ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವಲ್ಲ ಸೇಡು?
ಚಾಮರಾಜನಗರ, ಮಾರ್ಚ್ 13: ಬಂಡೀಪುರಕ್ಕೆ ಬೆಂಕಿ ಬಿದ್ದಿದ್ದು ಆಕಸ್ಮಿಕವಲ್ಲ, ಸೇಡು ತೀರಿಸಿಕೊಳ್ಳಲು ಮನುಷ್ಯರೇ ಮಾಡಿದ ಕೆಲಸ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಅರಣ್ಯ ಸಂಪತ್ತು ರಕ್ಷಿಸುವುದಾಗಿ ಹೋರಾಡುತ್ತಿರುವ ಸರ್ಕಾರೇತರ ಸಂಸ್ಥೆ ಸದಸ್ಯರೇ ಬಂಡೀಪುರ ಅಭಯಾರಣ್ಯದಲ್ಲಿನ ಕಾಡ್ಗಿಚ್ಚಿಗೆ ಕಾರಣರಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಂಶಯ ವ್ಯಕ್ತಪಡಿಸಿದೆ.
ಬಂಡೀಪುರಕ್ಕೆ ಬೆಂಕಿ ಇಡಲು ಕಾರಣವೇನು? ಸತ್ಯ ಬಾಯ್ಬಿಟ್ಟ ಆರೋಪಿಗಳು
ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಗೆ ಕಾರಣ ಪತ್ತೆ ಹಚ್ಚಲು ಇಲಾಖೆ ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಎನ್ಜಿಓ ಗಳ ಕೈವಾಡವಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಾಕ್ಷ್ಯಾಧಾರಗಳು ಲಭ್ಯವಾದ ಬಳಿಕ ಆರೋಪಿತರ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ. ಬಂಡೀಪುರದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಸಿಬ್ಬಂದಿ ಹಾಗೂ ಸಾವಿರಾರು ಸ್ವಯಂ ಸೇವಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಸಹಜ ಸ್ಥಿತಿಯತ್ತ ಬಂಡೀಪುರದ ಕಾಡು;ಅಪಾಯದಿಂದ ಪಾರಾದ ಪ್ರಾಣಿಗಳು
ಆದರೆ ಮತ್ತೊಂದು ಕಡೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿತ್ತು. ಬಂಡೀಪುರದಲ್ಲಿ ವನ್ಯ ಜೀವಿಗಳ ಛಾಯಾಚಿತ್ರಗಳನ್ನು ತೆಗೆಯಲು ಕೆಲವು ಎನ್ಜಿಓಗಳು ಅನುಮತಿ ಕೋರಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡಿರಲಿಲ್ಲ ಹಾಗಾಗಿ ಆಕ್ರೋಶದಿಂದ ಸದಸ್ಯರು ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ಅರಣ್ಯ ಪ್ರವೇಶಿಸಿ ಬೆಂಕಿ ಹಚ್ಚಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.
ಬಂಡೀಪುರದಲ್ಲಿ ಅಗ್ನಿ ಅನಾಹುತ ಸಂಭವಿಸಿ ವಾರ ಕಳೆಯಿತು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿ ಒಂದು ವಾರ ಕಳೆದಿದೆ, ಸದ್ಯ ಪರಿಸ್ಥಿತಿ ತಹಬದಿಗೆ ಬಂದಿದೆ. ಮೂರು ರಾಜ್ಯಗಳ ಗಡಿಯನ್ನು ಹಂಚಿಕೆಕೊಂಡಿರುವ ಬಂಡೀಪುರ- ಮದುಮಲೈ ಹಾಗೂ ವೈನಾಡು ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಬೆಂಕಿ 2 ಸಾವಿರ ಹೆಕ್ಟೇರ್ ಪ್ರದೇಶದ ವನ್ಯ ಸಂಪತ್ತು ಬೆಂಕಿಯ ಕೆನ್ನಾಲಿಕೆಗೆ ತುತ್ತಾಗಿತ್ತು, ಅಪಾರ ಪ್ರಮಾಣದ ಸಸ್ಯ ಸಂಪತ್ತಿನ ನಾಶಕ್ಕೆ ಕಾರಣವಾದ ಈ ಬೆಂಕಿಯನ್ನು ಆರಿಸಲು ಸತತ ಮೂರು ದಿನಗಳು ಅವಿರತ ಶ್ರಮವನ್ನು ಅರಣ್ಯ ಇಲಾಖೆ ನಡೆಸಿತು.ಇದರ ಹಿಂದೆಯೇ ಚಾಮುಂಡಿ ಬೆಟ್ಟದ ಸಸ್ಯ ಸಂಪತ್ತೂ ಕಾಡ್ಗಿಚ್ಚಿನಿಂದಾಗಿ ಅಪಾರ ಹಾನಿ ಕಂಡಿತು. ಬೆಟ್ಟದ ಬಂಡಿಪಾಳ್ಯದ ಹಿಂಭಾಗದ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ 60 ಎಕರೆ ಅರಣ್ಯವನ್ನು ಆಹುತಿ ಪಡೆಯಿತು.
ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಪ್ರಾಣಿಗಳು ವಲಸೆ
ಕಾಡಿಗೆ ಬೆಂಕಿ ಬಿದ್ಧ ಪರಿಣಾಮ ಅರಣ್ಯದ ಜೊತೆ ಕಾಡು ಪ್ರಾಣಿಗಳ ಬಗ್ಗೆ ಕೂಡ ಪ್ರಶ್ನೆ ಮೂಡಿತು. ಆದರೆ, ಅಲ್ಲಿನ ಕಾಡುಪ್ರಾಣಿಗಳು ಕಬಿನಿ ಹಿನ್ನೀರಿನ ಪ್ರದೇಶಕ್ಕೆ ವಲಸೆ ಹೋಗಿದ್ದು, ಸರಿಸೃಪಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಬಂಡೀಪುರ ಆದಿವಾಸಿಗಳ ಮೂಲನೆಲೆ
ಕೇವಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರದ ಈ ಸ್ಥಳ ಆದಿವಾಸಿಗಳ ಮೂಲನೆಲೆ ಕೂಡ ಹೌದು. ಬಿಆರ್ ಹಿಲ್ಸ್ ಸೋಲಿಗರು ವಾಸಿಸಿದರೆ, ಮದುಮಲೈ ಪ್ರದೇಶದಲ್ಲಿ ಕುಟ್ಟುನಾಯಕನ್ ಎಂಬ ಆದಿವಾಸಿಗಳು ಜೀವನ ಕಂಡು ಕೊಂಡಿದ್ದಾರೆ. ಇವರ ಪ್ರಕಾರ ಇದಕ್ಕೆ ಕಾರಣ ನಾಡಿನ ಮನುಷ್ಯರೇ. ಕಾಡನ್ನೇ ದೈವವೆಂದು ಪರಿಗಣಿಸುವ ಇವರು ನಾಡಿನ ಮನುಷ್ಯರ ದುರಾಸೆಯಿಂದ ಈ ಅನಾಹುತ ನಡೆದಿದೆ. ಕಾಡಿನೊಳಗೆ ಓಡಾಡುವ ವಾಹನಗಳಿಂದ ಈಗಾಗಲೇ ಧಕ್ಕೆ ಉಂಟಾಗಿದ್ದು, ಈಗ ಪ್ರಕೃತಿ ಈ ರೀತಿ ಮುನಿಸು ತೋರಿದ್ದಾಳೆ ಎನ್ನುತ್ತಾರೆ ಆದಿವಾಸಿ ಜನರು.
ಹಾನಿಗೊಳಗಾದ ಕಾಡುಗಳನ್ನು ಹೇಗೆ ಬೆಳಸುವುದು?
ಈ ಅನಾಹುತದಿಂದ ಈಗ ಮೂಡಿರುವ ಪ್ರಶ್ನೆ ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯವನ್ನು ಹೇಗೆ ಕಾಪಾಡುವುದು. ಸದ್ಯ ಹಾನಿಗೊಳಗಾದ ಕಾಡನ್ನು ಹೇಗೆ ಬೆಳೆಸುವುದು. ಇದಕ್ಕೆಲ್ಲಾ ಸದ್ಯದ ಪರಿಹಾರ ಮಳೆ ಮಾತ್ರ. ನಾಶವಾದ ಅರಣ್ಯ ಪ್ರದೇಶದಲ್ಲಿ ಮಳೆ ಬಿದ್ದರೆ ಮಾತ್ರ ಹಸಿರು ಮತ್ತೆ ಚಿಗುರಲಿದೆ ಎನ್ನುತ್ತಾರೆ ಪರಿಸರ ತಜ್ಞರು. ನಾಶವಾದ ಅರಣ್ಯ ಪ್ರದೇಶದಲ್ಲಿ ಒಂದೆರಡು ಉತ್ತಮ ಮಳೆಯಾದರೆ, ಮತ್ತೆ ಹೊಸ ಗಿಡಮರಗಳು ಚಿಗುರಲಿದ್ದು, ಮತ್ತೆ ಕಾಡು ಹಸಿರಿನಿಂದ ನಳನಳಿಸಲಿದೆ. ಆಗ ಅರಣ್ಯ ಪ್ರದೇಶಕ್ಕೆ ಮತ್ತೆ ವನ್ಯ ಜೀವಿ ಬರಲಿವೆ ಎನ್ನುತ್ತಾರೆ. ಆದರೆ, ಈಗ ಆದ ಅನಾಹುತದಿಂದ ಮತ್ತೆ ಅರಣ್ಯ ಬೆಳೆಯಲು ಕನಿಷ್ಠ 15 ವರ್ಷ ಬೇಕು.vv