ಕೋಟ್ಯಧಿಪತಿಯಾಗೇ ಮುಂದುವರೆದ ಮಲೆಮಹದೇಶ್ವರ
ಚಾಮರಾಜನಗರ, ನವೆಂಬರ್ 23: ರಾಜ್ಯದ ಎರಡನೇ ಅತಿ ಹೆಚ್ಚು ಆದಾಯ ತರುವ ಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆಯನ್ನು ಶನಿವಾರ ನಡೆಸಲಾಗಿದ್ದು, 1,71,14,219 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಆ ಮೂಲಕ ಮಹದೇಶ್ವರ ಕೋಟ್ಯಧಿಪತಿಯಾಗಿಯೇ ಮುಂದುವರೆದಿದ್ದಾನೆ.
ಒಂದೇ ತಿಂಗಳಲ್ಲಿ ಕೋಟಿ ದಾಟಿದೆ ಮಲೆಮಹದೇಶ್ವರನ ಆದಾಯ
ಇದು ಶ್ರೀಕ್ಷೇತ್ರದಲ್ಲಿ ನಡೆಯುವ ದೀಪಾವಳಿ ಜಾತ್ರೆಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಗ್ರಹವಾಗಿರುವ ಕಾಣಿಕೆಯಾಗಿದೆ. ಹಿಂದೆ ಶಿವರಾತ್ರಿ ಜಾತ್ರೆಯಲ್ಲಿ 2 ಕೋಟಿ ರೂ., ಯುಗಾದಿ ಜಾತ್ರೆಯಲ್ಲಿ 1.95 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು. ಆದರೆ ದೀಪಾವಳಿ ಅಮಾವಾಸ್ಯೆಗೆ ಇದುವರೆಗೆ ಇಷ್ಟೊಂದು ಕಾಣಿಕೆ ಸಂಗ್ರಹವಾಗಿರಲಿಲ್ಲ. ಹೀಗಾಗಿ ಇದುವರೆಗಿನ ದೀಪಾವಳಿ ಜಾತ್ರೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಧಿಕ ಕಾಣಿಕೆ ಸಂಗ್ರಹ ಮೊತ್ತವಾಗಿದೆ ಎಂದು ಹೇಳಲಾಗಿದೆ.
ಕಾಣಿಕೆ ಡಬ್ಬಿಯಲ್ಲಿ ನಗದು ಹಣದೊಂದಿಗೆ 45 ಗ್ರಾಂ ಚಿನ್ನ, 2.6 ಕೆಜಿ ಬೆಳ್ಳಿಯೂ ಕಾಣಿಕೆ ರೂಪದಲ್ಲಿ ಮಲೆಮಹದೇಶ್ವರನಿಗೆ ಭಕ್ತರು ಅರ್ಪಿಸಿದ್ದಾರೆ. ಹುಂಡಿ ಎಣಿಕೆಯು ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬಿಗಿ ಬಂದೋಬಸ್ತ್ ನೊಂದಿಗೆ ಸಾಲೂರು ಮಠದ ಹಿರಿಯ ಶ್ರೀಗಳ ನೇತೃತ್ವದಲ್ಲಿ ನಡೆಯಿತು.