ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ
ಚಾಮರಾಜನಗರ, ಸೆಪ್ಟೆಂಬರ್ 22; ಕರ್ನಾಟಕದಲ್ಲಿ ಮತ್ತೊಂದು ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ತಯಾರಿ ನಡೆದಿದೆ. ಕರ್ನಾಟಕ ಸರ್ಕಾರ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.
ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆ ಈ ಕುರಿತು ಅಧಿಕೃತ ಘೋಷಣೆ ಮಾಡಲು ತಯಾರಿ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಹುಲಿ ಸಂತತಿ ಹೆಚ್ಚಳ; ಸಮೀಕ್ಷೆ ಪ್ರಾಥಮಿಕ ವರದಿ ಮಾಹಿತಿ...
ಪ್ರಸ್ತುತ ಮಲೆ ಮಹದೇಶ್ವರ ವನ್ಯಧಾಮದಲ್ಲಿ 18 ರಿಂದ 24 ಹುಲಿಗಳಿವೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಕಳೆದ ವರ್ಷವೇ ಅಗತ್ಯ ದಾಖಲೆಗಳನ್ನು ಪರಿಶೀಲನೆ ಮಾಡಿ ಒಪ್ಪಿಗೆ ಕೊಟ್ಟಿದೆ.
ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ 18 ಕಂದಾಯ ಗ್ರಾಮಗಳಿವೆ. ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಹ ಇದೇ ವನ್ಯಧಾಮದಲ್ಲಿ ಹಾದು ಹೋಗುತ್ತದೆ.
ಅಂತಾರಾಷ್ಟ್ರೀಯ ಹುಲಿ ದಿನ: ಇತಿಹಾಸ, ಮಹತ್ವ, ಘೋಷಣೆಗಳು
ವನ್ಯಧಾಮದ ವ್ಯಾಪ್ತಿಯಲ್ಲಿ ಈಗಾಗಲೇ ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧವಿದೆ. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ ಸ್ಥಳೀಯರು ಮತ್ತು ಮೂಲ ನಿವಾಸಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವರ ಹಕ್ಕುಗಳು ಮತ್ತು ಸೌಲಭ್ಯಗಳು ಎಂದಿನಂತೆ ಇರಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
2013ರಲ್ಲಿ ಘೋಷಣೆ; 2013ರಲ್ಲಿ ಮಹದೇಶ್ವರ ಬೆಟ್ಟ, ಹನೂರು, ಯಡೆಯಾರಳ್ಳಿ ರಕ್ಷಿತ ಅರಣ್ಯವನ್ನು ಒಗ್ಗೂಡಿಸಿ 906 ಚದರ ಕಿ. ಮೀ. ವಿಸ್ತೀರ್ಣದ ಮಲೆ ಮಹದೇಶ್ವರ ವನ್ಯಧಾಮ ಎಂದು ಘೋಷಣೆ ಮಾಡಲಾಯಿತು.
ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ
2018ರಲ್ಲಿ ರಾಜ್ಯದಲ್ಲಿ ನಡೆದ ಹುಲಿ ಗಣತಿ ವೇಳೆ ಈ ಪ್ರದೇಶದಲ್ಲಿ 18 ರಿಂದ 20 ಹುಲಿಗಳಿವೆ ಎಂಬುದು ತಿಳಿದು ಬಂದಿತ್ತು. ಕರ್ನಾಟಕ ಸರ್ಕಾರ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಲವು ಸ್ಪಷ್ಟನೆಗಳನ್ನು ಕೇಳಿದ್ದ ಪ್ರಾಧಿಕಾರ ಬಳಿಕ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಒಪ್ಪಿಗೆ ಕೊಟ್ಟಿತು.
ಮಲೆ ಮಹದೇಶ್ವರ ವನ್ಯಧಾಮದ ಉತ್ತರಕ್ಕೆ ಕಾವೇರಿ ವನ್ಯಧಾಮ, ದಕ್ಷಿಣಕ್ಕೆ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ, ಪೂರ್ವಕ್ಕೆ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶಗಳಿವೆ. ಪ್ರಸ್ತುತ ಇಲ್ಲಿ 18 ರಿಂದ 24 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಪ್ರದೇಶ ಹುಲಿಗಳ ವಾಸಕ್ಕೆ ಯೋಗ್ಯವಾಗಿದೆ.
ಈಗಾಗಲೇ ಕರ್ನಾಟಕದಲ್ಲಿ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಚಾಮರಾಜನಗರ ಜಿಲ್ಲೆಯಲ್ಲಿಯೇ ಎರಡು ಹುಲಿ ಸಂರಕ್ಷಿತ ಪ್ರದೇಶವಿದೆ. ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದರೆ ಚಾಮರಾಜನಗರ ಜಲ್ಲೆಯ 3ನೇ ಹಾಗೂ ರಾಜ್ಯದ 6ನೇ ಹುಲಿ ಸಂರಕ್ಷಿತ ಪ್ರದೇಶವಾಗಲಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲು ಒಪ್ಪಿಗೆ ನೀಡಲು ಮೊದಲು ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ವ್ಯಾಪ್ತಿಯಲ್ಲಿರುವ ಗ್ರಾಮ, ಜನವಸತಿ ಪ್ರದೇಶಗಳು, ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರಗಳು, ಬಫರ್ ವಲಯಗಳನ್ನು ಸ್ಪಷ್ಟವಾಗಿ ಗುರಿತಿಸುವಂತೆ ಕೇಳಿತ್ತು. ಕರ್ನಾಟಕ ಸರ್ಕಾರ ಈ ಕುರಿತು ಸ್ಪಷ್ಟವಾದ ಗುರುತುಗಳನ್ನು ಮಾಡಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು.
ಭಾರತದಲ್ಲಿ 50 ಹುಲಿ ಸಂರಕ್ಷಿತ ಅಭಯಾರಣ್ಯಗಳು ಇವೆ. 2020ರ ಜುಲೈ ಮಾಹಿತಿಯಂತೆ ಮಧ್ಯಪ್ರದೇಶದಲ್ಲಿ 526 ಹುಲಿಗಳಿವೆ. ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದ್ದು 524 ಹುಲಿಗಳಿವೆ. ಉತ್ತರಾಖಂಡ್ ರಾಜ್ಯ 3ನೇ ಸ್ಥಾನದಲ್ಲಿದ್ದು, ಅಲ್ಲಿ 442 ಹುಲಿಗಳಿವೆ.
Recommended Video
ನಾಗರಹೊಳೆ ಪ್ರದೇಶದಲ್ಲಿ 127 ಮತ್ತು ಬಂಡೀಪುರ ಪ್ರದೇಶದಲ್ಲಿ 126 ಹುಲಿಗಳಿವೆ. ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ 70ರಷ್ಟು ಹುಲಿಗಳು ನಮ್ಮದೇಶದಲ್ಲಿಯೇ ಇವೆ. ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 2010ರ ಜುಲೈ 29ರಂದು ಮೊದಲ ಬಾರಿಗೆ ಅಂತರಾಷ್ಟ್ರೀಯ ಹುಲಿ ದಿನವನ್ನು ಆಚರಣೆ ಮಾಡಲಾಯಿತು.