ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ 1 ವರ್ಷ, ಕಣ್ಣೀರು ನಿಂತಿಲ್ಲ
ಚಾಮರಾಜನಗರ, ಮೇ 02; ಜನರು ಕೊರೊನಾ ಭಯದಲ್ಲಿ ನರಳುತ್ತಿದ್ದಾಗಲೇ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಅಸರ್ಮಕ ನಿರ್ವಹಣೆಯಿಂದ ಕಳೆದ ವರ್ಷ ಇದೇ ದಿನ (ಮೇ 2, 2021) ಇಡೀ ರಾಜ್ಯ ನಡುಗುವಂತಹ ದುರಂತ ನಡೆದು ಹೋಗಿತ್ತು.
ಈ ದುರಂತದಲ್ಲಿ ಬರೋಬ್ಬರಿ 36 ಮಂದಿ ಉಸಿರು ಚೆಲ್ಲಿದ್ದರು. ಈ ಘಟನೆ ನಡೆದು ಒಂದು ವರ್ಷ ಕಳೆದು ಹೋಗಿದೆ. ಜನ ಕೊರೊನಾ ಸಂಕಷ್ಟದಿಂದ ನಿಧಾನವಾಗಿ ಹೊರಬಂದಿದ್ದಾರೆ. ಆದರೆ ಆ ಜೀವಗಳನ್ನು ಕಳೆದುಕೊಂಡ ಮನೆಗಳಲ್ಲಿ ನೋವು ಮಡುಗಟ್ಟಿದೆ.
ಕರ್ನಾಟಕ; 9 ಜಿಲ್ಲೆಗೆ ಬೇಕು ಆಕ್ಸಿಜನ್ ಮರುಪೂರಣ ಘಟಕ
ಇವತ್ತಿಗೂ ಆ ದುರಂತವನ್ನು ನೆನಪಿಸಿಕೊಂಡಾಗಲೆಲ್ಲ ಉಸಿರು ಚೆಲ್ಲಿ ನಿಸ್ತೇಜವಾಗಿ ಮಲಗಿದ ದೇಹಗಳು, ಅದರಾಚೆಗೆ ಹೆತ್ತವರ ಮುಗಿಲು ಮುಟ್ಟಿದ ಆಕ್ರಂದನದ ಚಿತ್ರಗಳೆಲ್ಲವೂ ಕಣ್ಣಮುಂದೆ ಹಾಗೆಯೇ ತೇಲಿ ಹೋಗುತ್ತದೆ. ಬಹುಶಃ ಇಂತಹದೊಂದು ಕಷ್ಟ ಯಾರಿಗೂ ಬರಬಾರದು.
ಚಾಮರಾಜನಗರ; ಕೋವಿಡ್ಗೆ ಸ್ನೇಹಿತ ಬಲಿ, ವಿಧವೆ ಬಾಳಿಗೆ ಆಸರೆಯಾದ ಯುವಕ!
ಅಷ್ಟಕ್ಕೂ ಅವತ್ತು ಆಗಿದ್ದೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಎರಡು ಅಧಿಕಾರಿಗಳ ನಡುವಿನ ಪ್ರತಿಷ್ಠೆಗೆ ಇಂತಹದೊಂದು ಘಟನೆ ನಡೆದು ಹೋಯಿತಾ? ಎಂಬ ಪ್ರಶ್ನೆಗಳು ಕಾಡುತ್ತವೆ. ಆವತ್ತು ಅಂದರೆ ಮೇ 2, 2021ರಂದು ಅದಾಗಲೇ ಇಡೀ ಜಿಲ್ಲೆಯಲ್ಲಿ ಕೊರೊನಾ ಸೋಂಕು ರಾಕೆಟ್ನಂತೆ ಏರುತ್ತಿತ್ತು. ಚಾಮರಾಜನಗರದ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಉಸಿರಾಟದಿಂದ ಬಳಲುತ್ತಿದ್ದ ರೋಗಿಗಳಿಗೆ ಆಕ್ಸಿಜನ್ ಅಗತ್ಯವಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಡಿತ್ತು.
ವಿಶೇಷ ವರದಿ: ಚಾಮರಾಜನಗರ ಜಿಲ್ಲೆಯ ಭೂರಮೆಯ ನೋಟ, ಕಣ್ಣಿಗೆ ರಸದೂಟ!
