ಚಾಮರಾಜನಗರ: ಗೆದ್ದಲು ಹಿಡಿದ ಪ್ರಾಥಮಿಕ ಆರೋಗ್ಯಕೇಂದ್ರದ ಕಟ್ಟಡ!
ಚಾಮರಾಜನಗರ, ನವೆಂಬರ್ 03: ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ನಿರ್ಮಿಸಿದ ಸುಸಜ್ಜಿತ ಕಟ್ಟಡದ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಮರದ ಬಾಗಿಲು, ಕಿಟಿಕಿಗಳನ್ನು ಬಳಸಿದ್ದರಿಂದ ಅವುಗಳೆಲ್ಲ ಗೆದ್ದಲು ಹಿಡಿಯುತ್ತಿರುವುದು ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಕಂಡು ಬಂದಿದೆ.
ಚಾಮರಾಜನಗರ: ಇಲ್ಲಿಲ್ಲ ಹೊಸ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸುವ ಭಾಗ್ಯ!
ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕೊಡಸೋಗೆ ಗ್ರಾಮದ ಹೊರಭಾಗದಲ್ಲಿ ಜನರ ಅಗತ್ಯತೆಯನ್ನು ಮನಗಂಡು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ ಕಟ್ಟಡ ಮೇಲ್ನೋಟಕ್ಕೆ ಸುಸಜ್ಜಿತವಾಗಿರುವಂತೆ ಕಂಡು ಬಂದಿತ್ತಾದರೂ ಅದಕ್ಕೆ ಬಳಸಿದ ಮರಮುಟ್ಟುಗಳು ಕಳಪೆ ಮಟ್ಟದ ಮರ ಎಂಬುದು ಇದೀಗ ಗೊತ್ತಾಗ ತೊಡಗಿದೆ.
ಹಾಗೆನೋಡಿದರೆ ಈ ಆಸ್ಪತ್ರೆ ಕಟ್ಟಡದಲ್ಲಿ ಸುಸಜ್ಜಿತ ಪ್ರಯೋಗಾಲಯ, ಹೊರ ಹಾಗೂ ಒಳರೋಗಿಗಳ ಅನುಕೂಲಕ್ಕೆ ತಕ್ಕಂತೆ ಪ್ರತ್ಯೇಕ ವಾರ್ಡುಗಳು ಸೇರಿದಂತೆ ಎಲ್ಲವೂ ಇದೆಯಾದರೂ ಕಳಪೆ ಗುಣಮಟ್ಟದ ಮರಗಳನ್ನು ಬಳಕೆ ಮಾಡಿ ಬಾಗಿಲು, ಕಿಟಿಕಿಗಳನ್ನು ನಿರ್ಮಿಸಿರುವುದರಿಂದ ವೈದ್ಯರು ರೋಗಿಗಳನ್ನು ತಪಾಸಣೆ ಮಾಡುವ ಕೊಠಡಿ, ಪುರುಷ ಹಾಗೂ ಮಹಿಳೆಯರ ಶೌಚಾಲಯಗಳು, ಪ್ರಯೋಗಾಲಯ ಮೊದಲಾದ ಕೊಠಡಿಗಳ ಬಾಗಿಲುಗಳು ಹಾಗೂ ಚೌಕಟ್ಟುಗಳಮ್ಮಿ ಈಗಾಗಲೇ ಗೆದ್ದಲು ತಿಂದು ಹಾಕಿವೆ. ಶನಿವಾರ ಭಾನುವಾರ ರಜೆಯ ದಿನಗಳಂದು ಬಾಗಿಲು ತೆರೆಯದ ದಿನಗಳಲ್ಲಿ ಗೆದ್ದಲು ಮರಗಳನ್ನು ಆವರಿಸಿ ಬಿಡುತ್ತವೆ. ಆಸ್ಪತ್ರೆ ತೆರೆದ ದಿನ ಗೆದ್ದಲನ್ನು ಗುಡಿಸಿ ಹೊರಹಾಕುವುದೇ ದೊಡ್ಡ ಕೆಲಸವಾಗುತ್ತಿದೆ.
ದೀರ್ಘಕಾಲ ಬಾಳಿಕೆ ಬರಬೇಕಾದ ಕಟ್ಟಡವನ್ನು ನಿರ್ಮಿಸುವಾಗ ಕಳಪೆ ಗುಣಮಟ್ಟದ ಮರವನ್ನು ಬಳಸಿ ಕಟ್ಟಡ ನಿರ್ಮಿಸಿದ್ದರಿಂದ ಇದೀಗ ಆಸ್ಪತ್ರೆ ಕಟ್ಟಡದ ಬಗ್ಗೆಯೇ ಅನುಮಾನ ಪಡಬೇಕಾದ, ಅಷ್ಟೇ ಅಲ್ಲದೆ ಭಯದಿಂದ ಕಾರ್ಯನಿರ್ವಹಿಸಬೇಕಾದ ಸ್ಥಿತಿಗೆ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ತಂದಿಟ್ಟಿರುವುದು ಇಲ್ಲಿನ ಸಿಬ್ಬಂದಿ ಮತ್ತು ಸ್ಥಳೀಯರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದವರು ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರನ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.