ಚಾಮರಾಜನಗರ: ಮಲೆಮಹದೇಶ್ವರನಿಗಿಲ್ಲ ಸೂರ್ಯ ಗ್ರಹಣದ ಸೂತಕ
ಚಾಮರಾಜನಗರ, ಜೂನ್, 21: ಭಾನುವಾರ ಸೂರ್ಯಗ್ರಹಣ ಹಾಗೂ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತವಾಗಿ ಮಲೆಮಹದೇಶ್ವರಿನಿಗೆ ವಿಶೇಷ ಪೂಜೆ ಮಾಡಲಾಯಿತು. ಮಾದಪ್ಪನಿಗೆ ಸೂರ್ಯಗ್ರಹಣದ ಯಾವುದೇ ಪರಿಣಾಮ ಇಲ್ಲದೆ, ಎಂದಿನಂತೆ ಪೂಜಾ ಕಾರ್ಯ ನೆರವೇರಿಸಲಾಯಿತು.
Recommended Video
ಆದರೆ ಅಮಾವಾಸ್ಯೆ ದಿನಗಳಂದು ಹರಿದು ಬರುವ ಜನಸಾಗರಕ್ಕೆ ಚಾಮರಾಜನಗರ ಜಿಲ್ಲಾಡಳಿತವು ಬ್ರೇಕ್ ಹಾಕಿದ್ದು, ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿದೆ.
ಮೂರು ದಿನಗಳ ಕಾಲ ಭಕ್ತರಿಗಿಲ್ಲ ಮಲೆ ಮಹದೇವನ ದರ್ಶನ
ಭಾನುವಾರ ಸಂಜೆ 4 ಗಂಟೆಯ ನಂತರ ಸಾಂಪ್ರದಾಯಿಕ ಪೂಜೆ ಆರಂಭವಾಗಲಿದೆ. ಭಕ್ತರಿಗೆ ಪ್ರವೇಶ ನಿರ್ಬಂಧ ಹಿನ್ನೆಲೆಯಲ್ಲಿ ಹನೂರು ತಾಲ್ಲೂಕಿನ ಮಲೆಮಹದೇಶ್ವರನ ದೇವಸ್ಥಾನ ಬಿಕೋ ಎನ್ನುತ್ತಿದೆ.
ಅದೇ ರೀತಿ ರಾಯಚೂರಿನ ಸೂಗುರೇಶ್ವರಿನಿಗೆ ಸೂರ್ಯಗ್ರಹಣದ ಎಫೆಕ್ಟ್ ತಾಕಲಿಲ್ಲ. ಗ್ರಹಣದ ಸಮಯದಲ್ಲೂ ತ್ರಿಕಾಲ ಪೂಜೆ ನಡೆಯಿತು. ರುದ್ರಾಭಿಷೇಕ, ಮಹಾ ಮಂಗಳಾರತಿ, ಬಿಲ್ವಾರ್ಚನೆ ಸೇರಿದಂತೆ ಇತರೆ ಪೂಜೆಗಳು ಇಲ್ಲಿ ನಡೆದವು.
ರಾಯಚೂರು ಜಿಲ್ಲೆಯ ದೇವಸೂಗುರು ಗ್ರಾಮದ ಪ್ರಸಿದ್ಧ ಸೂಗುರೇಶ್ವರ ದೇವಸ್ಥಾನದ ನಿರ್ಮಾಣದಲ್ಲಿ ವಿಶಿಷ್ಟತೆ ಇದ್ದು, ದೇವಸ್ಥಾನದಲ್ಲಿರುವ ಹಾಲುಗಂಬದಿಂದ ಗ್ರಹಣ ದೋಷ ನಿವಾರಣೆಯಾಗಲಿದೆ.
ದೇವಸ್ಥಾನ ಗೋಡೆ ನಿರ್ಮಾಣದಲ್ಲಿ ಸೂರ್ಯ, ಚಂದ್ರರನ್ನು ಕೆತ್ತನೆ ಮಾಡಲಾಗಿದ್ದು, ಇದರಿಂದ ಯಾವುದೇ ಗ್ರಹಣದ ಸಮಯದಲ್ಲಿ ದೋಷ ಕಂಡು ಬರುವುದಿಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಸೂಗುರೇಶ್ವರ ದೇವಸ್ಥಾನಕ್ಕೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಭಕ್ತರು ಹರಿದು ಬರುತ್ತಾರೆ.