ಆಕ್ಸಿಜನ್ ಸರಬರಾಜು ಆಗಲೇ ಇಲ್ಲ
ಮೈಸೂರಿನಿಂದ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆಯಾಬೇಕಿತ್ತು. ಆದರೆ ದುರಾದೃಷ್ಟಕ್ಕೆ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗಲಿಲ್ಲ. ಇದರಿಂದಾಗಿ ಐಸಿಯುನಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ರಾತ್ರಿ 10.30ರಿಂದ ಬೆಳಗಿನ ಜಾವ 2.30 ನಡುವೆಯ ಆ ಅವಧಿಯಲ್ಲಿ ಸಮರ್ಪಕವಾಗಿ ಆಕ್ಸಿಜನ್ ಸರಬರಾಜಾಗಲಿಲ್ಲ. ಪರಿಣಾಮ ಆಕ್ಸಿಜನ್ ನೆರವಿನಿಂದ ಉಸಿರಾಡುತ್ತಿದ್ದ ಹಲವು ರೋಗಿಗಳು ಉಸಿರು ಚೆಲ್ಲಿದರು.
ಆ ನಂತರ ಈ ದುರಂತಕ್ಕೆ ಯಾರು ಕಾರಣರು? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಸರು ಎರಚಾಟ ನಡೆಯಿತು. ಮೈಸೂರು, ಚಾಮರಾಜನಗರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡಿದರು. ಈ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ. ಎನ್. ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ತನಿಖೆಗೆ ಮುಂದಾಗಿತ್ತು.
ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತು. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿಯ ವಿಚಾರಣೆ ವೇಳೆ ಚಾಮರಾಜನಗರ ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಆಮ್ಲಜನಕರ ಕೊರತೆ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ, ಆಸ್ಪತ್ರೆಯ ನೋಡಲ್ ಅಧಿಕಾರಿಯಾಗಲಿ ಮೈಸೂರಿನಿಂದ ಸರಬರಾಜು ಆಗುವ ಸಮಸ್ಯೆ ಬಗ್ಗೆ ಮಾತನಾಡಿರಲಿಲ್ಲ. ಆಸ್ಪತ್ರೆಯ ಆಡಳಿತ ಮಂಡಳಿ ಜಾಗರೂಕವಾಗಿದಿದ್ದರೇ ಸಮಯೋಚಿತವಾಗಿ ಆಮ್ಲಜನಕ ಸಿಲಿಂಡರ್ ಪೂರೈಸಿದ್ದರೇ ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರಲಿಲ್ಲ ಅಂಶ ಬೆಳಕಿಗೆ ಬಂದಿತು.
ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್
ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣವಾಗಿದೆ. ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ. ಚಾಮರಾಜನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಸಮಿತಿ ಹೇಳಿತು.
ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಆರೋಪ ಸಾಬೀತುಪಡಿಸುವುದು ಅಸಾಧ್ಯ. ಚಾಮರಾಜನಗರ ಜಿಲ್ಲೆ ಸೇರಿ ಯಾವುದೇ ಜಿಲ್ಲೆಗೆ ಆಮ್ಲಜನಕ ಪೂರೈಸಲು ರೋಹಿಣಿ ಸಿಂಧೂರಿ ತಡೆದಿದ್ದಾರೆ ಎಂದು ಹೇಳಲು ಆಗುವುದಿಲ್ಲ ಎಂದು ಸಮಿತಿ ವರದಿ ನೀಡಿತು.
