ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ನಡೆ ಇನ್ನೂ ನಿಗೂಢ
ಚಾಮರಾಜನಗರ, ನವೆಂಬರ್ 8: ಬಿಎಸ್ ಪಿಯಿಂದ ಉಚ್ಛಾಟನೆಗೊಂಡಿರುವ ಏಕೈಕ ಶಾಸಕ ಎನ್.ಮಹೇಶ್ ಅವರ ಮುಂದಿನ ನಡೆಯೇನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ರಾಜ್ಯದಲ್ಲಿ ಬಿಎಸ್ ಪಿ ಸಂಘಟಿಸುವ ಮೂಲಕ ರಾಜ್ಯದಲ್ಲಿ ಪಕ್ಷಕ್ಕೆ ಆಯಾಮ ತಂದು ಕೊಟ್ಟಿದ್ದ ಮಹೇಶ್ ಅವರು ನಾಯಕರಾಗಿ ಗಮನ ಸೆಳೆದಿದ್ದರು. ಹಲವು ಬಾರಿ ಸ್ಪರ್ಧಿಸಿ ಸೋತಿದ್ದರೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಮತ್ತು ಸಂಘಟನೆ ಮೂಲಕ ಮುಂಚೂಣಿಯಲ್ಲಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್ ಪಿ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಸುಲಭವಾಗಿ ಗೆಲುವು ಸಾಧಿಸಿದ್ದರಲ್ಲದೆ, ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಸಚಿವರಾಗಿಯೂ ಕೆಲ ಕಾಲ ಕೆಲಸ ಮಾಡಿದರು. ಆದರೆ ಹೆಚ್ಚು ದಿನ ಸಚಿವರಾಗಿ ಉಳಿಯದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಶಾಸಕರಾಗಿ ಉಳಿದು ಬಿಟ್ಟರು.
ಸಿದ್ದರಾಮಯ್ಯ ಸಿಎಂ ಆಗೋಕೆ ಸಾಧ್ಯ ಇಲ್ಲ: ಸಚಿವ ಮಹೇಶ್ ಟಾಂಗ್
ಆದರೆ ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಲ್ಲಿ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದ್ದರಿಂದ ಬಿಎಸ್ಪಿ ಪಕ್ಷದಿಂದ ಉಚ್ಚಾಟನೆಗೊಳ್ಳುವಂತಾಯಿತು. ಹೀಗಾಗಿ ಕಳೆದ ಮೂರು ನಾಲ್ಕು ತಿಂಗಳಿಂದ ಪಕ್ಷದಿಂದ ದೂರವೇ ಉಳಿದಿರುವ ಅವರು ತಾವಾಯಿತು ತಮ್ಮ ಕ್ಷೇತ್ರದ ಕೆಲಸವಾಯಿತು ಎಂಬಂತಿದ್ದಾರೆ.
ರಾಜ್ಯದ ಮಟ್ಟಿಗೆ ಬಿಎಸ್ಪಿ ಅಂದರೆ ಎನ್.ಮಹೇಶ್ ಎಂಬಂತೆ ಹೆಸರು ಮಾಡಿದ್ದರು. ಆದರೀಗ ಪಕ್ಷ ಅವರನ್ನು ಉಚ್ಛಾಟಿಸಿರುವುದರಿಂದ ಮುಂದೆ ಏನು ಮಾಡುತ್ತಾರೆ? ಸ್ವತಂತ್ರರಾಗಿ ಉಳಿಯುತ್ತಾರಾ ಅಥವಾ ಬೇರೆ ಪಕ್ಷದತ್ತ ಮುಖ ಮಾಡುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇದೆ. ಆದರೆ ಇದ್ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳದ ಅವರು ತಮ್ಮ ಪಾಡಿಗೆ ತಾವಿದ್ದಾರೆ. ಆದರೆ ಬಿಎಸ್ಪಿ ಪಕ್ಷದಿಂದ ದೂರ ಉಳಿಯುತ್ತಿರುವ ಸಂಗತಿಯನ್ನು ಸ್ಪಷ್ಟಪಡಿಸಿದ್ದಾರೆ.
ತಾನು ಮೂರು ವರ್ಷಗಳ ಕಾಲ ಸ್ವತಂತ್ರವಾಗಿರುತ್ತೇನೆ. ತಾನು ಪ್ರತಿನಿಧಿಸುವ ಕ್ಷೇತ್ರದ ಜನರ ನೀರಿಕ್ಷೆಯಂತೆ ಕೆಲಸ ಮಾಡಬೇಕಿದೆ, ತನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು, ಮತ್ತೆ ಪಕ್ಷಕ್ಕೆ ತೆರಳುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಲಾ ಬಸ್ಪಾಸ್ಗೆ ಶಿಕ್ಷಣ ಇಲಾಖೆಯಿಂದ ಶೇ.25 ವಂತಿಕೆ: ಸಚಿವ ಮಹೇಶ್
ತನ್ನನ್ನು ಮತ್ತೆ ಬಿಎಸ್ಪಿ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾರೊಬ್ಬರು ಸಂಪರ್ಕ ಮಾಡಿಲ್ಲ, ನಾನು ಯಾರನ್ನೂ ಭೇಟಿ ಮಾಡಿಲ್ಲ ಎಂದು ಹೇಳಿರುವ ಅವರು, ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಅವರ ಸಂಪರ್ಕದಲ್ಲಿದ್ದುಕೊಂಡು ಕ್ಷೇತ್ರದ ಅಭಿವೃದ್ದಿ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಅವರ ನಡೆ ಮಾತ್ರ ನಿಗೂಢವಾಗಿಯೇ ಉಳಿದಿದೆ.