ಗೋಭಕ್ಷಕ ಹುಲಿ ಸೆರೆಗೆ ನಡೆಯಲಿದೆ ಬೃಹತ್ ಕಾರ್ಯಾಚರಣೆ?
ಚಾಮರಾಜನಗರ, ಮೇ 19: ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಮೂವತ್ತು ದಿನಗಳಲ್ಲಿ 19 ಜಾನುವಾರುಗಳು ಕೊಂದಿರುವ ಹುಲಿಯನ್ನು ಸೆರೆ ಹಿಡಿಯಲು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅನುಮತಿ ನೀಡಿದ್ದಾರೆ.
ಈಗಾಗಲೇ ಜಯಪ್ರಕಾಶ್, ಗಣೇಶ, ಪಾರ್ಥಸಾರಥಿ ಹಾಗೂ ರೋಹಿತ ಮೊದಲಾದ ನಾಲ್ಕು ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದರೂ ಹುಲಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ನಾಗರಹೊಳೆಯಿಂದ ಅಭಿಮನ್ಯು ಆನೆ ಹಾಗೂ ಇಬ್ಬರು ಪಶುವೈದ್ಯರ ನೆರವು ಪಡೆದುಕೊಂಡು ಹುಲಿಸೆರೆ ಹಿಡಿಯುವಂತೆ ಸೂಚಿಸಿದೆ.
ಬಂಡೀಪುರ ಕಾಡಂಚಿನಲ್ಲಿ ಹುಲಿ ಪತ್ತೆಗೆ ಮುಂದುವರೆದ ಕೂಂಬಿಂಗ್
ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಕಡಬೂರು ಗ್ರಾಮದಲ್ಲಿ ಒಂದೇ ಬಾರಿಗೆ ಆರು ಜಾನುವಾರುಗಳನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಚಿವ ಆನಂದ ಸಿಂಗ್ ಹುಲಿ ಸೆರೆ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಹೀಗಾಗಿ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಹಸಿರು ನಿಶಾನೆ ತೋರಿದ್ದಾರೆ.
ಈಗಾಗಲೇ ಕಡಬೂರು, ಬೊಮ್ಮನಹಳ್ಳಿ, ಚಿರಕನಹಳ್ಳಿ, ಕುಂದಕೆರೆ ಹಾಗೂ ಉಪಕಾರ ಗ್ರಾಮಗಳಲ್ಲಿ ಸುಮಾರು 30 ಜಾನುವಾರುಗಳನ್ನು ಕೊಂದಿರುವ ಹುಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಗದಂತೆ ಓಡಾಡುತ್ತಿದೆ. ಆದರೆ ಹುಲಿ ಓಡಾಡಿರುವುದು ಅರಣ್ಯ ಇಲಾಖೆ ಇರಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಒಂದೆಡೆ ಸಾಕಾನೆಗಳ ಮೂಲಕ ಹುಡುಕಾಟ ನಡೆಸುತ್ತಿದ್ದರೆ ಮತ್ತೊಂದೆಡೆ ಬೋನ್ ಇರಿಸಿ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ಆದರೆ ಯಾವುದಕ್ಕೂ ಚಾಣಾಕ್ಷ್ಯ ಹುಲಿ ಬಗ್ಗಿದಂತೆ ಕಾಣುತ್ತಿಲ್ಲ. ಆದಷ್ಟು ಬೇಗೆ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ ಹುಲಿ ಮಾತ್ರ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಲೇ ಇರುವುದು ತಲೆನೋವಾಗಿ ಪರಿಣಮಿಸಿದೆ.
ಸದ್ಯ ಅರಣ್ಯ ಇಲಾಖೆ ಚಿರಕನಹಳ್ಳಿ ಸಮೀಪ ಬೇಸ್ ಕ್ಯಾಂಪ್ ಸ್ಥಾಪಿಸಿ ಐವತ್ತು ಸಿಬ್ಬಂದಿ ಹಾಗೂ ನಾಲ್ಕು ಸಾಕಾನೆಗಳ ನೆರವಿನಿಂದ ಹುಲಿಗಳನ್ನು ಕಾಡಿಗಟ್ಟುವ ಪ್ರಯತ್ನ ಮಾಡುತ್ತಿದೆ. ಈ ನಡುವೆ ಹುಲಿಯ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಬಂಡೀಪುರ ಅರಣ್ಯಾ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಗುಂಡ್ಲುಪೇಟೆ ತಹಶೀಲ್ದಾರ್ ಗೆ ಪತ್ರ ಬರೆದು ಸೂಕ್ತ ಮಾರ್ಗದರ್ಶನ ಹಾಗೂ ಬಂದೋಬಸ್ತ್ ಏರ್ಪಡಿಸುವಂತೆ ಕೋರಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಇದುವರೆಗೆ ತಪ್ಪಿಸಿಕೊಂಡು ಓಡಾಡುತ್ತಿರುವ ಹುಲಿ ಶೀಘ್ರವೇ ಸೆರೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.