ಮಲೆ ಮಹದೇಶ್ವರ ಬೆಟ್ಟದಲ್ಲಿ ನಂಗಾನಾಚ್: ಆರ್ಕೆಸ್ಟ್ರಾ ಮಾಲಿಕ ಬಂಧನ
ಚಾಮರಾಜನಗರ, ಆಗಸ್ಟ್ 3: ಇತ್ತೀಚೆಗೆ ಮಹದೇಶ್ವರ ಬೆಟ್ಟದ ಆವರಣದಲ್ಲಿ ನಡೆದ ಗಣೇಶೋತ್ಸವದ ರಸಮಂಜರಿ ಕಾರ್ಯಕ್ರಮದಲ್ಲಿ ನಡೆದ ನಂಗನಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಕೇಸ್ಟ್ರಾ ಮಾಲಿಕನನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಂಗಾನಾಚ್ ಬೇಕಿತ್ತಾ?
ಬೆಂಗಳೂರಿನ ಆರ್ಕೇಸ್ಟ್ರಾ ತಂಡದ ಮಾಲಿಕ ಶಿವರುದ್ರಯ್ಯ, ಪೇದೆಗಳಾದ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಆನಂದ ನಾಯಕ ಮತ್ತು ರಘು ಅಮಾನತುಗೊಂಡವರು.
ಆ.28ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಹಮ್ಮಿಕೊಂಡಿದ್ದ ರಸಮಂಜರಿಯಲ್ಲಿ ಸಿನಿಮಾ ಗೀತೆಗಳ ಗಾಯನದೊಂದಿಗೆ ತುಂಡುಡುಗೆ ತೊಟ್ಟ ಯುವತಿ ಮೂರೇ ಮೂರು ಪೆಗ್ಗಿಗೆ ತಲೆ ಗಿರ್ರ ಗಿರ್ರ ತಿರುಗಿದೆ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ನಂಗನಾಚ್ ನಡೆದಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಕಾರ್ಯಕ್ರಮ ಆಯೋಜಕರ ಮೇಲೆ ಕಿಡಿಕಾರಿದ ಜನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಒತ್ತಡಗಳು ಹೆಚ್ಚಾದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇದೀಗ ಬೆಂಗಳೂರಿನ ಆರ್ಕೇಸ್ಟ್ರಾ ತಂಡದ ಮಾಲಿಕ ಶಿವರುದ್ರಯ್ಯನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಅಲ್ಲದೆ ಇಂತಹ ಕಾರ್ಯಕ್ರಮ ನಡೆದರೂ ಅದನ್ನು ತಡೆಯುವಲ್ಲಿ ವಿಫಲರಾದ ಮಹದೇಶ್ವರ ಬೆಟ್ಟದ ಪೊಲೀಸ್ ಪೇದೆಗಳಾದ ಆನಂದ ನಾಯಕ ಮತ್ತು ರಘು ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗಿದೆ.