ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾಗಲ್ಲ
ಚಾಮರಾಜನಗರ, ಆಗಸ್ಟ್, 03: ಮಲೆ ಮಹದೇಶ್ವರ ವನ್ಯಧಾಮ ಚಾಮರಾಜನಗರ ಜಿಲ್ಲೆಯ ಮೂರನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಸಚಿವ ವಿ. ಸೋಮಣ್ಣ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಬೇಡ ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿದ ಸಚಿವರು, "ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಕಾಡಂಚಿನ ಗ್ರಾಮಗಳಿಗೆ ಅನಾನುಕೂಲ ಆಗಲಿದೆ. ಯಾವುದೇ ಯೋಜನೆಗಳು ಜನರಿಗೆ ಅನಾನುಕೂಲ ಆಗಬಾರದು. ಆದ್ದರಿಂದ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲ್ಲ" ಎಂದರು.
ವಿಶ್ವ ಹುಲಿ ದಿನ: 'ಮಾನ್ಯ' ಹುಲಿ ದತ್ತು ಪಡೆದ ಸಚಿವ ಮುರುಗೇಶ ನಿರಾಣಿ
"ಹುಲಿ ಸಂರಕ್ಷಿತ ಪ್ರದೇಶವಾದರೇ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೂ ಬರಲು ತೊಂದರೆಯಾಗುತ್ತದೆ. ಜಾನುವಾರುಗಳಿಗೂ ತೊಂದರೆ ಆಗಲಿದೆ, ಆದ್ದರಿಂದ ಹುಲಿ ಸಂರಕ್ಷಿತ ಪ್ರದೇಶ ಮಾಡುವುದು ಬೇಡ" ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಲಿಗಳು ಅವಾಸ ಹೆಚ್ಚಿಸಿಕೊಳ್ಳಲು ಸಹಾಯಕ ಎಂಬುದು ಪರಿಸರವಾದಿಗಳ ಅಭಿಮತವಾಗಿದೆ. ಆದರೆ ಸ್ಥಳೀಯರು ಹುಲಿ ಸಂರಕ್ಷಿತ ಪ್ರದೇಶ ಮಾಡಲು ವಿರೋಧ ವ್ಯಕ್ತಪಡಿಸಿದ್ದರು, ಸೋಲಿಗರು ಪ್ರತಿಭಟನೆಯನ್ನೂ ನಡೆಸಿದ್ದರು.
ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಎಲ್ಲಾ ತಯಾರಿ ನಡೆದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ ಘೋಷಿಸುವುದು ಮಾತ್ರ ಬಾಕಿ ಇತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವರೇ ಇದಕ್ಕೆ ನಿರಾಕರಿಸಿರುವುದರಿಂದ ಮಲೆಮಹದೇಶ್ವರ ವನ್ಯಧಾಮ ಸಂರಕ್ಷಿತ ಪ್ರದೇಶ ಆಗುವುದು ದೂರದ ಮಾತಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೆಮಹದೇಶ್ವರ ವನ್ಯಧಾಮವೂ ಕೆಲವೇ ದಿನಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲು ಎಲ್ಲಾ ತಯಾರಿಗಳು ನಡೆದಿದ್ದವು. ಇದೀಗ ಇದಕ್ಕೆ ಸಚಿವ ವಿ. ಸೋಮಣ್ಣ ಹಿಂದೇಟು ಹಾಕಿರುವುದು ಪರಿಸರ ಪ್ರೇಮಿಗಳಿಗೆ ನಿರಾಸೆ ಮೂಡಿಸಿದಂತಾಗಿದೆ.