ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರವಾಸಿಗರ ಜತೆ ಡಕೋಟ ಬಸ್‍ಗಳ ಚೆಲ್ಲಾಟ

By ಬಿಎಂ ಲವಕುಮಾರ್
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 20: ಮಲೆ ಮಹದೇಶ್ವರ ಎಂದರೆ ಎಲ್ಲರ ಮನದಲ್ಲೂ ಭಕ್ತಿಭಾವ ಮೂಡಿಬಿಡುತ್ತದೆ. ಜೀವಿತಾವಧಿಯಲ್ಲಿ ಆತನ ಸನ್ನಿಧಿಗೊಮ್ಮೆ ಹೋಗಿ ಬರಬೇಕೆಂಬ ಬಯಸುತ್ತಾರೆ.

ಆದರೆ ಹೀಗೆ ದೂರದ ಊರಿನಿಂದ ಬರುವ ಭಕ್ತರು ಇಲ್ಲಿಗೆ ತೆರಳಲು ಪ್ರಾಧಿಕಾರದ ಅಧೀನದಲ್ಲಿರುವ ಬಸ್‍ ಹತ್ತಿದರೆ ಜೀವಂತವಾಗಿ ತಮ್ಮ ಊರು ತಲುಪಿದರೆ ಸಾಕಪ್ಪಾ ಎಂದು ಹಲಬುವ ಸ್ಥಿತಿಗೆ ಬಂದು ಬಿಡುತ್ತಾರೆ.

Old buses playing with life of tourists in Male Mahadeshwara Hills

ಇವತ್ತು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಬೇಕಾದರೆ ಖಾಸಗಿ ಬಸ್‍ಗಳಲ್ಲಿ ತೆರಳುವುದು ಅನಿವಾರ್ಯವಾಗಿದೆ. ಆದರೆ ಈ ಖಾಸಗಿ ಬಸ್‍ಗಳಿಗೆ ಹತ್ತುವಾಗಲೇ ಜೀವ ಬಾಯಿಗೆ ಬಂದಂತಾಗುತ್ತದೆ. ಇನ್ನೂ ಪ್ರಯಾಣ ಮಾಡಿದರಂತು ಮಾದಪ್ಪನ ಸ್ಮರಣೆ ಮಾಡಿಕೊಂಡೇ ಕೂರಬೇಕಾಗುತ್ತದೆ.

ಹಾಗೆ ನೋಡಿದರೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವ ಮಲೆ ಮಹದೇಶ್ವರ ಪ್ರಾಧಿಕಾರಕ್ಕೆ ಖಾಯಂ ಕಾರ್ಯದರ್ಶಿ ಇಲ್ಲದ ಕಾರಣ ಆಡಳಿತ ವ್ಯವಸ್ಥೆ ಬಹುತೇಕ ಕುಸಿದಿದ್ದು ಭಕ್ತರಿಗೆ ಸೌಲಭ್ಯ ಕಲ್ಪಿಸುವುದರಿಂದ ಹಿಡಿದು ಅನೇಕ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಹೀಗಿರುವಾಗ ಇನ್ನು ಬಸ್ ವ್ಯವಸ್ಥೆಯನ್ನು ಹೇಗೆ ತಾನೆ ಸರಿ ಮಾಡಿಯಾರು ಎಂಬುದು ಹಲವರ ಆಕ್ರೋಶದ ಪ್ರಶ್ನೆಗಳಾಗಿದೆ.

ಇಲ್ಲಿ ಸಂಚರಿಸುವ ಖಾಸಗಿ ಬಸ್‍ಗಳೆಲ್ಲವೂ ಡಕೋಟ ಬಸ್‍ಗಳಾಗಿವೆ. ಕಿತ್ತು ಹೋದ ಕವಚಗಳು, ಮುರಿದು ಹೋದ ಸೀಟುಗಳು, ಸವೆದ ಟಯರ್‍ಗಳನ್ನು ಹೊಂದಿರುವ ಬಸ್‍ಗಳನ್ನು ನೋಡಿದರೆ ಭಯವಾಗುತ್ತವೆ. ಇವು ದಾರಿ ಮಧ್ಯೆ ಯಾವಾಗ ಎಲ್ಲಿ ಕೆಟ್ಟು ನಿಲ್ಲುತ್ತವೆಯೋ ಎಂಬ ಭಯ ಪ್ರಯಾಣಿಕರನ್ನು ಕಾಡುತ್ತದೆ.

