ಹೊಸ ವರ್ಷಕ್ಕೆ ಬಂಡೀಪುರದ ವಸತಿ ಗೃಹಗಳು ಎರಡು ದಿನ ಬಂದ್
ಚಾಮರಾಜನಗರ, ಡಿಸೆಂಬರ್ 25: ಪ್ರತಿ ವರ್ಷವೂ ವರ್ಷಾಂತ್ಯ ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆಗೆಂದು ಬರುವವರಿಗೆ ಬಂಡೀಪುರದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಡಿ.31 ಮಾತ್ರವಲ್ಲದೆ ಜ.1ರಂದು ಕೂಡ ಪ್ರವಾಸಿಗರಿಗೆ ವಸತಿ ಗೃಹ ನೀಡದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಸಾಮಾನ್ಯವಾಗಿ ನಗರದ ಗೌಜು ಗದ್ದಲದ ನಡುವೆ ಬದುಕು ಕಟ್ಟಿಕೊಂಡಿದ್ದ ಬಹುತೇಕ ಮಂದಿ ವರ್ಷಾಂತ್ಯದಲ್ಲಿ ನಿಸರ್ಗದ ನಡುವೆ ಒಂದಷ್ಟು ಸಮಯವನ್ನು ಕಳೆಯುವುದರೊಂದಿಗೆ ವರ್ಷಾಚರಣೆ ಮಾಡುವ ಸಲುವಾಗಿ ಬಂಡೀಪುರದತ್ತ ಪ್ರವಾಸಿಗರ ದಂಡು ದೌಡಾಯಿಸುತ್ತಿತ್ತು. ಹೀಗೆ ಬರುವ ಪ್ರವಾಸಿಗರಿಗೆ ಬಂಡೀಪುರ ಅರಣ್ಯ ಇಲಾಖೆಗೊಳಪಡುವ ವಸತಿ ಗೃಹಗಳಲ್ಲಿ ಡಿ.31ರಂದು ಹೊರತುಪಡಿಸಿ ಉಳಿದ ದಿನಗಳಲ್ಲಿ ತಂಗಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಅದ್ಯಾವುದೂ ಇಲ್ಲವಾಗಿದೆ.
ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಮುಂದಾದವರಿಗೆ ಬಿಗ್ ಶಾಕ್..!
ವರ್ಷಾಚರಣೆಯ ಮೋಜು ಮಸ್ತಿಗೆ ಕಡಿವಾಣ
ಬಂಡೀಪುರ ವ್ಯಾಪ್ತಿಯಲ್ಲಿರುವ ಬಹುತೇಕ ರೆಸಾರ್ಟ್ ಗಳಲ್ಲಿ ವರ್ಷಾಚರಣೆ ಮಾಡಲಾಗುತ್ತಿತ್ತು. ದೂರದಿಂದ ಬಂದ ಪ್ರವಾಸಿಗರು ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿ ಎಂಜಾಯ್ ಮಾಡುತ್ತಿದ್ದರು. ಮಧ್ಯ ರಾತ್ರಿವರೆಗೂ ಫೈರ್ ಕ್ಯಾಂಪ್, ಮ್ಯೂಸಿಕ್, ಡ್ಯಾನ್ಸ್ ಹೀಗೆ ಮೋಜು ಮಸ್ತಿಯಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಇರುವ ಕಾರಣ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಒಂದೆಡೆ ಕೊರೊನಾ, ಮತ್ತೊಂದೆಡೆ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ ಎಂಬ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಡಿ.31 ಮತ್ತು ಜ.1ರಂದು ಬಂಡೀಪುರದಲ್ಲಿ ಪ್ರವಾಸಿಗರಿಗೆ ವಸತಿ ಗೃಹ ನೀಡದಿರಲು ಅರಣ್ಯ ಇಲಾಖೆಯಿಂದ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ
ಎರಡು ದಿನ ವಸತಿ ನೀಡಲು ನಿರಾಕರಣೆ
