ಚಾಮರಾಜನಗರ; ರಥದ ಚಕ್ರಕ್ಕೆ ಸಿಲುಕಿ ಒಬ್ಬ ಸಾವು, ಇಬ್ಬರಿಗೆ ಗಾಯ
ಚಾಮರಾಜನಗರ, ಮೇ 15: ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಪಾರ್ವತಿ ಬೆಟ್ಟದಲ್ಲಿ ನಡೆದ ಜಾತ್ರಾಮಹೋತ್ಸವದ ವೇಳೆ ತೇರು ಎಳೆಯುವಾಗ ನೂಕು ನುಗ್ಗಲು ಉಂಟಾಗಿದೆ. ರಥದ ಚಕ್ರಕ್ಕೆ ಸಿಲುಕಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಾರ್ವತಾಂಭ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕಂದೇಗಾಲ ಗ್ರಾಮದ ಸರ್ಪಭೂಷಣ (27) ಎಂಬುವವರು ಸಾವನ್ನಪ್ಪಿದ್ದಾರೆ. 35 ವರ್ಷದ ಕಬ್ಬಳ್ಳಿ ಸ್ವಾಮಿ ಮತ್ತು ಕೊಡಸೋಗೆ ಗ್ರಾಮದ ಕರಿನಾಯ್ಕ (50) ಎಂಬುವರಿಗೆ ಗಂಭೀರ ಗಾಯವಾಗಿದೆ.
ರಥೋತ್ಸವ ಆರಂಭವಾಗಿ ಕೇವಲ 100 ಮೀಟರ್ ದೂರ ಹೋಗುವುದರೊಳಗೆ ಈ ಅಹಿತಕರ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಗೆ ಕಾರಣ?; ಜಾತ್ರಾ ಮಹೋತ್ಸಹವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದು, ಅಧಿಕ ಮಂದಿ ಒಮ್ಮೆಲೆ ರಥವನ್ನು ಎಳೆದಿದ್ದರಿಂದ ವೇಗವಾಗಿ ಚಲಿಸಿದೆ. ಈ ವೇಳೆ ನೂಕು ನುಗ್ಗಲು ಉಂಟಾಗಿ ತೇರಿನ ಕೆಳಗೆ ಮೂವರು ಸಿಲುಕಿಕೊಂಡಿದ್ದರು.
ರಥ ಸರ್ಪಭೂಷಣ್ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು. ಮತ್ತಿಬ್ಬರ ಕಾಲಿನ ಮೇಲೆ ಚಕ್ರ ಹರಿಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸರ್ಪಭೂಷಣ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಂಭೀರ ಗಾಯಗೊಂಡಿರುವವರಿಗೆ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಗಿದೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಥೋತ್ಸವವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಮತ್ತೆ ರಥೋತ್ಸವಕ್ಕೆ ಅವಕಾಶ ಸಿಕ್ಕಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹಾಗಾಗಿ ನೂಕು ನುಗ್ಗಲು ಉಂಟಾಗಿ ಈ ದುರಂತ ನಡೆದಿದೆ.
ಇದೇ ಮಾದರಿ ಘಟನೆ; ಏಪ್ರಿಲ್ 24ರಂದು ಕಲಬುರಗಿಯಲ್ಲೂ ಇದೇ ಮಾದರಿ ಘಟನೆ ನಡೆದಿತ್ತು. ಜಿಲ್ಲೆಯ ಶಹಬಾದ್ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ 25 ವರ್ಷದ ಲಕ್ಷ್ಮಿಕಾಂತ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಭೀಮಾಶಂಕರ್ ಹೊಸಮನಿ ಪೂಜಾರಿ (29), ಯಂಕಪ್ಪ ನಾಗಪ್ಪ ನೀಡಹಳ್ಳಿ (25) ಎಂಬುವವರು ಗಂಭೀರ ಗಾಯಗೊಂಡಿದ್ದರು.
ಕೋವಿಡ್19 ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹಲವು ಗ್ರಾಮಗಳಲ್ಲಿ ಜಾತ್ರಾ ಮಹೋತ್ಸವಗಳು ನಡೆದಿಲ್ಲ. ಈ ಬಾರಿ ಜಾತ್ರೆಗಳನ್ನು ನಡೆಸಲು ಅನುಮತಿ ನೀಡಿರುವುದರಿಂದ ಎಲ್ಲಾ ಕಡೆ ವಿಜೃಂಭಣೆಯಿಂದ ಜಾತ್ರೆಗಳನ್ನು ಆಯೋಜಿಸಲಾಗುತ್ತಿದೆ ಮತ್ತು ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.
ಜನಸ್ತೋಮ ಹೆಚ್ಚಾಗುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಹಾಗಾಗಿ ಜಾತ್ರೆಯನ್ನು ಆಯೋಜನೆ ಮಾಡುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
Recommended Video