ಬಸ್ಸುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಇಲ್ಲಿ ಸಂಚರಿಸುವ ಹನ್ನೆರಡು ಬಸ್‍ಗಳ ಪೈಕಿ ಒಂದು ಬಸ್ಸು ನಾಲ್ಕು ತಿಂಗಳಿನಿಂದ ಪೆಟ್ರೋಲ್ ಬಂಕ್ ಮುಂದೆ ನಿಂತಿದ್ದು ರಾತ್ರಿಯಾಗುತ್ತಿದ್ದಂತೆ ಜೂಜುಕೋರರಿಗೆ, ಕುಡುಕರಿಗೆ, ಕುಳಿತು ಹರಟೆ ಹೊಡೆಯುವವರಿಗೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಆಶ್ರಯತಾಣವಾಗಿ ಪರಿಣಮಿಸಿದೆ.

ಸುತ್ತೂರಿನಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಎರಡು ತಿಂಗಳಿನಿಂದ ಕೊಳ್ಳೇಗಾಲದ ಚಿನ್ನಣ್ಣ ವರ್ಕ್‍ಶಾಪ್‍ನಲ್ಲಿ ತುಕ್ಕು ಹಿಡಿಯುತ್ತಿದೆ. ಮತ್ತೆರಡು ಬಸ್ಸುಗಳನ್ನು ಚಾಲನೆ ಮಾಡಲು ಅಸಾಧ್ಯ ಎಂದು ಹೇಳುತ್ತಿದ್ದರೂ ಒತ್ತಡ ತಂದು ಚಲಾಯಿಸಲಾಗುತ್ತಿದೆ.

ಉಳಿದ ಎಂಟು ಬಸ್ಸುಗಳೇನು ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಹೇಗೋ ಸಂಚರಿಸುತ್ತಿವೆ ಎಂದು ಖುಷಿ ಪಡಬೇಕಷ್ಟೆ. ಅದರೆ ಸಂಚರಿಸದೆ ನಿಂತಿರುವ ಬಸ್ಸುಗಳಿಗೂ ತಿಂಗಳಿಗೆ 16 ಸಾವಿರ ರೂ ರಸ್ತೆ ತೆರಿಗೆ ಪಾವತಿಸುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ. ಇಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯ ಮಂತ್ರಿಗಳು ಹೊಸದಾಗಿ ಎಂಟು ಬಸ್ಸುಗಳ ಖರೀದಿಗೆ ಅನುಮತಿ ನೀಡಿದ್ದು, ಅವುಗಳ ಕವಚ ನಿರ್ಮಾಣ ಕಾರ್ಯವೂ ಮುಗಿದು ಹಲವು ತಿಂಗಳುಗಳಾಗಿದ್ದು ಕೇವಲ ವೆಚ್ಚದ ಚೆಕ್ ನೀಡಿ ವಶಕ್ಕೆ ಪಡೆಯುವುದಷ್ಟೆ ಬಾಕಿ ಉಳಿದಿದೆ. ಆದರೆ ಮೀನ-ಮೇಷ ಎಣಿಸುತ್ತಿರುವುದೇಕೆ ಎಂಬುವುದು ಮಾತ್ರ ತಿಳಿದುಬಂದಿಲ್ಲ.

ಇನ್ನಾದರೂ ಪ್ರಾಧಿಕಾರ ದೇವರ ಸನ್ನಿಧಿಗೆ ಬರುವ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಡಕೋಟ ಬಸ್‍ಗಳಿಗೆ ಮುಕ್ತಿ ನೀಡಿ ಸುಸಜ್ಜಿತ ಬಸ್‍ಗಳ ಓಡಾಟಕ್ಕೆ ಅನುವು ಮಾಡಿಕೊಡಬೇಕಾಗಿದೆ. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವೆ ಗೀತಾಪ್ರಸಾದ್ ಅವರು ಇತ್ತ ಗಮನಹರಿಸಿ ಕ್ರಮಕೈಗೊಳ್ಳಬೇಕಿದೆ.

English summary
Private buses that travel to the Male Mahadeshwara Hills are too old. These are not safe for tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X