ಗುಂಡ್ಲುಪೇಟೆ ಗಡಿ ಭಾಗದ ಕೇರಳದಲ್ಲಿ ಮತ್ತೆ ನಕ್ಸಲರ ಅಟ್ಟಹಾಸ
ಚಾಮರಾಜನಗರ, ಜನವರಿ 16: ಒಂದೆಡೆ ಕೇರಳ ಮತ್ತು ಕರ್ನಾಟಕ ಗಡಿಭಾಗದ ಪ್ರದೇಶದಲ್ಲಿ ಉಗ್ರರು ವಾಸ್ತವ್ಯ ಹೂಡಿದ್ದರು ಮತ್ತು ಅವರಿಗೆ ಸ್ಥಳೀಯ ಕೆಲವರು ಸಹಕಾರ ನೀಡಿದ್ದರು ಎಂಬ ಸುದ್ದಿ ಈಗಾಗಲೇ ಸದ್ದು ಮಾಡಿದೆ. ಇದು ಹಸಿರಾಗಿರುವಾಗಲೇ ನಕ್ಸಲರು ಅಟಾಟೋಪ ಮೆರೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಕೇರಳ ಮತ್ತು ತಮಿಳುನಾಡು ಗಡಿಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇದ್ದಾರೆ ಎಂಬ ಶಂಕೆ ಮೊದಲಿನಿಂದಲೂ ಇದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪಾಲ್ಕಾಡನ ಮಂಚಕಟ್ಟಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಥಂಡರ್ ಬೋಲ್ಟ್ ಕಮಾಂಡೊ ಪಡೆ, ಮಣಿವಸಗಂ, ರೇನು, ಕಾರ್ತಿಕ, ಅರವಿಂದ ಎಂಬ ನಾಲ್ಕು ಜನ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಇದಾದ ನಂತರ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ನಕ್ಸಲರೆಂದು ಕೊಂದಿದ್ದು 17 ಮಂದಿ ಅಮಾಯಕರನ್ನು: 7 ವರ್ಷದ ಬಳಿಕ ಬಹಿರಂಗವಾದ ಸತ್ಯ
ಆದರೆ ಇದೀಗ ಗುಂಡ್ಲುಪೇಟೆ ತಾಲೂಕಿಗೆ ಹೊಂದಿಕೊಂಡಂತಿರುವ ಕೇರಳದ ವೈನಾಡು ಜಿಲ್ಲೆಯ ಮೇಪಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟಮಾಳ ಜೀನ್ಸ್ ರೆಸಾರ್ಟ್ ಮೇಲೆ ನಾಲ್ಕು ಜನರ ತಂಡ ದಾಳಿ ಮಾಡಿದ್ದು, ರೆಸಾರ್ಟ್ನ ಕಿಟಕಿಯ ಗಾಜು ಬಾಗಿಲುಗಳನ್ನು ಪುಡಿಮಾಡಿದೆ. ಆ ಮೂಲಕ ತಮ್ಮ ಜತೆಗಾರರನ್ನು ಸದೆ ಬಡಿದ ಪೊಲೀಸರಿಗೆ ಸವಾಲು ನೀಡಿದ್ದಾರೆ.
ರೆಸಾರ್ಟ್ ಕಿಟಕಿ ಬಾಗಿಲು ಧ್ವಂಸದ ಕೃತ್ಯವನ್ನು ನಕ್ಸಲರೇ ಮಾಡಿದ್ದಾರೆ ಎಂಬುದಕ್ಕೆ ಆಕ್ರೋಶದ ಬರಹಗಳನ್ನು ಬರೆದು ಪೋಸ್ಟರ್ ಅಂಟಿಸಿರುವುದು ಸಾಕ್ಷಿಯಾಗಿದೆ. ಈ ರೆಸಾರ್ಟ್ನಲ್ಲಿ ಆದಿವಾಸಿ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದ್ದು, ಕಡಿಮೆ ಸಂಬಳ ಕೊಟ್ಟು ಹೆಚ್ಚು ಕೆಲಸ ಮಾಡಿಸುತ್ತಿದ್ದಾರೆ ಎಂಬುದು ನಕ್ಸಲರ ಆಕ್ರೋಶ. ಇದನ್ನು ಮಲಯಾಳ ಭಾಷೆಯಲ್ಲಿ ಬರೆದು ರೆಸಾರ್ಟ್ ಬಾಗಿಲಲ್ಲಿ ಅಂಟಿಸಿ ಎಚ್ಚರಿಕೆ ನೀಡಿ ತೆರಳಿದ್ದಾರೆ.
ಜಾರ್ಖಂಡ್ನಲ್ಲಿ ನಕ್ಸಲ್ ದಾಳಿ:ನಾಲ್ವರು ಪೊಲೀಸರು ಹುತಾತ್ಮ
ಸದ್ಯ ಈ ಘಟನೆ ಬಳಿಕ ನಕ್ಸಲ್ ನಿಗ್ರಹ ಪಡೆ ಎಚ್ಚೆತ್ತುಕೊಂಡಿದ್ದು, ಕಾರ್ಯಾಚರಣೆ ಆರಂಭಿಸಿದೆ. ರೆಸಾರ್ಟ್ ಮೇಲೆ ದಾಳಿ ಮಾಡಿದ್ದು ಯಾರು? ಅವರು ಈಗ ಎಲ್ಲಿದ್ದಾರೆ ಎಂಬುದರ ಕುರಿತಂತೆ ಜಾಡು ಹಿಡಿದು ಹುಡುಕಾಟ ನಡೆಸಲಾಗುತ್ತಿದೆ. ಜತೆಗೆ ಗಡಿ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸದ್ಯ ದಾಳಿ ನಡೆದ ಕೇರಳದ ಅಟ್ಟಮಾಳ ಜೀನ್ಸ್ ರೆಸಾರ್ಟ್ ಇರುವ ಸ್ಥಳವು ಕರ್ನಾಟಕದ ಗಡಿಯಿಂದ 50 ಕಿಮೀ ದೂರದಲ್ಲಿದ್ದು, ತಮಿಳುನಾಡಿನ ಊಟಿ ಜಿಲ್ಲೆ ಹತ್ತಿರದಲ್ಲಿದೆ.