ಚಾಮರಾಜನಗರದ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹೊಸವರ್ಷಾಚರಣೆಗೆ ಬ್ರೇಕ್!
ಚಾಮರಾಜನಗರ, ಡಿಸೆಂಬರ್ 30: ಹೊಸ ವರ್ಷಾಚರಣೆಗೆ ಪೇಟೆ ಪಟ್ಟಣಗಳಿಂದ ಹೊರಗಡೆ ಹೋಗುವವರು ಜಿಲ್ಲೆಯ ವನ್ಯಜೀವಿಧಾಮಗಳಿಗೆ ತೆರಳುವಂತಿಲ್ಲ. ಇಲ್ಲಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿದ್ದು ಇತ್ತ ತೆರಳದಿರುವುದು ಒಳಿತು.
ಚಾಮರಾಜನಗರ ಜಿಲ್ಲೆಯ ಎರಡು ಹುಲಿ ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಡಿ.31ರ ತಡರಾತ್ರಿ ಪ್ರವಾಸಿಗರು ಹಾಗೂ ಯುವಕರು ಮೋಜು ಮಸ್ತಿ ಮಾಡುವುದಕ್ಕೆ ಬ್ರೇಕ್ ಹಾಕಲಾಗಿದೆ.
ಹೊಸ ವರ್ಷಾಚರಣೆ: ಡಿ.31ರ ತಡರಾತ್ರಿವರೆಗೂ ಬಿಎಂಟಿಸಿ ಬಸ್ ಸೇವೆ
ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ, ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯಗಳ ರಸ್ತೆಗಳಲ್ಲಿ ಮತ್ತು ಒಳಗೆ ಮದ್ಯಸೇವನೆ, ಸಂಗೀತ ಕಾರ್ಯಕ್ರಮ ಹಾಗೂ ಇತರ ಪಾರ್ಟಿಗಳನ್ನು ನಡೆಸುವುದು ಕಂಡು ಬಂದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲೆಂದು ಬಹಳಷ್ಟು ಮಂದಿ ಅರಣ್ಯದಂಚಿನ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳುವುದು ಇತ್ತೀಚೆಗೆ ಕಂಡು ಬರುತ್ತಿದ್ದು, ಅಲ್ಲಿ ಮದ್ಯ ಸೇವಿಸಿ ಕೂಗಾಟ, ಕಿರುಚಾಟ, ಸಂಗೀತ ಕಾರ್ಯಕ್ರಮ ಹಾಗೂ ಇತರ ಪಾರ್ಟಿಗಳನ್ನು ಆಯೋಜಿಸುವುದು ಕಂಡು ಬರುತ್ತದೆ. ಅದನ್ನು ಈ ಬಾರಿ ನಿಷೇಧಿಸಲಾಗಿದೆ.
ಹೊಸ ವರ್ಷದ ದಿನ ಮುತ್ತತ್ತಿಗೆ ಪ್ರವಾಸಿಗರ ಭೇಟಿ ನೀಷೇಧ
ಡಿ.31ರಂದು ಅರಣ್ಯದ ಚೆಕ್ಪೋಸ್ಟ್ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುವುದು. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯ 10 ರಿಂದ15 ತಂಡಗಳು ರಾತ್ರಿಯಿಡೀ ಅರಣ್ಯಗಳ ಮುಖ್ಯರಸ್ತೆಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗಲಿವೆ. ಇನ್ನು ಅರಣ್ಯ ಇಲಾಖೆಗಳ ಪ್ರವಾಸಿ ಮಂದಿರಗಳಲ್ಲಿ ಯಾರೊಬ್ಬರಿಗೂ ತಂಗಲು ಅವಕಾಶವಿಲ್ಲ. ಮುಂದೆ ಓದಿ...
ಪಾರ್ಟಿ ನಡೆಸುವ ಹಾಗಿಲ್ಲ
ಅರಣ್ಯಗಳ ಒಳಗಿನ ರಸ್ತೆಗಳಲ್ಲಿ ಮದ್ಯ ಸೇವನೆ ಮಾಡಿ ಅರಚಾಟ ಮಾಡುವವರನ್ನು ಮತ್ತು ಪಾರ್ಟಿ ನಡೆಸುವವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸ್ವಚ್ಛಂದವಾಗಿ ವಿಹರಿಸುವಂತಿಲ್ಲ
ಅರಣ್ಯದೊಳಗೆ ಇರುವ ಪ್ರವಾಸೋದ್ಯಮ ಇಲಾಖೆಯ ಜಂಗಲ್ ರೆಸಾರ್ಟ್ಗಳು ಮತ್ತು ಖಾಸಗಿ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡುವವರು ಅರಣ್ಯದೊಳಗೆ ಸ್ವಚ್ಛಂದವಾಗಿ ವಿಹರಿಸುವಂತಿಲ್ಲ. ರೆಸಾರ್ಟ್ಗಳ ಆವರಣದೊಳಗೆ ಹೊಸ ವರ್ಷದ ಸಂಭ್ರಮ ಆಚರಿಸಬೇಕು. ಒಂದು ವೇಳೆ ಇದನ್ನು ಮೀರಿದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಹೊಸವರ್ಷಾಚರಣೆ ನೆಪದಲ್ಲಿ ಪುಂಡಾಟಿಕೆ ನಡೆಸಿದರೆ ಹುಷಾರ್!
ಈ ಬಾರಿ ಬ್ರೇಕ್
ಕಾಡಂಚಿನ ಪ್ರದೇಶದ ತೋಟದ ಮನೆಗಳು, ಬಿಆರ್ ಟಿ ಅರಣ್ಯದ ಬೆಲವತ್ತ, ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಏರಿಗಳು, ಕೃಷ್ಣಯ್ಯಕಟ್ಟೆ, ಗೌಡಹಳ್ಳಿ ಕೆರೆ, ಹೋಂಸ್ಟೇಗಳಲ್ಲಿ ಯುವ ಜನರು ಗುಂಪುಗೂಡಿ ಧ್ವನಿವರ್ಧಕಗಳನ್ನು ಬಳಸಿ ನರ್ತಿಸಿ ಮೋಜು ಮಸ್ತಿ ಮಾಡುತ್ತಾರೆ ಆದರೆ ಇದಕ್ಕೆಲ್ಲ ಈ ಬಾರಿ ಬ್ರೇಕ್ ಹಾಕಲಾಗುತ್ತಿದೆ. ಸಂರಕ್ಷಿತಾರಣ್ಯಗಳಲ್ಲಿ ಪಾನಗೋಷ್ಠಿ ಮಾಡುವುದು ಕಾನೂನುಬಾಹಿರವಾಗಿದೆ.
ಸಂಗೀತ ಕಾರ್ಯಕ್ರಮಗಳು ನಿಷೇಧ
ಇನ್ನು ಡಿ.31ರಂದು ಅರಣ್ಯ ಪ್ರದೇಶಗಳಲ್ಲಿ ಪಾರ್ಟಿ, ಸಂಗೀತ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಯಾರಾದರೂ ಪಾರ್ಟಿ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಲೆಮಹದೇಶ್ವರ ಬೆಟ್ಟದ ವನ್ಯಜೀವಿಧಾಮದ ಡಿಎಫ್ ಒ ಏಡುಕೊಂಡಲು ಎಚ್ಚರಿಕೆ ನೀಡಿದ್ದಾರೆ.