ಪ್ರತಿ ವರ್ಷವೂ ಹೊಸ ವರ್ಷಾಚರಣೆ ವೇಳೆ ವಸತಿ ಗೃಹದ ಬಳಿ ಸೌಂಡ್ ಮತ್ತು ಮ್ಯೂಸಿಕ್ ಬಳಕೆ ಮಾಡಲಾಗುತ್ತಿತ್ತು. ಇದು ಕಾಡು ಪ್ರಾಣಿಗಳಿಗೆ ಸಹಜ ಜೀವನಕ್ಕೆ ತೊಂದರೆಯಾಗುತ್ತಿದೆ ಎಂಬ ಆಕ್ಷೇಪಗಳನ್ನು ಪ್ರಾಣಿ ಪ್ರಿಯರು ಮಾಡಿದ್ದರು. ಈ ಕುರಿತಂತೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಅದರಂತೆ ಪ್ರತಿ ವರ್ಷ ಡಿ.31ರಂದು ಅಂದರೆ ಒಂದು ದಿನ ಮಾತ್ರ ಪ್ರವಾಸಿಗರಿಗೆ ವಸತಿ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಜನವರಿ 1 ಸೇರಿ ಎರಡು ದಿನಗಳ ಕಾಲ ಪ್ರವಾಸಿಗರಿಗೆ ವಸತಿ ನೀಡಲು ನಿರಾಕರಿಸಲಾಗಿದೆ. ಇಷ್ಟೇ ಅಲ್ಲದೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಖಾಸಗಿ ವಸತಿ ಗೃಹಗಳು ಮತ್ತು ಹೋಂ ಸ್ಟೇಗಳಲ್ಲಿಯೂ ಸಹ ಶಬ್ಧ ಮಾಡಬಾರದು, ಲೈಟಿಂಗ್ಸ್ ಬಳಸಬಾರದು, ಡಿಜೆ ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ. ಆದರೆ ಡಿ.31 ಮತ್ತು ಜ.1ರಂದು ಎರಡು ದಿನಗಳ ಕಾಲ ವಸತಿ ಗೃಹ ನೀಡದಿದ್ದರೂ ಎಂದಿನಂತೆ ಸಫಾರಿ ಕಾರ್ಯ ನಡೆಯಲಿದ್ದು, ಇದರ ಪ್ರಯೋಜನವನ್ನು ಪ್ರವಾಸಿಗರು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.
ಅರಣ್ಯದ ಸೊಬಗು ಸವಿಯಲು ಅವಕಾಶ
ಈ ನಡುವೆ ಪರಿಸರ ಪ್ರೇಮಿ ಜಿ.ಆರ್.ರವಿ ಅವರು ಮಾತನಾಡಿ, ಬಂಡೀಪುರದ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ಹೋಂ ಸ್ಟೇಗಳು ನಿರ್ಮಾಣವಾಗಿದ್ದು, ಇಲ್ಲಿ ನಗರ ವಾಸಿಗಳಿಗೆ ಪಾರ್ಟಿ ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಇದಕ್ಕೂ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ಕ್ಯಾಂಪಸ್ನಲ್ಲಿ ಚಿರತೆಗಳು, ಹುಲಿ, ಆನೆಗಳು ಸೇರಿದಂತೆ ವನ್ಯಜೀವಿಗಳ ಸಂಚಾರ ಹೆಚ್ಚಾಗಿದೆ. ಆದ್ದರಿಂದ ಬಂಡೀಪುರಕ್ಕೆ ಬರುವ ಪ್ರತಿ ಪ್ರವಾಸಿಗರಿಗೆ ಮೋಜು ಮಸ್ತಿ ಮಾಡಲು ಅವಕಾಶ ನೀಡುವುದಕ್ಕಿಂತ ಅರಣ್ಯದ ಸೊಬಗು ಹಾಗೂ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ವನ್ಯಜೀವಿಗಳ ಹಾಗೂ ಪ್ರವಾಸಿಗರ ಹಿತ ದೃಷ್ಟಿಯಿಂದ ವರ್ಷಾಚರಣೆಗೆ ತಡೆ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತಿವೆ.
Recommended Video
ಕೋವಿಡ್ ನಿಯಮ ಪಾಲಿಸದಿದ್ದರೆ ಕ್ರಮ
ಬಂಡೀಪುರ ಹುಲಿ ಯೋಜನೆ ನಿರ್ದೇಶಕರಾಗಿರುವ ನಟೇಶ್ ಅವರು ಪ್ರತಿಕ್ರಿಯೆ ನೀಡಿ, ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಬಂಡೀಪುರದ ವಸತಿ ನೀಡುತ್ತಿಲ್ಲ. ಜೊತೆಗೆ ಖಾಸಗಿ ವಸತಿ ನಿಲಯಗಳಲ್ಲಿ ಸಹ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.