ಶಾಸಕರ ಹೆಸರೇಳಿ ಶಾಸಕಿ ರೂಪಾಲಿ ನಾಯ್ಕ್ಗೆ 50 ಸಾವಿರ ರೂ. ವಂಚನೆ
ಚಾಮರಾಜನಗರ, ಜುಲೈ 21: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಾರವಾರ- ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ಗೆ ಕರೆ ಮಾಡಿ 50 ಸಾವಿರ ರೂ. ಪಡೆದು ವಂಚಿಸಿದ್ದಾನೆ.
ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್(23) ಶಾಸಕಿಗೆ ವಂಚಿಸಿದವನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಘಟನೆ ವಿವರ
ಕಾರವಾರದ ಶಾಸಕಿ ರೂಪಾಲಿ ನಾಯ್ಕ್ಗೆ ಜುಲೈ 1ರಂದು ರಾಮನಗರದ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಕರೆ ಮಾಡಿ, ನಾನು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಶಾಸಕ ಎನ್.ಮಹೇಶ್ಗೆ ತುರ್ತಾಗಿ 50 ಸಾವಿರ ರೂ. ಬೇಕಿದೆ ಎಂದು ಸುಳ್ಳು ಹೇಳಿ ತನ್ನ ಸ್ನೇಹಿತನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.
ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಬೆಂಗಳೂರಿಗೆ ತೆರಳಿದ್ದಾಗ ವಿಧಾನಸೌಧದಲ್ಲಿ ಎನ್. ಮಹೇಶ್ ಮುಖಾಮುಖಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಶಾಸಕ ಎನ್. ಮಹೇಶ್ ಬಳಿ 50 ಸಾವಿರ ರೂ. ವಾಪಸ್ ಕೇಳಿದ್ದಾರೆ.
ಶಾಸಕ ಎನ್. ಮಹೇಶ್ ಆಪ್ತ ಸಹಾಯಕ ಎಂದು ಕರೆ ಮಾಡಿದ್ದರು, 50 ಸಾವಿರ ಹಣ ನೀಡಿದ್ದೇನೆ ಎಂದು ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಅವರ ಆಪ್ತಕಾರ್ಯದರ್ಶಿ ನಾನು ಕೇಳಿಲ್ಲವೆಂದು ತಿಳಿಸಿದ್ದಾರೆ. ಆಗ ಶಾಸಕ ಮಹೇಶ್ ಹೆಸರು ದುರುಪಯೋಗಪಡಿಸಿಕೊಂಡು ವಂಚನೆ ಮಾಡಲಾಗುತ್ತದೆ ಎಂದು ಗೊತ್ತಾಗಿದೆ.
ತಕ್ಷಣ ಶಾಸಕ ಎನ್. ಮಹೇಶ್ ಆಪ್ತ ಕಾರ್ಯದರ್ಶಿ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ಜಾಡು ಹಿಡಿದು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ವಂಚನೆ ಮಾಡುವುದನ್ನೇ ಕಸುಬನ್ನಾಗಿಸಿಕೊಂಡಿದ್ದು, ಕೇವಲ ಶಾಸಕಿ ರೂಪಾಲಿ ನಾಯ್ಕ್ರವರಿಗಲ್ಲದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಹಲವರಿಗೆ ಇದೇ ರೀತಿ ಕರೆಮಾಡಿ ವಂಚಿಸುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ.
ಸಿ.ಟಿ. ರವಿ ಕರೆ ಮಾಡಿದ್ದ ಆರೋಪಿ
Recommended Video
ಆರೋಪಿ ಸಚಿನ್ಗೌಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಗೂ ಕರೆ ಮಾಡಿ, ಶಾಸಕ ಮಹೇಶಣ್ಣ ನಿಮ್ಮ ಬಳಿ 50 ಸಾವಿರ ಹಣ ತುರ್ತಾಗಿ ಕೇಳಿದ್ದಾರೆ ಎಂದಿದ್ದಾನೆ. ಆಗ ಸಿ.ಟಿ. ರವಿ ಶಾಸಕ ಎನ್. ಮಹೇಶ್ ಜೊತೆ ನೇರವಾಗಿ ಮಾತನಾಡುತ್ತೇನೆ ಎಂದು ಹೇಳಿದಾಗ ಕರೆ ಕಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.