ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರಿಗೆ ಹೇಳೋರಿಲ್ಲ, ಕೇಳೋರಿಲ್ಲ!
ಇತ್ತೀಚೆಗೆ ಸೆಲ್ಫಿ ಹುಚ್ಚಿಗೆ ಬಿದ್ದಿರುವ ಪ್ರವಾಸಿಗರು ಬಂಡೀಪುರ ಅರಣ್ಯದ ರಸ್ತೆಯ ಮಧ್ಯೆ ವಾಹನವನ್ನು ನಿಲ್ಲಿಸಿಕೊಂಡು ಫೋಟೋ ತೆಗೆದುಕೊಳ್ಳುತ್ತಾರೆ. ಮಾರ್ಗಮಧ್ಯೆ ವಾಹನ ನಿಲ್ಲಿಸುವಂತಿಲ್ಲ ಎಂಬ ನಿಯಮವಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ.
ಚಾಮರಾಜನಗರ, ಮೇ 17: ಬಂಡೀಪುರ ಅರಣ್ಯದ ಮೂಲಕ ಊಟಿ ಹಾಗೂ ಕೇರಳಕ್ಕೆ ವಾಹನದಲ್ಲಿ ಸಂಚರಿಸುವವರು ಮಧ್ಯೆ ವಾಹನ ನಿಲ್ಲಿಸಬಾರದು ಎಂಬ ನಿಯಮವಿದೆ. ಈ ರಸ್ತೆಯಲ್ಲಿ ವನ್ಯಜೀವಿಗಳು ಸಂಚರಿಸುತ್ತಿರುವುದರಿಂದ ಅವುಗಳಿಗೆ ತೊಂದರೆಯಾಗಬಾರದೆಂದು ಈ ನಿಯಮ ಜಾರಿಗೆ ತರಲಾಗಿದೆ.
ಮೊದಲಿನಿಂದಲೂ ಬಂಡೀಪುರದಲ್ಲಿ ಎಚ್ಚರಿಕೆಯನ್ನು ವಹಿಸಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚೆಗೆ ಸೆಲ್ಫಿ ಹುಚ್ಚಿಗೆ ಬಿದ್ದಿರುವ ಪ್ರವಾಸಿಗರು ಅರಣ್ಯದ ಮಧ್ಯೆ ವಾಹನವನ್ನು ನಿಲ್ಲಿಸಿಕೊಂಡು ಫೋಟೋ ತೆಗೆದುಕೊಳ್ಳುತ್ತಾರೆ. ಎಷ್ಟೇ ಎಚ್ಚರಿಕೆ ನೀಡಿದರೂ, ವಿದ್ಯಾವಂತರೇ ಈ ರೀತಿ ಮಾಡುತ್ತಿರುವುದು ವಿಷಾದವೇ ಸರಿ.[ಬಂಡೀಪುರದಲ್ಲಿ ಆನೆ ಗಣತಿಗೆ ಸ್ವಯಂಸೇವಕರ ಸಾಥ್]
ಈ ಅರಣ್ಯ ಮಾರ್ಗದಲ್ಲಿ ವಾಹನ ನಿಲ್ಲಿಸಿದವರ ಮೇಲೆ ಪ್ರಾಣಿಗಳು ದಾಳಿ ಮಾಡಿದ ನಿದರ್ಶನಗಳಿವೆ. ಹೀಗಾಗಿ ಅರಣ್ಯ ಇಲಾಖೆ ಅರಣ್ಯದೊಳಗೆ ಮಾರ್ಗ ಮಧ್ಯೆ ವಾಹನ ನಿಲ್ಲಿಸದಂತೆ ನಿರ್ದೇಶನ ನೀಡಿದೆ.
ಅರಣ್ಯ ವಲಯದಲ್ಲಿ ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು ಎಂಬ ಅರಿವಿಲ್ಲದೆ ಕೆಲವರು ಅನಾಗರಿಕರಂತೆ ವರ್ತಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಇನ್ನು ಕೆಲವರು ಅರಣ್ಯದೊಳಗೆ ವಾಹನಗಳನ್ನು ನಿಲ್ಲಿಸಿ ಮದ್ಯ ಸೇವಿಸಿ ಖಾಲಿ ಬಾಟಲಿಯನ್ನು ಎಸೆದು ಹೋಗುತ್ತಾರೆ. ಹೀಗಾಗಿ ದಾರಿಯುದ್ದಕ್ಕೂ ಅಲ್ಲಲ್ಲಿ ಮದ್ಯದ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಕವರ್ಗಳು ಕಂಡು ಬರುತ್ತಿವೆ.[ಬತ್ತಿದ ಬಂಡೀಪುರದ ಮೂಲೆಹೊಳೆ: ಜನ-ಜಾನುವಾರು ಪರದಾಟ]
ಅರಣ್ಯದೊಳಗೆ ಪ್ರವೇಶಿಸುವ ಮುನ್ನ ಮೇಲುಕಾಮನಹಳ್ಳಿ, ಕೆಕ್ಕನಹಳ್ಳ, ಮದ್ದೂರು, ಮತ್ತು ಮೂಲೆಹೊಳೆ ಚೆಕ್ ಪೋಸ್ಟ್ ಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಪಾಸಣೆಗಾಗಿ ನೇಮಕಗೊಂಡಿರುತ್ತಾರೆ. ಆದರೆ ಇಲ್ಲಿನ ಸಿಬ್ಬಂದಿ ಪ್ರವಾಸಿಗರು ಪಾಲಿಸಬೇಕಾದ ನಿಯಮಗಳನ್ನು ತಿಳಿಸದ ಕಾರಣ ಪ್ರವಾಸಿಗರು ಅರಣ್ಯದ ಒಳಗೆ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಹಾಗಾಗಿ ಅರಣ್ಯ ಪ್ರವೇಶಕ್ಕೂ ಮುನ್ನಾ ನಿಯಮ ಫಲಕಗಳನ್ನು ಅಳವಡಿಸಬೇಕು ಮತ್ತು ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಆದೇಶ ಪಾಲಿಸಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಸಲಹೆ.