ಗುಂಡ್ಲುಪೇಟೆಯಲ್ಲಿ ವಿದ್ಯುತ್ ಕಂಬ ಏರಿ ಹುಲಿಯಿಂದ ಜೀವ ಉಳಿಸಿಕೊಂಡ
ಚಾಮರಾಜನಗರ, ಜುಲೈ 17: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹುಂಡೀಪುರ ಗ್ರಾಮದ ಸಮೀಪದಲ್ಲಿ ಇದ್ದಕ್ಕಿದ್ದಂತೆ ಹುಲಿ ಪ್ರತ್ಯಕ್ಷವಾಗಿದ್ದು, ಹುಲಿ ನೋಡಿ ಬೆದರಿದ ಸವಾರರೊಬ್ಬರು ಬೈಕ್ ಬಿಟ್ಟು ವಿದ್ಯುತ್ ಕಂಬವೇರಿ ಜೀವ ಉಳಿಸಿಕೊಂಡಿದ್ದಾರೆ.
ಗ್ರಾಮದ ಸ್ವಾಮಿ ಎಂಬುವರು ಮಂಗಳವಾರ ಸಂಜೆ ಸುಮಾರು 6.30ರ ವೇಳೆಯಲ್ಲಿ ತಮ್ಮ ಬೈಕ್ ನಲ್ಲಿ ಜಮೀನಿನಿಂದ ಮನೆಗೆ ಹಿಂದಿರುಗುವಾಗ ರಸ್ತೆ ಬದಿಯಲ್ಲಿದ್ದ ಹುಲಿಯನ್ನು ಕಂಡು ಹೆದರಿ ಓಡಿಹೋಗಿ ವಿದ್ಯುತ್ ಕಂಬವೇರಿದ್ದಾರೆ. ಈ ವೇಳೆ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡರೂ ಹುಲಿ ಕದಲದೆ ಅಲ್ಲಿಯೇ ಕುಳಿತಿದ್ದರಿಂದ ಸ್ನೇಹಿತರಿಗೆ ಮೊಬೈಲ್ ನಿಂದ ಕರೆ ಮಾಡಿದ್ದಾರೆ.
ಆರ್ ಎಫ್ ಒ ಮೇಲೆ ದಾಳಿ ನಡೆಸಿದ ಹುಲಿಯ ಸುಳಿವೇ ಇಲ್ಲ
ಈ ವಿಷಯ ತಿಳಿದ ಇತರರು ಸ್ಥಳಕ್ಕೆ ಬಂದರೂ ರಸ್ತೆಯಲ್ಲಿ ಅಡ್ಡಲಾಗಿ ಕುಳಿತಿದ್ದ ಹುಲಿಯನ್ನು ನೋಡಿ ಹೆದರಿ ಓಡಿ ಹೋಗಿ ಅರಣ್ಯ ಇಲಾಖೆಗೆ ಮಾಹಿತಿ ನಿಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಸೈರನ್ ಬಾರಿಸಿ ಹುಲಿಯನ್ನು ಓಡಿಸಿದ್ದಾರೆ. ಬಳಿಕ ವಿದ್ಯುತ್ ಕಂಬದಿಂದ ಬೈಕ್ ಸವಾರ ಕೆಳಗೆ ಇಳಿದು ಬಂದಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹುಲಿಗಳು ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣದಿಂದ ಭಯದಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಚಿತ್ರದುರ್ಗ : ದೊಣ್ಣೆ, ಕಲ್ಲಿನಿಂದ ಹೊಡೆದು ಚಿರತೆ ಹತ್ಯೆ
ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಾಕಿಂಗ್ ಹೋಗಿದ್ದ ಯುವಕರು ಸಮೀಪದ ಪೊದೆಯಿಂದ ಹೊರಬಂದ ಹುಲಿಯನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಇದನ್ನು ನೋಡಿದ ಮೇಲೆ ಜನ ಇನ್ನಷ್ಟು ಭಯಗೊಂಡಿದ್ದಾರೆ. ಒಟ್ಟಾರೆ ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.