಟ್ಯಾಂಕ್ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಒಂದು ವೇಳೆ ಟ್ಯಾಂಕ್ ಕುಸಿದು ಬಿದ್ದು ದುರಂತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಗ್ರಾಮಸ್ಥರದ್ದಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.