ಆರ್ ಎಫ್ ಒ ಮೇಲೆ ದಾಳಿ ನಡೆಸಿದ ಹುಲಿಯ ಸುಳಿವೇ ಇಲ್ಲ
ಚಾಮರಾಜನಗರ, ಜುಲೈ 11: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಳ್ಳೀಪುರ ಗ್ರಾಮದ ಜಮೀನಿನಲ್ಲಿ ಆರ್ ಎಫ್ ಓ ಮೇಲೆ ದಾಳಿ ನಡೆಸಿದ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆಯು ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದು, ಹುಲಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.
ಜು.1ರಂದು ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದ್ದ ಹಿನ್ನೆಲೆಯಲ್ಲಿ ಜು.3ರಿಂದ ಬಂಡೀಪುರದ ರಾಂಪುರ ಸಾಕಾನೆ ಶಿಬಿರದ ಮೂರು ಆನೆಗಳು, ಡ್ರೋಣ್ ಕ್ಯಾಮೆರಾಗಳ ನೆರವಿನಿಂದ 25 ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ. ಅಲ್ಲದೆ ಹುಲಿ ಸಂಚರಿಸುತ್ತಿದ್ದ ಹೆಜ್ಜೆ ಗುರುತುಗಳ ಆಧಾರದ ಮೇಲೆ ಬೋನು ಅಳವಡಿಸಿ ಹಂದಿಯ ಮಾಂಸ ಇರಿಸಿದ್ದರೂ ಅಲ್ಲಿಗೆ ಹುಲಿ ಬಂದಿಲ್ಲ.
ಆರ್.ಎಫ್.ಒ ಮೇಲೆ ದಾಳಿ ಮಾಡಿದ ಹುಲಿಗಾಗಿ ಹುಡುಕಾಟ
ಜು.7ರಂದು ಕಲಿಗೌಡನಹಳ್ಳಿಯ ಸುರೇಶ್ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿತ್ತು. ಒಂದು ತಿಂಗಳಿನಲ್ಲಿ ಹುಲಿ ನಾಲ್ಕು ಜಾನುವಾರುಗಳನ್ನು ಕೊಂದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆ ಅಲ್ಲಿಯೂ ಬೋನು ಅಳವಡಿಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಜತೆಗೆ ಹುಂಡೀಪುರ ಸಮೀಪ ಮೂರು ಬೋನುಗಳನ್ನು ಅಳವಡಿಸಲಾಗಿದೆ.
ನಾಲ್ಕು ತಿಂಗಳಿನಿಂದ ಹುಂಡೀಪುರ ಸಮೀಪ ಸುಳಿದಾಡುತ್ತಿರುವ ಹುಲಿ ಇತ್ತೀಚೆಗೆ ಮರಿ ಹಾಕಿದ್ದು, ತನ್ನ ಎರಡು ಮರಿಗಳ ಜತೆ ಸಂಚರಿಸುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೋನು ಅಳವಡಿಸಿದ್ದರೂ ಹುಲಿ ಬೀಳುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು, ಜು.8ರ ರಾತ್ರಿ ಗ್ರಾಮದ ರವಿ ಎಂಬುವರ ಜಮೀನಿನ ಬಳಿ ಭಾರಿ ಗಾತ್ರದ ಗಂಡು ಹುಲಿ ಸಂಚರಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಕೇರಳದ ಮುತುಂಗಾದಲ್ಲಿ ಬೆನ್ನಟ್ಟಿ ಬಂದ ಹುಲಿಯ ವಿಡಿಯೋ ವೈರಲ್
ಇಲ್ಲಿಯೂ ಕೂಂಬಿಂಗ್ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, 6 ಕ್ಯಾಮರಾಗಳನ್ನು ಅಳವಡಿಸಿದೆ. ಈ ಪ್ರದೇಶದಲ್ಲಿ ಮೂರು ಬೋನುಗಳನ್ನು ಇರಿಸಿದ್ದರೂ ಹುಲಿ ಹತ್ತಿರ ಸುಳಿಯುತ್ತಿಲ್ಲ. ಆದ್ದರಿಂದ ಕೂಂಬಿಂಗ್ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಹುಲಿ ಯೋಜನೆಯ ನಿರ್ದೇಶಕ ಟಿ.ಬಾಲಚಂದ್ರ ಹೇಳಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಈವರೆಗೆ ಬಳಸುತ್ತಿದ್ದ ಬೋನಿನಿಂದ ವನ್ಯಜೀವಿಗಳು ತಪ್ಪಿಸಿಕೊಳ್ಳಲು ನಡೆಸುವ ಪ್ರಯತ್ನದಲ್ಲಿ ಕಾಲುಗಳಿಗೆ ತೀವ್ರ ಪೆಟ್ಟಾಗಿ ಗಾಯಗೊಳ್ಳುತ್ತಿದ್ದವು. ಅರಣ್ಯ ಇಲಾಖೆ ತಲಾ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ, ವನ್ಯಜೀವಿ ಗಾಯಗೊಳ್ಳದಂತೆ ವಿಶೇಷವಾಗಿ ನಿರ್ಮಿಸಿದ 3 ಬೋನುಗಳನ್ನು ತಮಿಳುನಾಡಿನಿಂದ ತರಿಸಿಕೊಂಡಿದೆ.