ಸಮಿತಿ ಮಾಡಿದ ಶಿಫಾರಸುಗಳು
ಅಂದು ಮೈಸೂರು ಜಿಲ್ಲಾ ಆಸ್ಪತ್ರೆಯಿಂದ ಮಧ್ಯರಾತ್ರಿಯ ವೇಳೆಗೆ 40 ಜಂಬೋ ಸಿಲಿಂಡರ್ಗಳು ಲಭ್ಯವಾಗಿದ್ದವು ಮತ್ತು ಅವುಗಳನ್ನು ತಕ್ಷಣವೇ ಸಾಗಿಸಿದ್ದರೆ, ಅವರು ಬೆಳಿಗ್ಗೆ 2 ಗಂಟೆಯ ಹೊತ್ತಿಗೆ ಚಾಮರಾಜನಗರಕ್ಕೆ ತಲುಪುತ್ತಿತ್ತು. ಆದರೆ ಬೆಳಿಗ್ಗೆ 6 ಗಂಟೆಗೆ ಸಿಲಿಂಡರ್ಗಳು ಚಾಮರಾಜನಗರಕ್ಕೆ ತಲುಪಿದೆ ಎಂಬುದಾಗಿ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಒಂದಷ್ಟು ಶಿಫಾರಸ್ಸುಗಳನ್ನು ಕೂಡ ಸಮಿತಿ ಮಾಡಿತ್ತು. ಜಿಲ್ಲಾ ಆಸ್ಪತ್ರೆಗಳಿಗೆ ಹಂಚಿಕೆ ಮತ್ತು ಆಮ್ಲಜನಕದ ವಿತರಣೆಯನ್ನು ಸಂಘಟಿಸಲು ಡಿಸಿ ಶ್ರೇಣಿಗಿಂತ ಹೆಚ್ಚಿನ ಅಧಿಕಾರಿಯನ್ನು ನೇಮಿಸಬೇಕು, ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕನಿಷ್ಠ ಬಫರ್ ಸ್ಟಾಕ್ 24 ಗಂಟೆಗಳ ಕಾಲ ಉಳಿಯುವಂತೆ ನೋಡಿಕೊಳ್ಳಬೇಕು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆ ಮಾಡಬೇಕು, ನೈಜ ಸಮಯದಲ್ಲಿ ಆಮ್ಲಜನಕದ ಸಮತೋಲನವನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ರೀತಿಯಲ್ಲಿ ಪ್ರದರ್ಶಿಸಬೇಕು, ಆಮ್ಲಜನಕ ಸಿಲಿಂಡರ್ಗಳನ್ನು ಸಾಗಿಸುವಾಗ ಜಿಪಿಎಸ್ ಅಳವಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
ಪರಿಹಾರ ವಿತರಣೆಯೂ ಸರಿಯಾಗಿಲ್ಲ
ಇದಾದ ನಂತರ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತಂತೆ ಹೋರಾಟಗಳು ಆರಂಭವಾದವು. ಘಟನೆ ಬಳಿಕ 36 ಕುಟುಂಬಗಳಿಗೆ ಮೊದಲಿಗೆ ತಲಾ ಎರಡು ಲಕ್ಷದಂತೆ ವಿತರಿಸಲಾಯಿತು. ಆ ನಂತರ ತಲಾ 13 ಮಂದಿಯ ಕುಟುಂಬಗಳಿಗೆ ಹೆಚ್ಚುವರಿಯಾಗಿ ಮೂರು ಲಕ್ಷವನ್ನು ವಿತರಿಸಲಾಗಿದೆ. ಒಟ್ಟಾರೆ ಘಟನೆಯಲ್ಲಿ ಸೋಂಕಿತರು ಮತ್ತು ಸೋಂಕಿತರಲ್ಲದವರು ಸೇರಿದಂತೆ ಒಟ್ಟು ಮೂವತ್ತಾರು ಮಂದಿ ಸಾವನ್ನಪ್ಪಿದ್ದು, ಈ ಕುಟುಂಬಗಳಿಗೆ ಕಾಂಗ್ರೆಸ್ ತಲಾ ಒಂದು ಲಕ್ಷದಂತೆ ಪರಿಹಾರ ನೀಡಿದೆ.
ಒಟ್ಟಾರೆ ಆಕ್ಸಿಜನ್ ದುರಂತ ನಡೆದು ಸರಿಯಾಗಿ ಒಂದು ವರ್ಷವಾಗಿದೆ. ದುರಂತದ ಬಗ್ಗೆ ಹಿಂತಿರುಗಿ ನೋಡಿದರೆ ದುರಂತದಿಂದ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅದಕ್ಕಿಂತ ಹೆಚ್ಚಾಗಿ ದುರಂತಕ್ಕೆ ಕಾರಣರಾದವರಿಗೆ ಯಾವುದೇ ಕಾನೂನಾತ್ಮಕ ಶಿಕ್ಷೆಯೂ ಆಗಿಲ್ಲ. ಈ ಘಟನೆಯ ಸಂಬಂಧ ಮೃತರ ಕುಟುಂಬದ ಪರವಾಗಿ ಎಸ್ ಡಿಪಿಐ ಹೋರಾಟ ನಡೆಸಿತ್ತಲ್ಲದೆ, ರಾಜ್ಯಪಾಲರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತ್ತು. ಆದರೆ ಮೃತರ ಕುಟುಂಬಗಳು ಇಟ್ಟಿರುವ ಬೇಡಿಕೆ ಮಾತ್ರ ಇದುವರೆಗೆ ಈಡೇರಿಲ್ಲ. ಹೀಗಾಗಿ ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡು ಕುಟುಂಬಗಳು ಪರಿತಪಿಸುತ್ತಿವೆ. ನೋವಿನಲ್ಲಿ ದಿನಗಳನ್ನು ಕಳೆಯುತ್ತಿವೆ.