ಎಚ್ಎಸ್ಎಂ ನಿಧನ : ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ
ಬೆಂಗಳೂರು, ಜನವರಿ 03 : ಸೋಲಿಲ್ಲದ ಸರದಾರ, ಅಜಾತಶತ್ರು ಎಂದು ವಿರೋಧಿಗಳಿಂದಲೂ ಕರೆಯಿಸಿಕೊಳ್ಳುತ್ತಿದ್ದ ಸಕ್ಕರೆ ಮತ್ತು ಸಹಕಾರ ಸಚಿವ ಎಚ್ಎಸ್ ಮಹದೇವ ಪ್ರಸಾದ್ ಅವರ ನಿಧನದ ಪ್ರಯುಕ್ತ ರಾಜ್ಯಾದ್ಯಂತ ಸರಕಾರಿ ಶಾಲಾಕಾಲೇಜುಗಳಿಗೆ ಮಂಗಳವಾರ ರಜಾ ಘೋಷಿಸಲಾಗಿದೆ.
ತಮ್ಮ ಅತ್ಯಾಪ್ತ ರಾಜಕೀಯ ಮಿತ್ರನನ್ನು ಕಳೆದುಕೊಂಡು ದುಃಖತಪ್ತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ಮಧ್ಯಾಹ್ನ ಮೈಸೂರಿಗೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದಾರೆ.[ಹುಟ್ಟೂರು ಹಾಲಹಳ್ಳಿಯಲ್ಲಿ ಮಹದೇವಪ್ರಸಾದ್ ಅಂತ್ಯಕ್ರಿಯೆ]
ರಾಜ್ಯದಲ್ಲಿ ಸರಕಾರಿ ಶಾಲಾಕಾಲೇಜುಗಳಿಗೆ ರಜಾ ಘೋಷಿಸಲಾಗಿದೆಯಾದರೂ, ಖಾಸಗಿ ಶಾಲೆಗಳು ಎಂದಿನಂತೆ ನಡೆದಿವೆ. ಶಾಲೆಗೆ ರಜಾ ಘೋಷಿಸಿಲ್ಲ, ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಹಲವಾರು ಖಾಸಗಿ ಶಾಲೆಗಳು ಪೋಷಕರಿಗೆ ಎಸ್ಎಂಎಸ್ ಕಳಿಸಿವೆ.[ಮಹದೇವ ಪ್ರಸಾದ್ ನಿಧನ : ಮುಖಂಡರ ಅಂತಿಮ ನುಡಿ]
ಬುಧವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಜನಪ್ರಿಯ ನಾಯಕನನ್ನು ಕಳೆದುಕೊಂಡಿರುವ ಜಿಲ್ಲೆಯ ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕಾರಣದಿಂದಾಗಿ ಬುಧವಾರ ಚಾಮರಾಜನಗರ ಜಿಲ್ಲೆಯಲ್ಲಿ ಸರಕಾರಿ ಶಾಲಾಕಾಲೇಜುಗಳಿಗೆ ರಜಾ ನೀಡಲಾಗಿದೆ.[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]
ಎಚ್ ಎಸ್ ಮಹದೇವ ಪ್ರಸಾದ್ ಅವರ ಗೌರವಾರ್ಥವಾಗಿ ಜೆಎಸ್ಎಸ್ ಶಿಕ್ಷಣ ಸಂಸ್ಥೆ ಮಂಗಳವಾರ ಶಾಲೆ ಮತ್ತು ಕಾಲೇಜುಗಳಿಗೆ ರಜಾ ಘೋಷಿಸಿದೆ. ಅಲ್ಲದೆ. ಜೆಎಸ್ಎಸ್ ಯುನಿವರ್ಸಿಟಿ ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಗಳನ್ನು ಜನವರಿ 6ಕ್ಕೆ ಮುಂದೂಡಿದೆ.